ಸ್ಮಾರ್ಟ್‌ ಮೀಟರ್‌ ಖರೀದಿಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ: ಬಿಜೆಪಿ

1 year ago

ಬೆಂಗಳೂರು: ವಿದ್ಯುತ್ ಪೂರೈಕೆ ಮತ್ತು ವಿತರಣೆಯಲ್ಲಿ ಆಗುತ್ತಿರುವ ನಷ್ಟ ಹಾಗೂ ಕಳ್ಳತನ ತಡೆಗಟ್ಟಲು ನೆರವು ನೀಡಲಿದೆ ಎಂಬ ಕಾರಣಕ್ಕಾಗಿ ಬೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್ ವಿತರಣಾ ಸಂಸ್ಥೆಗಳು ಮಾಡಿರುವ ಸ್ಮಾರ್ಟ್‌ ಮೀಟರ್‌ ಖರೀದಿಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. 

ಸ್ಮಾರ್ಟ್‌ ಮೀಟರ್‌ ಖರೀದಿಗೆ ನಡೆದ  ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು ಸುಮಾರು 15,568 ಕೋಟಿ ಮೊತ್ತದ ಹಗರಣ ನಡೆದಿದೆ ಇದು ರಾಜ್ಯ ಕಂಡ ಬಹುದೊಡ್ಡ ಹಗರಣವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ, ಶಾಸಕ ಎಸ್‌‍.ಆರ್‌.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಸ್ಮಾರ್ಟ್ ಮೀಟರ್ ಖರೀದಿ ಸಂಬಂಧ ನಡೆದಿರುವ ವ್ಯವಹಾರದ ಎಲ್ಲಾ ದಾಖಲೆಗಳನ್ನು ಪ್ರದರ್ಶಿಸಿದರು.

ಸ್ಮಾರ್ಟ್ ಮೀಟರ್ ಗಳ ಕುರಿತಂತೆ ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡುವಂತಿಲ್ಲ. ತಾತ್ಕಾಲಿಕ ಗ್ರಾಹಕರಿಗೆ ಮಾತ್ದ ಇದನ್ನು ಕಡ್ಡಾಯ ಮಾಡಬಹುದೇ ಹೊರತು ಹೊಸ ಗ್ರಾಹಕರಿಗೆ ಕಡ್ಡಾಯ ಮಾಡುವಂತಿಲ್ಲ. ಆದರೆ, ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳು ಮಾಡಿರುವ ಖರೀದಿ ಟೆಂಡರ್‌ನಲ್ಲಿ 15,568 ಕೋಟಿ ಮೊತ್ತದ ಹಗರಣವಾಗಿದೆ ಎಂದರು.

ನಿಯಮಗಳ ಪ್ರಕಾರ ಬಿಡ್‌ ಸಾಮರ್ಥ್ಯ ಇಲ್ಲದೇ ಟೆಂಡರ್‌ ಕರೆಯುವಂತಿಲ್ಲ. ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್‌ ಪಡೆದುಕೊಳ್ಳುವ ಸಂಸ್ಥೆ ಬಳಿ 6800 ಕೋಟಿ ಬಿಡ್‌ ಸಾಮರ್ಥ್ಯ ಮೊತ್ತ ಇರಬೇಕು.ಆದರೆ ಟೆಂಡರ್ ಪಡೆದುಕೊಂಡಿರುವ ಆದರೆ ಟೆಂಡರ್‌ ಪಡೆದ ರಾಜಶ್ರೀ ಕಂಪೆನಿ ಬಳಿ ಇದ್ದಿದ್ದು ಕೇವಲ 400 ಕೋಟಿ ರೂ ಮಾತ್ರ ಎಂದರು.
 
ನಿಯಮಾವಳಿ ಪ್ರಕಾರ ಟೆಂಡರ್‌ ಮೌಲ್ಯ 1920 ಕೋಟಿ ಇಡಬೇಕಿತ್ತು. ಆದರೆ ಟೆಂಡರ್‌ನಲ್ಲಿ ಕೇವಲ 107 ಕೋಟಿ ರೂಪಾಯಿ ಇಡಲಾಗಿದೆ. ಈ ಮೂಲಕ ರಾಜಶ್ರೀ ಕಂಪೆನಿಗೆ ಅನುಕೂಲವಾಗುವಂತೆ ಟೆಂಡರ್‌ ಕರೆಯಲಾಗಿದೆ. ಸಾಫ್ಟವೇರ್ ಖರೀದಿಗೆ ಅರ್ಹತೆ ಪಡೆದಿರುವ ಮತ್ತೊಂದು ಸಂಸ್ಥೆ ಬಿಸಿಐಟಿಎಸ್‌‍ ಅನ್ನು ಉತ್ತರ ಪ್ರದೇಶದಲ್ಲಿ ಅಸಮರ್ಪಕ ಸೇವೆಯ ಕಾರಣಕ್ಕೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದರು.
 
ಸ್ಮಾರ್ಟ್‌ಮೀಟರ್‌ಗಳ ದರಗಳಲ್ಲಿ ಬೇರೆ ರಾಜ್ಯಗಳಿಗೂ ನಮಗೂ ಬಹಳ ವ್ಯತ್ಯಾಸ ಇದೆ. ಒಂದು ಮೀಟರ್‌ಗೆ ಮೊದಲೇ ನಮ್ಮಲ್ಲಿ 8160 ರೂ. ತೆಗೆದುಕೊಳ್ಳುತ್ತಾರೆ. ಇದಾದ ನಂತರ ನಿರ್ವಹಣೆ ಹೆಸರಿನಲ್ಲಿ ಮಾಸಿಕ 170 ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಒಮ್ಮೆ ನೀಡುವ ದರ ಮತ್ತು ತಿಂಗಳಿಗೆ ಕೊಡುವ ದರವನ್ನು ಹತ್ತು ವರ್ಷಗಳಿಗೆ ಲೆಕ್ಕ ಹಾಕಿದರೆ ಪ್ರತೀ ಮೀಟರ್‌ಗೆ 17 ಸಾವಿರ ರೂ ಆಗುತ್ತದೆ. ಆದರೆ ಪಿ ಪಿ ಪಿ ಮಾದರಿಯಲ್ಲಿ ಬೇರೆ ರಾಜ್ಯಗಳಲ್ಲಿ ಖರೀದಿಸುತ್ತಿರುವ ಮೀಟರ್ ದರ 7400 ರೂಪಾಯಿ ಯಿಂದ 9260 ರೂ. ಆಗಲಿದೆ. ಸ್ಮಾರ್ಟ್‌ ಮೀಟರ್‌ ದರ, ಸಾಫ್ಪ್ ವೇರ್‌ ನಿರ್ವಹಣೆ ದರ ಹಾಗೂ ಸಿಬ್ಬಂದಿ ವೇತನ ದರಗಳನ್ನು ಸೇರಿಸಿ ಹತ್ತು ವರ್ಷಕ್ಕೆ ಜನರಿಂದ ಸಂಗ್ರಹ ಮಾಡುತ್ತಿದ್ದಾರೆ ಎಂದರು.

ಈ ವಿಚಾರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರ ಅವ್ಯವಹಾರ ಮಾಡಿದೆ. ಇದನ್ನು ವಿಧಾನಸಭೆಯ ಅಧಿವೇಶನದಲ್ಲಿಯೇ ಪ್ರಸ್ತಾಪ ಮಾಡಲಾಗಿತ್ತು. ನಮ್ಮ ಆರೋಪ ಬಗ್ಗೆ ಸದನದಲ್ಲೇ ಉತ್ತರ ಕೊಡುತ್ತೇನೆ ಎಂದು ಇಂಧನ ಸಚಿವರು ಹೇಳಿದ್ದರು. ಆದರೆ ಸದನಕ್ಕೆ ಅಂದು ಬಂದರೂ ನಾಪತ್ತೆ ಆಗಿದ್ದರು. ನಮ್ಮ ಆರೋಪಗಳಿಗೆ ಸಚಿವರು ಉತ್ತರ ಕೊಡಲಿಲ್ಲ. ಆದರೆ ನಿನ್ನೆ ಅಧಿಕಾರಿಗಳ ಮೂಲಕ ಹಗರಣ ಆಗಿಲ್ಲವೆಂದು ಸರ್ಕಾರ ಹೇಳಿಸಿದೆ ಎಂದರು.

ಕೂಡಲೇ ಸರ್ಕಾರ ಈ ಟೆಂಡರ್ ರದ್ದುಪಡಿಸಿ ನಿಯಮಾವಳಿಗಳ ಪ್ರಕಾರ ಹೊಸ ಟೆಂಡರ್ ಕರೆಯಬೇಕು ಹಾಗೂ ಮೀಟರ್ ದರವನ್ನು ಕಡಿಮೆ ಮಾಡಬೇಕು ತಪ್ಪಿದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Leave a Reply