ರಂಗಭೂಮಿ ಜನರನ್ನು ತಲುಪುವ ಪ್ರಭಾವಿ ಮಾಧ್ಯಮ: ರಘುನಂದನ

2 years ago

ಧಾರವಾಡ: ರಾಜಕೀಯ, ಸಾಮಾಜಿಕ, ವಿಚಾರಗಳನ್ನು ಹುಟ್ಟು ಹಾಕುವ, ಚಿಂತನೆಯನ್ನು ಮೂಡಿಸುವ, ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವಂತಹ ನಾಟಕಗಳನ್ನು ರಂಗಾಯಣಗಳು ಪ್ರಸ್ತುತಪಡಿಸುವ ಮೂಲಕ ಜನರನ್ನು ಸರಳವಾಗಿ ತಲುಪುವ ಪ್ರಭಾವಿ ಮಾಧ್ಯಮವಾಗಿದೆ ಎಂದು ರಂಗನಿರ್ದೇಶಕ ರಘುನಂದನ ಹೇಳಿದರು.

ರಂಗಾಯಣದ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ಬಿ.ವಿ. ಕಾರಂತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಂಗಭೂಮಿ, ರಂಗಾಯಣ: ಗೊತ್ತುಗುರಿಯ ಮಾತು ಉಪನ್ಯಾಸ ನೀಡಿ, ಅವರು ಮಾತನಾಡಿದರು.


ರಂಗಭೂಮಿಯನ್ನು ಉಳಿಸಿ, ಬೆಳೆಸುವಲ್ಲಿ ಕಾರಂತರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಅತ್ಯಂತ ಸರಳ ವ್ಯಕ್ತಿತ್ವವುಳ್ಳ ರಂಗಕರ್ಮಿಯನ್ನು ಇಂದಿನ ಜನಾಂಗ ಕಳೆದುಕೊಂಡಿದೆ. ಕಾರಂತರು ಯಾವುದೇ ತರಹದ ಅಪೇಕ್ಷೆಯನ್ನು ಪಡೆಯದೇ ರಂಗಭೂಮಿಯ ಬೆಳವಣಿಗೆಗಾಗಿ ಶ್ರಮಿಸಿದರು. ಸ್ವಾಭಿಮಾನ ಹೊಂದಿದ ಕಾರಂತರು ಎಲ್ಲರೊಂದಿಗೆ ಆತ್ಮೀಯತೆ ಹಾಗೂ ಸ್ನೇಹಮಯ ಭಾವನೆಯನ್ನು ಹೊಂದಿದವರಾಗಿದ್ದರು ಎಂದರು. 

ರಂಗಾಯಣಗಳು ಜನರನ್ನು ತಲುಪುವಂತಹ ನಾಟಕಗಳನ್ನು ಸಿದ್ಧಪಡಿಸಿ, ಪ್ರದರ್ಶನ ಮಾಡಬೇಕು. ಒಂದು ನಾಟಕ ಸಿದ್ಧವಾಗಬೇಕಾದರೆ ಅದಕ್ಕೆ ತನ್ನದೇ ಆದ ತಯಾರಿಕೆ ಇರುತ್ತದೆ. ಹೀಗೆ ಸಿದ್ಧಗೊಂಡ ನಾಟಕವನ್ನು ಮೊದಲು ಸಣ್ಣ ಸಣ್ಣ ಊರುಗಳಲ್ಲಿ ಪ್ರದರ್ಶನ ಮಾಡಿ, ನಂತರ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಮಾಡುವ ಮೂಲಕ ಜನರಿಗೆ ಉತ್ತಮ ಸಂದೇಶಗಳನ್ನು ನೀಡಬೇಕು ಎಂದರು. 

ನಂತರ “ನಾನು ಸತ್ತಮೇಲೆ” ಕವನ ಸಂಕಲನ ಮತ್ತು ಬೇಂದ್ರೆ ಕಾವ್ಯ ಕುರಿತ “ತುಯ್ತವೆಲ್ಲ ನವ್ಯದತ್ತ” ಪುಸ್ತಕದ ಕುರಿತು ಮಾತನಾಡಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಗಾಯತ್ರಿ ಮಹಾದೇವ, ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ವೀ ಹುಡೇದ ಉಪಸ್ಥಿತರಿದ್ದರು. ರಂಗಾಯಣ ನಿರ್ದೇಶಕ ಡಾ.ರಾಜು ತಾಳಿಕೋಟೆ ಅಧ್ಯಕ್ಷತೆ ವಹಿಸಿದ್ದರು. ಸುನಂದಾ ನಿಂಬನಗೌಡರ ಕಾರಂತರ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ಸಾಹಿತಿಗಳು, ರಂಗನಿರ್ದೇಶಕರು, ಕಲಾವಿದರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply