ದಾರ್ಶನಿಕರ, ಶರಣರ ಸಂದೇಶ ಮತ್ತು ಅವರ ತತ್ವಗಳನ್ನು ಮಕ್ಕಳಿಗೆ ತಿಳಿಸಬೇಕು: ಶಾಕೀರ್ ಸನದಿ

1 year ago

ಧಾರವಾಡ: ನಾಡಿನಲ್ಲಿ ಆಗಿಹೋಗಿರುವ ದಾರ್ಶನಿಕರ, ಶರಣರ ಸಂದೇಶ ಮತ್ತು ತತ್ವಗಳನ್ನು ಪಾಲಕರು ಹಾಗೂ ಹಿರಿಯರು ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಬಗ್ಗೆ ಎಲ್ಲ ತಾಯಂದಿರು ಮಕ್ಕಳಿಗೆ ಮನೆಯಲ್ಲಿ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿಸಬೇಕು ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಶ್ರೀ ಯೋಗಿನಾರೇಯಣ ಯತೀಂದ್ರರ ಅವರು ಸುಮಾರು 17 ನೇ ಶತಮಾನದಲ್ಲಿ ಜನಿಸಿದವರು. ಕನ್ನಡ, ಸಂಸ್ಕøತ ಭಾಷೆ ಅಲ್ಲದೆ, ಹಲವಾರು ಭಾಷೆಗಳನ್ನು ಬಲವರಾಗಿದ್ದರು. ಅದರಿಂದಾಗಿ ಅಪಾರ ಜ್ಞಾನವನ್ನು ಪಡೆದುಕೊಂಡಿದರು. ಸಮಾಜಕ್ಕೆ ಹಲವಾರು ಕೊಡುಗೆಯನ್ನು ನೀಡಿದವರು ಯೋಗಿನಾರೇಯಣ ಯತೀಂದ್ರರವರು. ಒಂದೇ ಸಮಾಜಕ್ಕೆ ಸೀಮಿತವಾಗದೆ, ಧರ್ಮ ಜಾತಿಯನ್ನು ಮೀರಿ ಮಾನವನ ಜಾತಿಗೆ ಒಳಿತು ಮಾಡುವಲ್ಲಿ ಯೋಗಿ ನಾರಾಯಣರು ಶ್ರಮಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಪ್ರತಿಯೊಂದು ಸಮುದಾಯದಲ್ಲಿ ಒಬ್ಬ ಧಾರ್ಮಿಕ, ದಾರ್ಶನಿಕ ಪವಾಡ ಪುರುಷ ಇದ್ದಾರೆ. ದಾರ್ಶನಿಕರ ದಿನಾಚರಣೆಯನ್ನು ನಾವು ಮಾಡಬೇಕು, ಏಕೆಂದರೆ ನಮ್ಮನ್ನೆಲ್ಲ ಮುಂದೆ ನಡೆಸುವ ದಾರ್ಶನಿಕರ ಗುಣ ಮತ್ತು ತತ್ವಗಳು ಎಲ್ಲರ ಮನಸ್ಸಿಗೆ ಬೇಗನೆ ತಟ್ಟುತ್ತವೆ. ಮತ್ತು ನಾವು ಬೆಳೆದು ಬಂದ ವಾತಾವರಣ ನಮ್ಮ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದರು.

ನೂರಾರು ದೇವರುಗಳು ಇದ್ದಾರೆ, ನೂರಾರು ಪವಾಡ ಪುರುಷರು ಇದ್ದಾರೆ, ಆದರೆ ನಮ್ಮ ಮನಸ್ಸಿಗೆ ಇಷ್ಟಪಡುವ ದೇವರು ಅಥವಾ ದಾರ್ಶನಿಕರು ಯಾರು ಅಂದರೆ ನಮ್ಮ ಮನೆಯಲ್ಲಿ ಇರುವಂತಹ ನಮ್ಮ ತಂದೆ ತಾಯಿಗಳು ಆಗಿದ್ದಾರೆ ಎಂದರು.

ಧಾರವಾಡ ಬಲಿಜ ಸಮಾಜ ಉಪಾಧ್ಯಕ್ಷ ನಾಗರಾಜ ಶಿಗ್ಗಾಂವ ಅವರು ಶ್ರೀ ಯೋಗಿನಾರೇಯಣ ಯತೀಂದ್ರರ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸ್ಯೆಯದ್ ಅಹಮದ ಕಲಘಟಗಿ, ಬಲಿಜ ಸಮಾಜ ಅಧ್ಯಕ್ಷ ಪ್ರಶಾಂತ ಕುಮಾರ ನಾಯ್ಡು, ಆರ್.ಎಚ್. ಪ್ರಭಾಕರ ನಾಯ್ಡು, ಸಮಾಜದ ಹಿರಿಯ ಮುಖಂಡ ಮತ್ತು ಸಮಾಜದ ಮಾಜಿ ಪ್ರಧಾನ ಕಾರ್ಯದರ್ಶಿ ದಿನೇಶ ರೆಡ್ಡಿ ಮೊದಲಾದವರು ಹಾಜರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಮುದಾಯದ ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply