ರಂಗಭೂಮಿಯಲ್ಲಿ ರಂಗ ಸಂಘಟಕರ ಪಾತ್ರ ಬಹಳ ಮುಖ್ಯ: ಸಿ.ಎಂ.ನರಸಿಂಹಮೂರ್ತಿ 

2 years ago

ಬೆಂಗಳೂರು: ರಂಗದ ಮುಂದೆ ನೂರಾರು ಜನ ವಿಜೃಂಭಿಸಿದರೆ, ರಂಗದ ಹಿಂದೆ ಕೆಲಸ ಮಾಡುವ ರಂಗ ಸಂಘಟಕರ ಪಾತ್ರ ಬಹಳ ಮುಖ್ಯವಾದದ್ದು ಎಂದು ಕರ್ನಾಟಕ  ನಾಟಕ  ಅಕಾಡೆಮಿ ಮಾಜಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಅವರು ಕನ್ನಡ ಭವನದಲ್ಲಿ ಸಂಸ ಥಿಯೇಟರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಂಗಕರ್ಮಿ ಸೋಮಶೇಖರ್ ಅವರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಆಯೋಜಿಸಿದ್ದ ಸೋಮಣ್ಣ 50 ಕಾರ್ಯಕ್ರಮದಲ್ಲಿ ಜನಪದ ಗಾಯನ, ನಾಟಕ ಪ್ರದರ್ಶನ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಮನುಷ್ಯನಿಗೆ ಸಹಾಯ ಮಾಡುವ ಮೂಲಕ ರಂಗಭೂಮಿಯ ರಂಗಕರ್ಮಿಯಾಗಿ ಸೋಮಣ್ಣ ಅಭಿನಂದನೆಗೆ ಪಾತ್ರರಾಗಿದ್ದಾರೆ. ಸಂಸ ಥಿಯೇಟರ್ ಅಧ್ಯಕ್ಷರಾಗಿ, ಎಂಇಎಸ್ ರಂಗ ಶಾಲೆ ಹಾಗೂ ಸೃಷ್ಟಿ  ರಂಗ ಸಂಸ್ಥೆಯಲ್ಲಿ ಉತ್ತಮ ಸೇವೆ ಮಾಡಿದ್ದಾರೆ ಎಂದರು.

ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಾಟಕ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಮಾತನಾಡಿ, ಸೋತಾಗ ಸಾಂತ್ವನ ನುಡಿಗಳನ್ನು ಹೇಳುವ ಮೂಲಕ ಬದುಕನ್ನು ಮೇಲೆ ಎತ್ತುವ ಪ್ರತಿ ಮನುಷ್ಯರು ಅಭಿನಂದನೆಗೆ ಅರ್ಹರಾಗಿರುತ್ತಾರೆ. ಅಂತಹ ಸಾಲಿನಲ್ಲಿ ರಂಗಭೂಮಿಯ ತೆರೆಯ ಹಿಂದಿನ ಕಾರ್ಯ ಶಿಲ್ಪಿಯಾಗಿ ಸಂಸ ಥಿಯೇಟರ್  ಅಧ್ಯಕ್ಷರಾಗಿ ರಂಗಭೂಮಿಯಲ್ಲಿ ನಿರಂತರ ಸೇವೆಯನ್ನು ಮಾಡುತ್ತಾ ಬಂದಿರುವ ಸೋಮಣ್ಣನವರಿಗೆ 50ರ ಸಂಭ್ರಮವು ರಂಗಭೂಮಿಯ  ಗೌರವವನ್ನು ಹೆಚ್ಚಿಸಿದೆ. ಇದು ಇಂದಿನ ಯುವ ರಂಗ ಕರ್ಮಿಗಳಿಗೆ  ಮಾದರಿಯಾಗಲಿ ಎಂದರು. 

ಹಿರಿಯ ಯಕ್ಷಗಾನ ಭಾಗವತ ಕಲಾವಿದ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಆರ್ಯಭಟ ಪ್ರಶಸ್ತಿ ಪುರಸ್ಕೃತ ರಂಗ ಕರ್ಮಿ ಶಶಿಕಾಂತ ಯಡಹಳ್ಳಿ ಅಭಿನಂದನ ಭಾಷಣ ಮಾಡಿದರು. ಹಿರಿಯ ರಂಗಕರ್ಮಿ ದಾವಣಗೆರೆ ಎನ್ ಎಸ್ ರಾಜು, ರಂಗ ಸಂಘಟಕ ಸಂಸ ಸುರೇಶ್, ರಂಗ ನಿರ್ದೇಶಕಿ ನಿರ್ಮಲ ನಾದನ್ ಹಾಜರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ನಂಜಪ್ಪ ದೊಡ್ಡ ಮಧುರೆ ಮತ್ತು ಸಂಗಡಿಗರು ಜನಪದ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕೊನೆಯಲ್ಲಿ ರಂಗ ನಿರ್ದೇಶಕ ಗಿರೀಶ್ ಮೇಲುಕೋಟೆ ನಿರ್ದೇಶನದಲ್ಲಿ ಭಾಸನ ಕರ್ಣಭಾರ ನಾಟಕ ಪ್ರದರ್ಶನ ನಡೆಯಿತು.

Leave a Reply