ಹಿಂಗಾರು ಬೆಳೆಗಳ ರಕ್ಷಣೆಗೆ ಸಲಹೆಗಳು

3 months ago

ಧಾರವಾಡ: ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ (IITM) ಪುಣೆ ಮತ್ತು ಭಾರತ ಹವಾಮಾನ ಇಲಾಖೆ (IMD) ನವದೆಹಲಿ, ಇವರು ಜನೇವರಿ ತಿಂಗಳ ಎರಡನೇ ಪಾಕ್ಷಿಕಕ್ಕೆ ಒದಗಿಸಿದ ಹವಾಮಾನ ಮುನ್ಸೂಚನೆಯ ಪ್ರಕಾರ, ಸೂರ್ಯನ ಉತ್ತರ ದಿಕ್ಕಿನ ಚಲನೆಯಿಂದಾಗಿ ವಾತಾವರಣದ ತಾಪಮಾನದಲ್ಲ್ಲಿ ಏರಿಕೆಯಾಗಲಿದೆ ಎಂದು ಕೃ.ವಿ.ವಿ. ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನವರಿ 2026 ರ ಎರಡನೇ ಪಾಕ್ಷಿಕದಲ್ಲಿ ದಕ್ಷಿಣ ಭಾರತ ಮತ್ತು ಫೆಸಿಫಿಕ್ ಸಾಗರಗಳಲ್ಲಿ ಉಷ್ಣವಲಯದ ಬಿರುಗಾಳಿಗಳು ರೂಪಗೊಳ್ಳುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳ ಪ್ರದೇಶಗಳಲ್ಲಿ ಚದುರಿದಂತೆ ಮೋಡದ ವಾತವರಣ ಮತ್ತು ಅಲ್ಪ ಪ್ರಮಾಣದ ಮಳೆಯ ಸಾದ್ಯತೆಗಳಿರಲಿವೆ.

ವಾತಾವರಣದ ತಾಪಮಾನಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದ್ದು, ಗರಿಷ್ಟ ತಾಪಮಾನದ ಪ್ರಮಾಣವು 27.0 ಡಿಗ್ರಿ ಸೆಂ. ನಿಂದ 30.0 ಡಿಗ್ರಿ ಸೆಂ. ಹಾಗೂ ಕನಿಷ್ಟ ತಾಪಮಾನವು 17.0 ಡಿಗ್ರಿ ಸೆಂ. ನಿಂದ 20.0 ಡಿಗ್ರಿ ಸೆಂ. ವರೆಗೆ ಮತ್ತು ಬೆಳಗಿನ ಆದ್ರ್ರತೆಯ ಪ್ರಮಾಣವು ಶೇ. 50 ರಿಂದ 60 ರ ವರೆಗೆ ಹಾಗೂ ಮದ್ಯಾಹ್ನದ ಆದ್ರ್ರತೆಯು ಶೇ. 25 ರಿಂದ 30 ರ ವರೆಗೆ ಇರುವ ಸಾದ್ಯತೆ ಇದೆ. ಗಾಳಿಯ ವೇಗವು ಪ್ರತಿ ಘಂಟೆಗೆ 6 ರಿಂದ 8 ಕಿ.ಮೀ ವರೆಗೆ ಇರುವ ಮುನ್ಸೂಚನೆ ಇದ್ದು, ದಿನದ ಹೆಚ್ಚಿನ ಅವಧಿಯಲ್ಲಿ ಗಾಳಿಯು ಪೂರ್ವ ಮತ್ತು ಈಶಾನ್ಯ ದಿಕ್ಕಿನಿಂದ ಬೀಸಲಿದೆ.

ಹಿಂಗಾರು ಬೆಳೆಗಳು ಪ್ರಮುಖವಾಗಿ ಕಾಳುಕಟ್ಟುವ ಹಂತದಲ್ಲಿರುವುದರಿಂದ ತೇವಾಂಶದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನೀರಿನ ಸೌಲಭ್ಯವಿದ್ದಲ್ಲಿ ತೆಳುವಾಗಿ ನೀರು ಹಾಯಿಸಬೇಕು ಮತ್ತು ತಡವಾಗಿ ಬಿತ್ತಿದ ಬೆಳೆಗಳಲ್ಲಿ ಕೀಟ ಹಾಗೂ ರೋಗದ ಬಗ್ಗೆ ರೈತಬಾಂಧವರು ಗಮನವಹಿಸಬೇಕು.

ನೀರಾವರಿ ಆಶ್ರಯದ ಬೆಳೆಗಳಿಗೆ ಹೂವಾಡುವ, ಕಾಳುಕಟ್ಟುವ ಹಂತಗಳಲ್ಲಿ ಹಗುರವಾಗಿ ನೀರು ಕೊಡುವುದು ಸೂಕ್ತ. ಮುಂಚಿತವಾಗಿ ಬಿತ್ತಿದ ತೊಗರಿ ಬೆಳೆಯ ಕಟಾವು ಹಾಗೂ ಹತ್ತಿ ಬೆಳೆಯಲ್ಲಿ ಅರಳಿದ ಹತ್ತಿಯನ್ನು ಬಿಡಿಸುವ ಕಾರ್ಯವನ್ನು ಮಂದುವರಿಸಬೇಕು. 

ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳನ್ನು, ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Leave a Reply