ಬಳ್ಳಾರಿ: ಹೆರಿಗೆಯಾದ ಒಂದೇ ಗಂಟೆಯೊಳಗೆ ನವಜಾತ ಶಿಶುವಿಗೆ ತಾಯಿಯ ಎದೆಹಾಲು ನೀಡುವುದು ಅತ್ಯಗತ್ಯ. ಮಗು ಜನಿಸಿದ ಮೊದಲ ಆರು ತಿಂಗಳವರೆಗೆ ಎದೆಹಾಲನ್ನು ಹೊರತುಪಡಿಸಿ ನೀರು ಸೇರಿದಂತೆ ಯಾವುದೇ ದ್ರವ ಪದಾರ್ಥವನ್ನು ನೀಡಬಾರದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ತಿಳಿಸಿದರು.
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
- ಮ್ಯಾಥ್ಎರಾ ಟೆಕ್ ಪ್ರೈವೇಟ್ ಲಿಮಿಟೆಡ್ ನಿಂದ ಪದವೀಧರರಿಗೆ ಉದ್ಯೋಗಾವಕಾಶ
ಬೀರಪ್ಪ ಮಠದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಸ್ತನ್ಯಪಾನ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಪೋಷಣೆಗೆ ಎದೆಹಾಲೇ ಸಂಜೀವಿನಿ:
ರೋಗ ನಿರೋಧಕ ಶಕ್ತಿ: ಎದೆಹಾಲು ಮಗುವಿಗೆ ಅತ್ಯುತ್ತಮ ಪೌಷ್ಟಿಕ ಆಹಾರವಾಗಿದ್ದು, ಅತಿಸಾರ ಮತ್ತು ವಿವಿಧ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.
ಆಹಾರ ಕ್ರಮ:
0 – 6 ತಿಂಗಳು: ಕೇವಲ ತಾಯಿಯ ಎದೆಹಾಲು ಮಾತ್ರ.
6 ತಿಂಗಳಿಂದ 1 ವರ್ಷ: ಎದೆಹಾಲಿನ ಜೊತೆಗೆ ಮನೆಯಲ್ಲಿ ತಯಾರಿಸಿದ ಗಂಜಿ ಮತ್ತು ಪೂರಕ ಆಹಾರ.
1 ರಿಂದ 2 ವರ್ಷ: ಎದೆಹಾಲಿನೊಂದಿಗೆ ಮೃದುವಾದ ಘನ ಆಹಾರ.
ತಾಯಿಯ ಆರೋಗ್ಯಕ್ಕೂ ಸೈ: ಸ್ತನ್ಯಪಾನದಿಂದ ತಾಯಂದಿರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ ಹಾಗೂ ಮುಂದಿನ ಗರ್ಭಧಾರಣೆ ಸ್ವಾಭಾವಿಕವಾಗಿ ಮುಂದೂಡಲ್ಪಡುತ್ತದೆ.
‘ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ: ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ’ ಎಂಬುದು ಈ ವರ್ಷದ ಘೋಷ್ಯವಾಕ್ಯವಾಗಿದ್ದು, ಮಗುವಿನ ದೈಹಿಕ-ಮಾನಸಿಕ ಬೆಳವಣಿಗೆಗೆ ಸ್ತನ್ಯಪಾನವೇ ಭದ್ರ ಬುನಾದಿ ಎಂದು ಶಿವಾನಂದ ವಿ.ಪಿ ಪ್ರತಿಪಾದಿಸಿದರು.
ತಪ್ಪು ಕಲ್ಪನೆಗಳಿಗೆ ಕಿವಿಗೊಡಬೇಡಿ: ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಎಸ್. ಕರ್ಜಗಿ, ಎದೆ ಹಾಲುಣಿಸುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬುದು ಮೂಢನಂಬಿಕೆ. ಗರ್ಭಿಣಿಯರು ಅಯೋಡಿನ್ಯುಕ್ತ ಉಪ್ಪು ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು. ಮಗುವಿಗೆ 12 ಮಾರಕ ರೋಗಗಳ ವಿರುದ್ಧ ನೀಡಲಾಗುವ ಎಲ್ಲಾ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಿಮ್ರಾನ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಮಹಾಂಕಾಳಿ, ಶೋಭಾ ವಿ., ಹನುಮಂತಮ್ಮ, ಶಾಲಾ ಶಿಕ್ಷಕಿ ನಜ್ಮಾಭಾನು, ಅಂಗನವಾಡಿ ಕಾರ್ಯಕರ್ತೆ ಮಹಾಲಕ್ಷ್ಮಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.



