ಕನಸಿನ ದೀಪದ ಬೆಳಕು
ಕನಸಿನ ದೀಪದ ಬೆಳಕು ನನ್ನವಳು
ಸದಾ ಉರಿವ ನನ್ನ ಸಹಿಸಿ ಪೊರೆದು ತಾನು ಕರಗಿದಳು
ದುಂಡುಮಲ್ಲಿಗೆಯ ಘಮಕ್ಕೆ ಮರುಳಾದ ನನ್ನ
ಮೊಸರನ್ನ ತಿನ್ನಿಸಿ ಎಚ್ಚರಿಸಿದಳು ಮನುಷ್ಯನಾಗಿಸಿದಳು
ಕಲ್ಲಿನೂರ ಹುಡುಗ ಬೆಲ್ಲದೂರ ಹುಡುಗಿ
ಬೆಸಗೊಂಡಾಗ ಹುಳುಗಳಿಗೆಲ್ಲ ಹಬ್ಬವಾಗಿತ್ತು
ಎದೆಯ ತೆರೆದು ಹೃದಯದ ರಕ್ತ ಬಸಿದೆವು
ತಿಂದು ತೇಗಿದ ಅವು ಈಗಲೂ ಹಸಿದಿವೆ
ಕ್ರಿಮಿಗಳ ಹಸಿವು ನೀಗದು
ನಮ್ಮೆದೆಯ ರಕ್ತವೂ ಅಷ್ಟು ಸುಲಭಕ್ಕೆ ತೀರದು
ಬರಿಗೈಯ ಫಕೀರ ಖಾಲಿ ಹೊಟ್ಟೆಯ ಇರುವೆ
ಜೇಬಿಲ್ಲದ ದಾಸ ನಾನು
ಉರಿಬಿಸಿಲ ರಸ್ತೆಯಲ್ಲಿ ಬರಿಪಾದದಲಿ ನಡೆದವನು ನಾನು
ಬೊಗಸೆ ತುಂಬ ಪ್ರೀತಿ ಎದೆಯ ತುಂಬಾ ಸಮೃದ್ಧಿ
ಮನದ ತುಂಬಾ ಒಲವು
ಕರುಣಾಲಂಕಾರ ಭೂಷಿತೆ ಅವಳು
ಹಾದಿಗಳೇ ಇಲ್ಲದ ಕಾಡಿನಲ್ಲಿ ಸಿಕ್ಕಿದ್ದೆಲ್ಲ ಹಾದಿಯೇ
ಎಂದು ನಡೆದವನು ನಾನು
ತುಟಿಮುತ್ತಿನಲಿ ಬೇಹೋಷ್ ಮಾಡಿ ಗಾಯಗಳ ಹೊಲೆದು
ಮಾಯುವವರೆಗೂ ದೇಖರೇಖಿ ಮಾಡಿ ನನಗಾಗಿ ಬದುಕಿದವಳು ಅವಳು
ಉರಿವ ಪಾದಗಳು
ಹೃದಯದ ಗೋಡೆಗಳ ತುಂಬ ಪರಿಚಿದ ಗಾಯ
ಪರಂಪಾರಗತ ಅವಮಾನಗಳ ಮೂಟೆ ಹೊತ್ತು
ದಿಕ್ಕಿಲ್ಲದ ದಾರಿಯಲ್ಲಿ ನಡೆಯುವಾಗ
ಮೃದುಮಳೆಯ ಹನಿಸಿ ಭಾರಗಳ ಇಳಿಸಿ
ಕನಸಿನೂರು ಬಾಡಿಗೆ ತಂದು ಮನಸಿನ ಮನೆಯಲ್ಲಿ
ಇನ್ನೂ ನನ್ನ ಸಾಕುತ್ತಿರುವಳು ಅವಳು ಅಂತಃಕರುಣಿ
ಹಸಿರು ಮರುಭೂಮಿಯ ಹುಡುಗ ನಾನು
ಕಡು ಕಷ್ಟಗಳ ಕಡಲ ಕಂಡಿಲ್ಲದವಳು ಅವಳು
ಉಕ್ಕಿ ಹರಿವ ನದಿ ಬದುಕ ದೋಣಿಯ ಬುಟ್ಟಿ ಹು್ಟ್ಟುಗಳಿಲ್ಲದ ಬವಣೆ
ನಾವೇಕೆ ನೋಯೋಣ
ಅನುಕ್ಷಣ ಖುಷಿಪಟ್ಟು ಸಾಕಷ್ಟು ಕಣ್ಣಹನಿ ಹರಿಸಿ
ನಿತ್ಯ ನೂತನವಾಗಿ ಪ್ರೇಮಿಸುವ ಪುಟ್ಟ ಪಕ್ಷಿಗಳು ನಾವು
ಆಕಾಶವೇನು ನಾವು ಕೊಂಡುಕೊಂಡಿಲ್ಲ
ಭೂಮಿಯ ಮೇಲೂ ಇರಲು ಬಿಡಲಿಲ್ಲವೆಂದರೆ ನಾವೇ ಸುಮ್ಮನಿರೋಣ
ನೀವು ನಮ್ಮ ಕುತ್ತಿಗೆಗಳ ಹಿಡಿಯಿರಿ ನಾವು ನಿಮ್ಮ ಕೈಗಳಿಗೆ ಮುತ್ತುಕೊಡುತ್ತೇವೆ
ನೀವು ನಮ್ಮನ್ನ ಇಲ್ಲವಾಗಿಸಿ ನಾವು ನಿಮ್ಮ ಹಾದಿಗೆ ನಮ್ಮುಸಿರ ಚಲ್ಲುತ್ತೇವೆ
ನಮ್ಮ ಸಜ್ಜೆಯ ಮನೆಯಲ್ಲೇಕೆ ನಿಮ್ಮ ಆಸಕ್ತಿ
ನಮ್ಮ ಪ್ರೇಮಪದ್ಯಗಳ ಮನಸಿಟ್ಟು ಓದಿಕೊಳ್ಳಿ
ನಿಮ್ಮ ಬರಡಾದ ಎದೆಯೊಳಗೂ ಏನಾದರೂ ಚಿಗುರಬಹುದು
ನಾನು ಆಕಾಶ ಅವಳು ಭೂಮಿ ನಮ್ಮ ನಡುವೆ ಒಂದು ಚುಕ್ಕಿಯಿದೆ
ಹುಳುವಿಗೆ ಇಲ್ಲೇನು ಕೆಲಸ
ನಾವು ಬಂದಂತೆ ಬದುಕುತ್ತೇವೆ
ನೀವು ಬದುಕಿರುವುದಕ್ಕೆ ಸಾಕ್ಷಿಯಿಲ್ಲ ನಮ್ಮ ಹತ್ತಿರ
ಸಂಧಾನಕ್ಕೆ ರಾಯಭಾರಿಗಳ ಕಳುಹಿಸಬೇಡಿ
ಹರಿದ ಹಾದಿಗೂ ನಾವು ಒಲುಮೆಯ ಹರಿಸುತ್ತೇವೆ
ನೀವೂ ದೂರದಲ್ಲೇ ಇರಿ
ನಾವು ಅಪ್ಪಿಮುದ್ದಿಸುವಾಗ
ನಮ್ಮ ನಡುವೆ ಸುಳಿವ ಗಾಳಿಗೂ ಜಾಗವಿರುವುದಿಲ್ಲ
ಆಟ ಕೆಡಿಸಲೆಂದೇ ಬದುಕಿನ ತುಂಬಾ ಆಟ ಆಡಿ
ನಮ್ಮಾಟ ಸರಿಯಿಲ್ಲವೆನ್ನುವ ಹುಳುವೇ
ನೀನು ಆಟವನ್ನೇ ಆಡಿಲ್ಲವೆಂದರೆ ನಂಬೋಣವೇ
ಬುಸು ಬುಸು ಹಾವುಗಳೇ ನೀವು ಬುಸುಗುಟ್ಟುತ್ತಲೇ ಇರಿ
ಅನಾಮಿಕ ಹೆಸರಿನ ನಿಮ್ಮ ಬಲೆಗಳ ಲೆಕ್ಕ ಬೇಟಗಳ ಲೆಕ್ಕ
ಸಾರ್ವಕಾಲಿಕ ದಾಖಲೆಯ ಒಂದು ಪುಸ್ತಕ
ನಮ್ಮ ಬಳಿಯೂ ಇದೆ
ಬಿಡು ಚಿಂತೆ ನನ್ನ ಮುದ್ದು ಇಂದು ನಿನ್ನ ಜನುಮದಿನ
ಕಲ್ಲಿನ ತೋಟದ ಚಿಟ್ಟೆ ನಾನು
ಸಾವಿರ ಹೂದೋಟದ ಪರಿಮಳ ನೀನು
ಬೆಸಗೊಳ್ಳೋದು ನಮ್ಮ ಧರ್ಮ ಕರ್ಮ
ಉಳಿದವರಿಗೇಕೆ ನಮ್ಮ ಉಸಾಬರಿ
ಉರಿದುಕೊಳ್ಳುವವರ ಉರಿ ಹೆಚ್ಚಲಿ
ನಮ್ಮೊಡಲ ಒಲುಮೆಯ ಕಡಲು ಹೊಸ ಹೊಸದಾಗಿ ಉಕ್ಕಲಿ
ನಾನು ನೀನು ಬೇರು ಮರ
ನಮಗೆ ಭೂಮಿ ಆಗಸಗಳೇ ತಂದೆ ತಾಯಿ
ಸಾವಿರ ವರುಷ ಇಲ್ಲಾರಿದ್ದಾರು
ಪ್ರತಿ ನಿತ್ಯ ಹೊಸಹೊಸದಾಗಿ ಮುದ್ದಾಡುವ ನಾವೇ ಗೆದ್ದವರು
– ವೀರಣ್ಣ ಮಡಿವಾಳರ




