ಕಸ ಹಾಕಿದವರ ಕೈಯಲ್ಲಿ ಕಸ ತೆಗೆಸಿದಾಗ ಕಷ್ಟ ಗೊತ್ತಾಗುತ್ತದೆ: ಲಕ್ಷ್ಮೀ

4 months ago

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕಬೇಡಿ

ಬೆಂಗಳೂರು: ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ನಿಯಮಿತ 112ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ, ಜಿಬಿಎ ಅಧಿಕಾರಿ, ನೌಕರರಿಗೆ  ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.

ಹಿರಿಯ ನಟಿಯರಾದ ಲಕ್ಷ್ಮಿ, ವಿನಯ ಪ್ರಸಾದ್, ಸಹಾಯಕ ಆಯುಕ್ತ ಗಿರೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ,  ಅಧ್ಯಕ್ಷ ಎ.ಅಮೃತ್ ರಾಜ್, ಉಪಾಧ್ಯಕ್ಷ ಕೆ.ಜಿ.ರವಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಲಕ್ಷ್ಮೀ ಮಾತನಾಡಿ, ನಾನು ಅದೃಷ್ಣವಂತೆ, ನಿಮ್ಮನ್ನ ನೋಡಲು ಬಂದ್ದಿದೇನೆ. ನೀವು ನನ್ನನ್ನು ಟಿ.ವಿ.ಯಲ್ಲಿ ಪ್ರತಿದಿನ ನೋಡುತ್ತೀರಿ. ಯಾವತ್ತು ಜೀವನದಲ್ಲಿ ಒತ್ತಡದ ಜೀವನ ಮಾಡಬೇಡಿ. ಯಾರಿಂದ ಸಮಾಜ ಕೆಟ್ಟಿದೆ ಎಂದರೆ ಅದಕ್ಕೆ ಕಾರಣಕರ್ತರು ಯಾರು? ಎಲ್ಲರ ಜೀವನ ಅಮೂಲ್ಯ. ಇರುವುದರಲ್ಲಿ ಜೀವನ ಸಾಗಿಸಬೇಕು. ಶರೀರ ಮಾತ್ರ ನಮ್ಮ ಜೊತೆಯಲ್ಲಿ ಇರುತ್ತದೆ. ಉತ್ತಮ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ಎಂದರು.

ಸೌಂದರ್ಯ ಮುಖ್ಯವಲ್ಲ , ಮನಸ್ಸು ಸುಂದರವಾಗಿರಬೇಕು. ಇನ್ನೊಬ್ಬರಿಗೋಸ್ಕರ ನಾವು ಜೀವನ ಮಾಡಬಾರದು. ಪ್ರತಿಯೊಂದು ಮಕ್ಕಳಿಗೆ ತಾಯಿ ಹಾಲು ಕುಡಿಸಿ ಬೆಳಸಿದ್ದಾಳೆ, ಧೈರ್ಯವಾಗಿ ಬದುಕು ಸಾಗಿಸಿ. ಜೀವನದಲ್ಲಿ ನಗು ಎಂಬುದು ತಿಳಿದಿರುವುದು ಮನುಷ್ಯರಿಗೆ ಮಾತ್ರ, ಜನರು ನಗುವುದನ್ನ ಮರೆತ್ತಿದ್ದಾರೆ. ಪ್ರಕೃತಿ ದೇವರು ಎಂಬುದು ಮರೆತ್ತಿದ್ದಾರೆ ಎಂದರು.

ನಗರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಾರೆ. ಹೇಳಿದರೆ ಎತ್ತಿಕೊಂಡು ಹೋಗುತ್ತಾರೆ ಎಂದು ಉಡಾಫೆ ಮಾತಾಡುತ್ತಾರೆ. ಕಸ ಬಿಸಾಡುವವರ ಕೈಯಲ್ಲಿ ಕಸ ಎತ್ತುವ ಕೆಲಸ ಮಾಡಿಸಬೇಕು. ಆಗ ಅದರ ನೋವು ಕಷ್ಟ ತಿಳಿಯುತ್ತದೆ. ಪೌರ ಕಾರ್ಮಿಕರು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಎಲ್ಲರು ನಿಸ್ವಾರ್ಥದಿಂದ, ಶುದ್ದ ಮನಸ್ಸಿನಿಂದ ಬಾಳಿ ಎಂದರು.

ಸಹಾಯಕ ಆಯುಕ್ತ ಗಿರೀಶ್ ಮಾತನಾಡಿ, ಸಹಕಾರ ಸಂಘವು ನೌಕರರ ಸಂಕಷ್ಟ ಸಮಯದಲ್ಲಿ ನೆರವು ನೀಡುತ್ತಿದೆ. ಉಳಿಸಿ, ಬೆಳಸಿಕೊಂಡು ಹೋಗುವುದು ಬಹಳ ಕಷ್ಟ ಅದರು ನಮ್ಮ ಸಹಕಾರ ಸಂಘ 112 ವರ್ಷ ದಾಟಿದೆ ಎಂದರೆ ಸಂತೋಷಕರವಾದ ವಿಷಯವಾಗಿದೆ. ಪಾಲಿಕೆಯ ಅಧಿಕಾರಿ, ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಹ ನೀಡುವುದರಿಂದ ರಾಷ್ಟ್ರಕ್ಕೆ ಉತ್ತಮ ಸೇವೆ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಎಂದರು.

ಎ.ಅಮೃತ್ ರಾಜ್ ಮಾತನಾಡಿ, ನಮ್ಮ ಸಹಕಾರ ಸಂಘವು 112 ವರ್ಷ ಪೂರೈಸಿದ ಶತಮಾನ ಇತಿಹಾಸವಿರುವ ಸಂಘವಾಗಿದೆ. ಒಬ್ಬರಿಂದ, ಇನ್ನೊಬ್ಬರಿಗೆ ಸಹಕಾರ ನೀಡುವ ತತ್ವದ ಆಧಾರದ ಮೇಲೆ ನಮ್ಮ ಸಹಕಾರ ಸಂಘವು ಅಧಿಕಾರಿ, ನೌಕರರ ಏಳಿಗೆಗಾಗಿ ಶ್ರಮಿಸುತ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಸಾಲು ಮರದ ತಿಮ್ಮಕ್ಕರವರ ಸವಿಸ್ಮರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಸಿ.ಎಸ್.ಷಡಕ್ಷರಿ ಮಾತನಾಡಿ, ನೌಕರರಿಗೆ ಆರ್ಥಿಕ ಸಹಕಾರ ನೀಡಲು ಸಹಕಾರ ಸಂಘ, ಶತಮಾನದ ಇತಿಹಾಸವಿದೆ. ನೂರು ಹನ್ನೆರಡು ವರ್ಷ ಪೂರೈಸಿರುವ ಸಂಘಕ್ಕೆ ಹಲವಾರು ಮಹನೀಯರು ಕೊಡುಗೆ ನೀಡಿದ್ದಾರೆ. ನೌಕರರಿಗೆ ಹಲವಾರು ಸಮಸ್ಯೆಗಳು ಬರುತ್ತದೆ ಅದರೆ ಅವರ ಪರವಾಗಿ ಯಾವುದೇ ಮುಲಾಜಿಲ್ಲದೇ ಹೋರಾಟ ಮಾಡುತ್ತೇವೆ. ನೌಕರರು ನಮ್ಮ ಕುಟುಂಬದವರಂತೆ.  7ನೇ ವೇತನ ಆಯೋಗ ಜಾರಿಗೆ ಬರಲು ಜಿಬಿಎ -ಪಾಲಿಕೆಗಳ ಅಧಿಕಾರಿ, ನೌಕರರ ಸಹಕಾರ ನೀಡಿದರು ಎಂದರು.

ವಿನಯ ಪ್ರಸಾದ್ ಮಾತನಾಡಿ, ಶಿಕ್ಷಣ, ಕಲೆ, ಚಲನಚಿತ್ರ ಎಲ್ಲ ರಂಗಗಳಲ್ಲಿ ಪ್ರೋತ್ಸಾಹ, ಸಹಕಾರ ನೀಡಿದಾಗ ಚಿಕ್ಕ ಮೊಳಕೆ, ದೊಡ್ಡ ಮರವಾಗಿ ಬೆಳಯುತ್ತದೆ. ಪ್ರತಿಭಾವಂತ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಬೇಕು, ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ರಾಜ್ಯ, ರಾಷ್ಟ್ರಕ್ಕೆ ಸದುಪಯೋಗವಾಗಲಿದೆ ಎಂದರು.

ಸಾಲು ಮರದ ತಿಮ್ಮಕ್ಕ ಪ್ರಶಸ್ತಿಯನ್ನು ಮುಖ್ಯ ಆರೋಗ್ಯಧಿಕಾರಿ ಡಾ.ನಿರ್ಮಲ ಬುಗ್ಗಿ, ಆರೋಗ್ಯಧಿಕಾರಿ ಡಾ.ಎ.ಎಸ್.ಬಾಲಸುಂದರ್, ಜಂಟಿ ಆಯುಕ್ತ ಕಂದಾಯ ಲಕ್ಷ್ಮಿದೇವಿ ಆರ್, ಮುಖ್ಯ ಅಭಿಯಂತರ ಬಸವರಾಜ್ ಎಸ್.ಕಬಾಡೆ, ಉಪ ಕಾನೂನು ಸಲಹೆಗಾರ ಮುನಿರಾಜು.ಎಂ., ಸಹಾಯಕ ಕಾರ್ಯಪಾಲಕ ಅಭಿಯಂತರ ಹೆಚ್.ಕೆ.ತಿಪ್ಪೇಶ್, ಸಹ ಕಂದಾಯ ಅಧಿಕಾರಿ ಎನ್.ಕೃಷ್ಣ, ವಿಷಯ ಪರಿವೀಕ್ಷಕ ಕುಮಾರ್, ಕಂದಾಯ ಪರಿವೀಕ್ಷಕ ಎಸ್.ಆರ್ಮುಗಂ,  ಚಾಲಕ ಸಂಪತ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Leave a Reply