ಕಾಡುವ ಕಿರಂ ಎಂದೆಂದಿಗೂ ಮರೆಯಾಗದೇ ಕಾಡುವ ಅಪೂರ್ವ ಕಾರ್ಯಕ್ರಮ

2 years ago

ಕಾಡುವ ಕಿರಂ ಎಂದೆಂದಿಗೂ ನನ್ನ ನೆನಪಿನಂಗಳದಲ್ಲಿ ಇದ್ದು ಮರೆಯಾಗದೇ ಕಾಡುವ ಅಪೂರ್ವ ಕಾರ್ಯಕ್ರಮ

ಕಾಡುವ ಕಿರಂ ಕಾರ್ಯಕ್ರಮದ ಹೆಸರೇ ಸೂಚಿಸುವಂತೆ ಎಂದೆಂದಿಗೂ ನನ್ನ ನೆನಪಿನಂಗಳದಲ್ಲಿ ಇದ್ದು ಮರೆಯಾಗದೇ ಕಾಡುವಂತಹ ಒಂದು ಅಪೂರ್ವ ಕಾರ್ಯಕ್ರಮ.

ನನ್ನ ಫೇಸ್ಬುಕ್ ಮಿತ್ರರಾದ ನಾರಾಯಣ ಸ್ವಾಮಿ ವಕೀಲರು ಹಾಗೂ ಆತ್ಮೀಯ ಸ್ನೇಹಿತೆ ಸರ್ವಮಂಗಳಾರವರು ಈ ಕಾರ್ಯಕ್ರಮದ ಬಗ್ಗೆ ತಿಳಿಸಿದಾಗ ಏನಿದು ಕಾಡುವ ಕಿರಂ? ಯಾರಿವರು ಕಿರಂ? ಎನ್ನುವ ಪ್ರಶ್ನೆಗಳು ನನ್ನ ಮನವನ್ನು ಕಾಡಿತು. ಈಗ ತಕ್ಷಣಕ್ಕೆ ನಾವು ಸರ್ವೇ ಸಾಮಾನ್ಯವಾಗಿ ಯಾವ ವಿಷಯವನ್ನು ಹುಡುಕುವುದಿದ್ದರೂ ಗೂಗಲ್ ಗೆಳೆಯನನ್ನು ಆಶ್ರಯಿಸುತ್ತೇವೆ. ಹಾಗೆಯೇ ನಾನು ತಡಕಾಡಿದಾಗ ಸಿಕ್ಕಿದ್ದು ಕಿರಂ ಹೆಸರಿನ ಒಂದು ಮಹಾ ಸಾಗರ. ಅವರು ನಾನು ಹುಟ್ಟಿಬೆಳೆದ ತಾಲ್ಲೂಕಿನ ಹಾಸನ ಜಿಲ್ಲೆಯವರು ಎಂದು ತಿಳಿದಾಗ ನನ್ನ ಅರಿವು ಒಂದು ಸಣ್ಣ ಅಣುವಿಗಿಂತಲೂ ಕಡಿಮೆ ಎನಿಸಿತು.

ಕಿರಂ ರವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡಿಗರ ಅರಿವಿನ ಬಾಗಿಲು ತೆರೆಸಿದಂತಹ ಗುರು ಎಂಬುದು ಕಿರಂ ಬಳಗ ಹಮ್ಮಿಕೊಂಡಿದ್ದ ನಿನ್ನೆಯ ಅಹೋರಾತ್ರಿ ಕಾರ್ಯಕ್ರಮದಲ್ಲಿ ನಾನು ಗೆಳತಿಯೊಂದಿಗೆ ಪಾಲ್ಗೊಂಡಾಗ ತಿಳಿಯಿತು.
ಈ ಅಹೋರಾತ್ರಿಯ ಕಾರ್ಯಕ್ರಮವು ನನ್ನ ಜೀವನದಲ್ಲಿ ಅವಿಸ್ಮರಣೀಯವಾಗಿ ನನ್ನ ಚಿತ್ತದಲ್ಲಿ ಉಳಿದು ಸದಾ ನನ್ನನ್ನು ಕಾಡದೇ ಇರದು.

ಬಹಳ ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಯಾವುದೇ ಬೇಧಭಾವವಿಲ್ಲದೇ ಹಿರಿಯ ಕಿರಿಯರು ಎನ್ನದೇ, ಹಳಬರು ಹೊಸಬರು ಎನ್ನುವ ತೆಳು ಪರದೆ ಇಲ್ಲದೇ, ಎಲ್ಲರೂ ಸಮಾನರು ಎನ್ನುವ ಸಮಭಾವವನ್ನು ಮೂಡಿಸಿದಂತಹ ಕಾರ್ಯಕ್ರಮವಿದು. ಐದು ಸುತ್ತಿನ ಕವಿಗೋಷ್ಠಿಯಲ್ಲಿ ಪ್ರತಿಯೊಂದು ಆವೃತ್ತಿಯಲ್ಲೂ ಪ್ರತಿಯೊಬ್ಬರ ಕವನ ವಾಚನದ ಪ್ರಾರಂಭದಿಂದ ಹಿಡಿದು ಎಲ್ಲರ ವಾಚನ ಮುಗಿಸಿ ಪ್ರಮಾಣ ಪತ್ರಗಳನ್ನು ಪಡೆಯುವವರೆಗೂ ವೇದಿಕೆಯ ಮೇಲೆ ಎಲ್ಲಾ ಕವಿಗಳನ್ನೂ ಕುಳ್ಳಿರಿಸಿ ಗೌರವಿಸಿದ್ದು ನಿಜಕ್ಕೂ ಅವಿಸ್ಮರಣೀಯ.

ನಾನು ಭಾಗವಹಿಸಿದ ಅಪರೂಪದ ಅತ್ಯಂತ ಅಪೂರ್ವವಾದ ಅನುಕರಣೀಯ ಕವಿಗೋಷ್ಠಿ ಇದಾಗಿತ್ತು. ಪ್ರತಿಯೊಬ್ಬರ ಕವನ ವಾಚನದಲ್ಲಿ ನಾನು ಕಲಿಯಬಹುದಾದಂತಹ ಅನೇಕ ವಿಷಯಗಳು ಅಡಕವಾಗಿದ್ದವು. ಹಲವು ವಿಷಯಗಳ ಸಾಗರಗರ್ಭಕ್ಕೆ ಇಳಿದು ಅರಿವಿನ ಖನಿಜಗಳನ್ನು ಹುಡುಕಿ ತಂದಂತಿತ್ತು.
ನಡುವೆ ನಡೆಯುತ್ತಿದ್ದ ನಾಟಕ,ಗಾಯನ ನನ್ನ ಮನಕ್ಕೆ ಮುದ ನೀಡಿದವು.

ಹಲವು ಪರಿಚಿತರನ್ನು ಭೇಟಿಯಾದೆ. ನನ್ನ ಫೇಸ್ಬುಕ್ ಖಾತೆಯ ಸ್ನೇಹಿತರನ್ನು ಭೇಟಿಯಾದೆ.
ಇಂಥಹ ಅದ್ಭುತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಕಿರಂ ಬಳಗಕ್ಕೆ ನನ್ನ ಅನಂತಾನಂತ ಧನ್ಯವಾದಗಳು

🙏🙏🙏🙏🙏
ನನ್ನನ್ನು ಈ ಬಳಗಕ್ಕೆ ಸೇರಿಸಿದ ಶ್ರೀಯುತ ಡಾ.ಪ್ರದೀಪ್ ಮಾಲ್ಗುಡಿ ರವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.

– ರುಕ್ಮಿಣಿ ಎಸ್ ನಾಯರ್, ಬೆಂಗಳೂರು

Leave a Reply