ವೇದವ್ಯಾಸ ಕಾಮತ್ ಅವರೇ 11 ಕೋಟಿಯಲ್ಲಿ ಮುಗಿಸಿದ ಕಾಮಗಾರಿ ಯಾವುದೆಂದು ಸ್ಪಷ್ಟಪಡಿಸಿ

1 year ago

ಬಜಾಲ್ ವಾರ್ಡಿನ ಮುಖ್ಯರಸ್ತೆ ಸಹಿತ ಹಲವು ರೀತಿಯ ಅಭಿವೃದ್ಧಿ ಬೇಡಿಕೆಗಳನ್ನು ಒತ್ತಾಯಿಸಿ ಡಿವೈಎಫ್ಐ ಬಜಾಲ್ ಘಟಕದ ನೇತೃತ್ವದಲ್ಲಿ ನಾಳೆ ನಡೆಯುವ ಪ್ರತಿಭಟನೆಗೆ ಬಜಾಲ್ ವಾರ್ಡಿನ ಜನತೆಯಿಂದ ಹರಿದು ಬಂದಿರುವ ಬೆಂಬಲವನ್ನು ನೋಡಿ ಸಹಿಸದ ಶಾಸಕರ ಕೆಲವೊಂದು ಹಿಂಬಾಲಕರು ಎಲ್ಲಿಂದಲೋ ಮೂರು ಕಟೌಟ್ ಗಳನ್ನು  ತಂದು  ಬಜಾಲ್ ಪರಿಸರದಲ್ಲಿ ಜನ ಓಡಾಡುವ ಪ್ರದೇಶದಲ್ಲಿ ಹಾಕಿದ್ದಾರೆ.

ಇದರಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತರು ಬಜಾಲ್ ವಾರ್ಡಿನ‌ ಅಭಿವೃದ್ದಿಗೆ ಈವರೆಗೆ 17 ಕೋಟಿ ಅನುದಾನವನ್ನು ಸರಕಾರದಿಂದ ಮಂಜೂರು ಮಾಡಿ ಬಂದಿದ್ದಾರಂತೆ. ಈಗಾಗಲೇ ಅದರಲ್ಲಿ 11 ಕೋಟಿಯ ಕಾಮಗಾರಿಗಳು ಮುಗಿದಿವೆಯಂತೆ. ಇನ್ನು ಉಳಿದ 6 ಕೋಟಿಯಲ್ಲಿ 3 ಕೋಟಿ ಕಾಮಗಾರಿ ಟೆಂಡರ್ ಹಂತದಲ್ಲಿದ್ದು ಇನ್ನುಳಿದ 3 ಕೋಟಿ ಪ್ರಕ್ರಿಯೆ ಹಂತದಲ್ಲಿದೆಯೆಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ನಮೂದಿಸಿದ್ದಾರೆ.

ಅಂದಹಾಗೆ ಬಜಾಲ್ ವಾರ್ಡಿಗೆ ಬಂದ 17 ಕೋಟಿಯಲ್ಲಿ 11 ಕೋಟಿಯಲ್ಲಿ ಮುಗಿಸಿದ ಕಾಮಗಾರಿ ಯಾವುದೆಂದು ವೇದವ್ಯಾಸರು ಸ್ಪಷ್ಟಪಡಿಸಿರುತ್ತಿದ್ದರೆ ಬಹುಶಃ ನಾವು ಸೇರಿದಂತೆ ಜನತೆಗಿರುವ ಗೊಂದಲ ನಿವಾರಿಸಬಹುದಿತ್ತು. ಬಜಾಲ್ ವಾರ್ಡಿನ ಯಾವ ಮೂಲೆಗೂ ಹೋದರೂ ಈ 11 ಕೋಟಿಯ ಕಾಮಗಾರಿ ಯಾವುದೆಂದು ಪತ್ತೆ ಹಚ್ಚಲೇ ಅಸಾಧ್ಯವಾಗಿದೆ. ಈ ಅಭಿವೃದ್ದಿ ಕಾಮಗಾರಿಗೆ ಸುರಿದ 11 ಕೋಟಿ ಸದ್ಯ ಎಲ್ಲೋಗಿದೆ ಎಂದು ಪತ್ತೆ ಹಚ್ಚಲು ಒಂದು ತನಿಖಾ ತಂಡವನ್ನು ರಚಿಸ ಬೇಕಾಗಬಹುದೇನೋ?

ಮಾನ್ಯ ವೇದವ್ಯಾಸ ಕಾಮತರೇ ತಾವು ವಿಧಾನಸಭಾ ಚುನಾವಣೆಗೆ ಮುನ್ನ 13 ಕಡೆಗಳಲ್ಲಿ ಗುದ್ದಲಿ ಪೂಜೆ ಮಾಡಿ ಬಾನೆತ್ತರಕ್ಕೆ ಕಟೌಟ್ ಹಾಕಿಸಿಕೊಂಡು ಹೋಗಿದ್ದನ್ನು ಇಲ್ಲಿಯ ಜನ ಇನ್ನೂ ಮರೆತ್ತಿಲ್ಲ. ಆದರೆ ಒಂದು ವರುಷ ಕಳೆದರೂ ತಾವು ಗುದ್ದಲಿ ಪೂಜೆ ನಡೆಸಿ ಹೋದ ಜಾಗ ಈ ಭಾಗದ ಜನರನ್ನು ನೋಡಿ ಅಣಕಿಸುತ್ತಿದೆ. ಆದರೆ ಇಷ್ಟೊಂದು ಸಾಧಿಸಿದ್ದಕ್ಕೆ ಹಾಕಿದ ಅಭಿನಂದನೆಯ ಬ್ಯಾನರ್ ಮಾತ್ರ ನಿಮ್ಮನ್ನು ಮತ್ತೆ ಮತ್ತೆ ಅಣಕಿಸುತ್ತಿವೆಯಲ್ಲವೇ!

– ಸಂತೋಷ್ ಬಜಾಲ್, ಡಿವೈಎಫ್ಐ ಮುಖಂಡ

Leave a Reply