ಅಂದು ಮನಸ್ಸುಗಳು ಹೀಗಿರಲಿಲ್ಲ

2 years ago

ಕೆಲವೇ ನೂರು ರೂಪಾಯಿಗಳ ಸಂಬಳ, ಮನೆ ತುಂಬಾ ಮಕ್ಕಳು, ಚಿಕ್ಕದಾದ ಮನೆಗಳು, ಆಗಲು ಅನೇಕ ಕಷ್ಟಗಳಿತ್ತು, ಸಮಸ್ಯೆಗಳು ಇತ್ತು ಆದರೆ ಯಾರೂ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ವಿಶ್ವಾಸ ತುಂಬಲು ಸುತ್ತಲೂ ಜನರು ಇರುತ್ತಿದ್ದರು, ಕಣ್ಣೀರು ಒರೆಸಲು ಜೊತೆಗಾರ ಇರುತ್ತಿದ್ದರು, ಭರವಸೆಯನ್ನ ತುಂಬಲು ಒಳ್ಳೆಯ ಜನಗಳು ಇದ್ದರು, ತಮ್ಮ ಕಷ್ಟದ ನಡುವೆ ಅನ್ಯರ ಸಂಕಷ್ಟದ ಸಮಯದಲ್ಲಿ ನೆರವಿಗೆ ನಿಲ್ಲುವ ದೊಡ್ಡ ಮನಸ್ಸಿನ ಬಡಜನರಿದ್ದರು

ಇಂದು ಲಕ್ಷಾಂತರ ರೂಪಾಯಿಗಳ ಸಂಬಳ, ಬೆರಳೆಣಿಕೆಯಷ್ಟು ಮಕ್ಕಳು, ದೊಡ್ಡ ದೊಡ್ಡ ಮನೆಗಳು, ಆದರೆ ವಿಶ್ವಾಸದ ಮಾತನ್ನು ಆಡುವವರಿಲ್ಲ, ಭರವಸೆ ತುಂಬುವವರಿಲ್ಲ, ಯಾರಿಗೆ ಯಾರು ಪರಿಚಯವಿಲ್ಲ, ಸಣ್ಣಪುಟ್ಟ ಸಮಸ್ಯೆಗಳಿಗೂ ಹೆದರಿ, ಆತ್ಮಹತ್ಯೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಹೃದಯ ಶೂನ್ಯ ಶ್ರೀಮಂತರ ನಡುವೆ

ಅಂದು ಮನೆಗಳು ಚಿಕ್ಕದಿತ್ತು ಆದರೂ ನೆಂಟರು ಬಂದರೆ ಅವರನ್ನು ಗಮನಿಸಲು  ಅದೆಷ್ಟು ಆಸಕ್ತಿ, ಅದೆಷ್ಟು ಪ್ರೀತಿ, ಅವರನ್ನು ಮನೆಯಲ್ಲಿ ಉಳಿಸಿಕೊಂಡು ಅವರೊಂದಿಗೆ ಹರಟು ತಾ ಅವರನ್ನು ಬೀಳ್ಕೊಡುವ ತನಕ ತಮ್ಮ ನೋವನ್ನು ಮರೆತು ನಗುಮುಖದಿ, ಬಾಳುತ್ತಿದ್ದರು

ಇಂದು ಮನೆಗಳು ದೊಡ್ಡದು, ನೆಂಟರು ಬರುವವರು ಇಲ್ಲ, ಬಂದರೆ ಉಳಿದುಕೊಳ್ಳಿ ಎಂದು ಹೇಳುವವರು ಇಲ್ಲ, ಪ್ರೀತಿ ಇಲ್ಲದ, ತೋರಿಕೆಯ ಸತ್ಕಾರ, ಯಾವ ಗಳಿಗೆಯಲ್ಲಿ ಹೊರಡುತ್ತಾರೋ ಎಂಬ ನಿರೀಕ್ಷೆಯಲ್ಲಿ ಇವರ ನಡವಳಿಕೆಗಳಿರುತ್ತದೆ

ಅಂದು, ಹಲವಾರು ಮನೆಗಳಿಗೆ ಒಂದೇ ಶೌಚಾಲಯ, ಆದರೂ ಯಾರಿಗೂ ಯಾವ ಅಂಟು ಜಾಡ್ಯ ಬರಲಿಲ್ಲ, ಯಾರೂ ಆಸ್ಪತ್ರೆಗಳಿಗೆ ಅಲೆದಾಡುತ್ತಿರಲಿಲ್ಲ. ರಸ್ತೆಯ ನಲ್ಲಿಯ ನೀರು, ಬೋರ್ವೆಲ್ ಗಳಲ್ಲಿ ಬೊಗಸೆಯಲ್ಲಿ ನೀರು ಕುಡಿದು, ಸಿಕ್ಕಿದ್ದು ತಿಂದು, ಕುಣಿದು ಕುಪ್ಪಳಿಸಿ ಆಟ ಆಡಿಕೊಂಡು ಬೆಳೆಯುತ್ತಿದ್ದ ಮಕ್ಕಳು

ಇಂದು ಮನೆಯ ತುಂಬಾ ಕೊಠಡಿಗೊಂದು ಶೌಚಾಲಯ, ಆದರೂ ಅನೇಕ ರೋಗಗಳು, ಔಷಧಿಗಳು ಇವರ ಮನೆಯ ಆಹಾರವಾಗಿದೆ, ಆಸ್ಪತ್ರೆಗಳು ಇವರಿಗೆ ನಿತ್ಯ ದೇವಾಲಯವಾಗಿದೆ, ಎಲ್ಲವೂ ಶುದ್ಧ ನೀರು, ಶುದ್ಧ ಆಹಾರ, ಶುದ್ಧ ವಾತಾವರಣ, ಆದರೂ ಮಕ್ಕಳು  ಆಡಿ ಆನಂದಿಸುವುದಿಲ್ಲ, ಕುಣಿದು ಕುಪ್ಪಳಿಸುವುದಿಲ್ಲ, ಉತ್ಸಾಹವು ಇಲ್ಲದೆ, ಒಂಟಿತನದಲ್ಲಿ ಬದುಕುತ್ತಾರೆ

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply