ಬಾಣಂತಿಯರ ಸಾವಿನ ಪ್ರಕರಣದಲ್ಲಿ ಪರಿಹಾರ ಯೋಜನೆಯಲ್ಲಿ ಬದಲಾವಣೆ ಮಾಡಿ

1 year ago

ರಾಜ್ಯದಲ್ಲಿ ಬಾಣಂತಿಯರ ಸಾವಿನ ಹಿನ್ನೆಲೆಯಲ್ಲಿ 5 ಲಕ್ಷಗಳ ಪರಿಹಾರದ ಮೊತ್ತವನ್ನ ರಾಜ್ಯ ಸರ್ಕಾರ ನೀಡುತ್ತಿರುವುದು ಮಾನವೀಯತೆಗೆ ಹಿಡಿದಂತಹ ಕೈಗನ್ನಡಿಯಾಗಿರುತ್ತದೆ. ಆದರೆ ಪರಿಹಾರದ ಮೊತ್ತವನ್ನ ವಿತರಿಸುವಂತಹ ಸಂದರ್ಭದಲ್ಲಿ ಸರ್ಕಾರ ಸ್ವಲ್ಪ ಸೂಕ್ಷ್ಮವಾಗಿ ಆಲೋಚಿಸಬೇಕಾಗಿದೆ.

ಬಾಣಂತಿಯರು ಸಾವನ್ನು ಅಪ್ಪಿದ ನಂತರ ಆ ಮಕ್ಕಳ ಪರಿಸ್ಥಿತಿಯ ಬಗ್ಗೆ ಚಿಂತಿಸಬೇಕಾಗಿದೆ. ಆ ಮಕ್ಕಳ ಆರೈಕೆ ಮತ್ತು ಯೋಗಕ್ಷೇಮದ ಬಗ್ಗೆ ಯೋಜನೆಯ ರೂಪಿಸುವ ಸಲುವಾಗಿ ಸರ್ಕಾರ 5 ಲಕ್ಷದ ಪರಿಹಾರದ ಮೊತ್ತದಲ್ಲಿ ಕುಟುಂಬಸ್ಥರು ಒಪ್ಪಿದರೆ ಐದು ಲಕ್ಷವನ್ನು ಆ ಹುಟ್ಟಿರುವ ಮಗುವಿನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿಯಾಗಿರಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ಮಗುವಿನ ಯೋಗಕ್ಷೇಮವನ್ನು ನೋಡಿಕೊಳ್ಳಲು ತಿಳಿಸಬೇಕು. 18 ವರ್ಷದ ತನಕ 5 ಲಕ್ಷದ ಠೇವಣಿ ಹಣವನ್ನು ಪಡೆಯುವಂತಿಲ್ಲ, 18 ವರ್ಷದ ನಂತರ ಆ ಮಗುವೆ ಅದನ್ನು ಪಡೆದುಕೊಳ್ಳಲು ಹಕ್ಕುದಾರರಾಗಿರಬೇಕು. ಕುಟುಂಬಸ್ಥರಲ್ಲಿ ಆರ್ಥಿಕವಾದಂತಹ ಸಂಕಷ್ಟಗಳು ಇದ್ದರೆ ಕಡೆಯ ಪಕ್ಷ ಪರಿಹಾರದ ಅರ್ಧ ಪ್ರಮಾಣದ ಮೊತ್ತವನ್ನಾದರೂ ಮಗುವಿನ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ಠೇವಣಿಯಾಗಿರಿಸಬೇಕು.

ಎಲ್ಲರ ಮನಸ್ಥಿತಿಯೂ ಒಂದೇ ಸ್ಥಿತಿಯಲ್ಲಿರುವುದಿಲ್ಲ. ತಾಯಿಯ ಸಾವಿನ ನಂತರ ಮಕ್ಕಳನ್ನು ನೋಡಿಕೊಳ್ಳಲು ಯಾವ ಪರಿಸ್ಥಿತಿಗಳು ನಿರ್ಮಾಣವಾಗುತ್ತದೆ ಎನ್ನುವುದು ಯಾರಿಗೂ ಅರ್ಥವಾಗುವುದಿಲ್ಲ. ಬಾಣಂತಿಯರ ಸಾವಿನ ನಂತರ ಅವರ ಪತಿ ಮತ್ತೊಂದು ಮದುವೆಯಾಗಿ ಆ ಪತ್ನಿಗೆ ಮಕ್ಕಳಾದ ಮೇಲೆ ಇಂತಹ ಮಕ್ಕಳ ಬಗ್ಗೆ ಸಹಜವಾಗಿಯೇ ಆರೈಕೆಯಲ್ಲಿ ವ್ಯತ್ಯಾಸಗಳಾಗಬಹುದು.

ಮಗುವಿನ ಹೆಸರಿನಲ್ಲಿ ಒಂದಷ್ಟು ಹಣವಿದೆ ಮತ್ತು ಇದರಿಂದ ಬಡ್ಡಿ ಬರುತ್ತದೆ ಎಂಬುದು ಗ್ಯಾರಂಟಿ ಆದರೆ ಆಗಲಾದರೂ ಆ ಮಗುವಿನ ಬಗ್ಗೆ ಆಸಕ್ತಿಯನ್ನು ತೋರಿಸುತ್ತಾರೆ. ಆ ಮಗುವಿಗೂ ಸಹ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

ಇಂತಹ ಮಕ್ಕಳನ್ನು ಸಾಕಿ ಸಲುಹಲು ಯಾವುದೇ ರೀತಿಯ ಜವಾಬ್ದಾರಿಯುತ ವ್ಯಕ್ತಿಗಳು ಮುಂದೆ ಬರದಿದ್ದಲ್ಲಿ, ಇಂತಹ ಮಕ್ಕಳನ್ನು ಅನಾಥ ಶಿಶುವಿಹಾರಗಳಿಗೆ ದಾಖಲಿಸಿ ಬಡ್ಡಿ ಹಣವನ್ನು ಅವರು ಬಳಸಿಕೊಳ್ಳುವಂತೆ ಕಾನೂನು ರೂಪಿಸಿದರೆ ಇದರಿಂದಲೂ ಸಹ ಮಕ್ಕಳಿಗೆ ಭದ್ರತೆಯ ಬದುಕು ಸಿಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply