“ರಂಗಚಂದಿರ ಟ್ರಸ್ಟ್” ವತಿಯಿಂದ ರಂಗಗೀತೆ, ಅಭಿನಂದನೆ, ರಂಗಗೌರವ, ನಾಟಕ ಪ್ರದರ್ಶನ

2 years ago

ವಿಶ್ವ ರಂಗಭೂಮಿ ದಿನಾಚರಣೆ

ಬೆಂಗಳೂರು: “ವಿಶ್ವ ರಂಗಭೂಮಿ ದಿನಾಚರಣೆ” ಅಂಗವಾಗಿ “ರಂಗಚಂದಿರ ಟ್ರಸ್ಟ್” ವತಿಯಿಂದ ಮಾ.27 ರಂದು ಬುಧವಾರ ಸಂಜೆ 6ಗಂಟೆಗೆ ನಗರದ ಎನ್.ಆರ್.ಕಾಲೋನಿಯ ಸಿ.ಅಶ್ವಥ್ ಸಭಾಂಗಣದಲ್ಲಿ ರಂಗಗೀತೆ, ಅಭಿನಂದನೆ, ರಂಗಗೌರವ ಹಾಗೂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಹಿರಿಯ ರಂಗಸಂಘಟಕ ಗುಂಡಣ್ಣ ಚಿಕ್ಕಮಗಳೂರು ಅವರು ಅಧ್ಯಕ್ಷತೆ ವಹಿಸುವರು. ಬೆಂಗಳೂರು ನಗರ ಜಿಲ್ಲೆ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷ ಎನ್.ಆರ್.ಹೆಗಡೆ, ರಂಗಚಂದಿರ ಟ್ರಸ್ಟ್ ಗೌರವಾಧ್ಯಕ್ಷ ಆರ್.ಕೆ.ಹೆಗಡೆ, ಹಿರಿಯ ರಂಗ ಸಂಘಟಕ ಶ್ರೀನಿವಾಸ್ ಜಿ.ಕಪ್ಪಣ್ಣ, ರಂಗಚಂದಿರ ಟ್ರಸ್ಟ್ ಅಧ್ಯಕ್ಷೆ ಡಾ.ಟಿ.ಪದ್ಮ ಭಾಗವಹಿಸುವರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವ ಪುರಸ್ಕೃತ, ನಾಟಕಕಾರ- ರಂಗ ನಿರ್ದೇಶಕ ಡಾ.ಬೇಲೂರು ರಘುನಂದನ್ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ರಂಗ ನಿರ್ದೇಶಕ ಶಶಿಧರ್ ಭಾರೀಘಾಟ್ ಅವರು ವಿಶ್ವ ರಂಗಭೂಮಿ ದಿನಾಚರಣೆ ಸಂದೇಶವನ್ನು ಪ್ರಸ್ತುತ ಪಡಿಸುವರು. ಭರತ ನಾಟ್ಯ ಕಲಾವಿದೆ ಚಿತ್ರಾರಾವ್ ಅವರಿಗೆ ರಂಗಗೌರವ ಸಲ್ಲಿಸಲಾಗುವುದು. ರಂಗ ವಿಜಯ ತಂಡದವರು ರಂಗಗೀತೆ ಪ್ರಸ್ತುತ ಪಡಿಸಲಿದ್ದಾರೆ.

ವೇದಿಕೆ ಕಾರ್ಯಕ್ರಮದ ತರುವಾಯ ‘ನಟನ ಮೈಸೂರು’ ತಂಡವು ‘ಕಣಿವೆಯ ಹಾಡು’ ನಾಟಕವನ್ನು ಪ್ರಸ್ತುತ ಪಡಿಸಲಿದೆ. ಕಲಾವಿದ ಶಿವಲಿಂಗ ಪ್ರಸಾದ್ ನಿರೂಪಣೆ ಮಾಡಿದರೆ, ಜಿಪಿಒ ಚಂದ್ರು ಹಾಗೂ ಮಾಗಡಿ ಗಿರೀಶ್ ನಿರ್ವಹಣೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ನಟರಂಗ, ಸಮುದಾಯ, ಶಾರದ ಪ್ರತಿಷ್ಠಾನ, ಸಂಸ್ಥೆಗಳು ಭಾಗವಹಿಸಲಿವೆ ಎಂದು ರಂಗಚಂದಿರ ಕಾರ್ಯದರ್ಶಿ ಎ.ಎಸ್.ಚಂದ್ರಶೇಖರ್ (ಜಿಪಿಒ ಚಂದ್ರು)- 91130 81894 ತಿಳಿಸಿದ್ದಾರೆ.

Leave a Reply