ಎಳೆಚಿಗುರು ಮೊಗ್ಗುಗಳಾಗಿರುವಾಗಲೇ ಒಸಕಿ ಹೋಗುತ್ತಿವೆ ಎಂದರೆ ಏನರ್ಥ?

2 years ago

ಜನಪರ ಚಳುವಳಿಗಳ ಒಡನಾಡಿ, ಲೇಖಕಿ ಕೆ.ಆರ್.ಸೌಮ್ಯಾ ಅವರ ಮಗಳು ಪ್ರಬುದ್ಧ್ಯಾ (21) ಎರಡನೇ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಯಾರೋ ಪಾತಕಿಗಳು ಬರ್ಬರವಾಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆಂದು ಗೆಳೆಯ ಜಿಗಣಿ ರಾಮಕೃಷ್ಣ HosabelakuTrust Jigani Ramakrishna ಅವರು ಬೆಳಗ್ಗೆ ನನಗೆ ತಿಳಿಸಿದಾಗ ನನ್ನ ಜಂಘಾಬಲವೇ ಕಳೆದು ಹೋದಂತಾಯಿತು. ಇಂದು ಸಂಜೆ ನಾನು, ನನ್ನ ಸಾಮಾಜಿಕ ಹೋರಾಟದ ಗೆಳೆಯರಾದ ಡಾ.ಎ.ಆರ್.ಗೋವಿಂದಸ್ವಾಮಿ Govinda Swamy Ammanapura ಹಾಗೂ ಚೆ.ಬಾಲು Che Balu  ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಸೌಮ್ಯಾರ ಮನೆಗೆ ಭೇಟಿ ನೀಡಿದೆವು.

ಸೌಮ್ಯಾ ಅವರ ಬಾಡಿದ ಮುಖದಲ್ಲಿ ಕಣ್ಣುಗಳು ಅತ್ತೂ ಅತ್ತೂ ಕಣ್ಣೀರನ್ನು ಸುರಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದವು.   ಸೌಮ್ಯಾ ಹೇಳುವಂತೆ ಪ್ರಬುದ್ಧ್ಯಾಳದ್ದು ಅನುಮಾನಾಸ್ಪದ ಕೊಲೆ. ಕತ್ತು ಕೊಯ್ದು ಶವವಾಗಿ ಬಿದ್ದಿರುವ ಮಗಳನ್ನು ನೋಡಿದಾಗ, ಮೃಧು ಸ್ವಭಾವದ ಮಗಳು ಈ ರೀತಿಯಲ್ಲಿ ಹತ್ಯೇಗಿಡಾಗಿದ್ದಾಳೆಂದು ತಾಯಿಗೆ ನಂಬಲು ಸಾಧ್ಯವೇ ಆಗಲಿಲ್ಲ.

ಹೋರಾಟಗಾರ್ತಿಯ ಕುಟುಂಬದ ಹೆಣ್ಣುಮಗಳೇ ಹತ್ಯೆಯಾಗುತ್ತಾಳೆಂದರೆ ತೀರಾ ಸಾಮಾನ್ಯ ಕುಟುಂಬಗಳ ಹೆಣ್ಣುಮಕ್ಕಳ ಪಾಡೇನು ? ಇದೇ ಪ್ರಶ್ನೆ ನನ್ನೊಳಗೆ ಹೆಣ್ಣುಮಕ್ಕಳ ಕುರಿತಾದ ಸಂಕಟವನ್ನು ತೀವ್ರಗೊಳಿಸಿ ಗಂಡು ಜನ್ಮವನ್ನೇ ದಹಿಸುವಂತೆ ಬಾಧೆಗೀಡುಮಾಡಿದೆ. ಸೌಮ್ಯಾ ಅವರ ಜೊತೆಯಲ್ಲಿ ನಾವೆಲ್ಲರೂ ನಿಲ್ಲಬೇಕಿದೆ.

ಕತ್ತು ಕೊಯ್ದು ಹತ್ಯೆ ಮಾಡುವಷ್ಟು ವ್ಯಕ್ತಿಯೊಬ್ಬ ಕಟುಕನಾಗುತ್ತಾನೆಂದರೆ ಅಥವಾ ಹತ್ಯೆಯನ್ನು ನೋಡಿಯೂ ಪ್ರತಿಕ್ರಿಯಿಸದಷ್ಟು ನಮ್ಮ ಜನ ಸಂವೇದನಾ ರಹಿತನಾಗುತ್ತಾರೆಂದರೆ ಏನರ್ಥ ? ಪಾತಕತನ ಮತ್ತು ಹಿಂಸೆಯನ್ನು ವೈಭವಿಕರಿಸುವ ಸಿನಿಮಾ- ಧಾರಾವಾಹಿಗಳು- ಸಾಮಾಜಿಕ ಜಾಲತಾಣ ನಮ್ಮ ಯುವಜನರ ಆಲೋಚನೆಗಳ ದಿಕ್ಕನ್ನೇ ಬದಲಿಸಿವೆ. ಕೊಲೆ, ಸುಲಿಗೆ, ಕ್ರೌರ್ಯ, ಹಿಂಸೆ, ಭ್ರಷ್ಟಾಚಾರ ಮುಂತಾದವುಗಳನ್ನು ಸಹಜ ಪ್ರಕ್ರಿಯೆಗಳೆಂದು ಇಂದಿನ ಸಮಾಜ ಭಾವಿಸಿದಂತಿದೆ. ಭೋಗದ ಸರಕಿನಂತೆ ಹೆಣ್ಣುಮಕ್ಕಳನ್ನು ಕಾಣುವ ಪುರುಷ ಧೋರಣೆ ಬಲಗೊಳ್ಳುತ್ತಿದೆ. ಅರಳಿ ಹೂವಾಗಿ ಪರಿಮಳ ಬೀರಬೇಕಾದ ಪ್ರತಿಭೆಗಳು, ಎಳೆಚಿಗುರು ಮೊಗ್ಗುಗಳಾಗಿರುವಾಗಲೇ ಒಸಕಿ ಹೋಗುತ್ತಿವೆ ಎಂದರೆ ಏನರ್ಥ?

– ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ

Leave a Reply