ರಾಜಕಾರಣಿಗಳು ಸಾಮಾನ್ಯವಾಗಿ ಪುಸ್ತಕಗಳನ್ನು ಓದುವುದು, ಸಂಗೀತವನ್ನು ಕೇಳುವುದು, ನಾಟಕಗಳನ್ನು ನೋಡುವುದು ಹಾಗೂ ವಿಚಾರ ಸಂಕೀರ್ಣಗಳಲ್ಲಿ ಪಾಲ್ಗೊಳ್ಳುವುದು ಅಪರೂಪವಾಗಿರುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬಹಳಷ್ಟು ರಾಜಕಾರಣಿಗಳಿಗೆ ತಮ್ಮ ಕಾರ್ಯದ ನಡುವೆ ಬಿಡುವು ಸಿಗುವುದಿಲ್ಲ. ಕೆಲವು ರಾಜಕಾರಣಿಗಳಿಗೆ ಬಿಡುವು ಸಿಕ್ಕಿದರೆ ಆ ಬಿಡುವಿನ ವೇಳೆಯಲ್ಲಿ ತಮ್ಮದೇ ಆದ ಸ್ವಂತ ವ್ಯಾಪಾರ ವ್ಯವಹಾರಗಳಿಗೆ ಸಮಯವನ್ನು ಮೀಸಲಿಡುತ್ತಾರೆ. ಆದರೆ ಬೆರಳೆಣಿಕೆಯಷ್ಟು ರಾಜಕಾರಣಿಗಳು ರಾಜಕಾರಣದ ಬಿಡುವಿನ ವೇಳೆಯಲ್ಲಿ ಓದುವ ಹವ್ಯಾಸ ಬರೆಯುವಂತಹ ಕಲೆಗಾರಿಕೆ ಸಂಗೀತ ಕೇಳುವುದು ಸಾಂಸ್ಕೃತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ವಿಚಾರ ಸಂಕೀರ್ಣಗಳಲ್ಲಿ ಅತಿಥಿಗಳಾಗಿ ಇಲ್ಲವೇ ಪ್ರೇಕ್ಷಕರಾಗಿ ಭಾಗವಹಿಸಿ ತಮ್ಮ ಜ್ಞಾನದ ಮಿತಿಯನ್ನ ವಿಸ್ತಾರಗೊಳಿಸಿಕೊಳ್ಳುವ ವಿಚಾರದಲ್ಲಿ ಆಸಕ್ತ ರಾಗಿರುತ್ತಾರೆ. ಇಂತಹ ಬೆರಳೆಣಿಕೆಯಷ್ಟು ರಾಜಕಾರಣಿಗಳಲ್ಲಿ ಎಂಪಿ ಪ್ರಕಾಶ್ ರವರು ಪ್ರಮುಖರಾಗಿ ಗುರುತಿಸಲ್ಪಟ್ಟಿದ್ದರು.
ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಇಲ್ಲವೇ ಕಲೆ ಇವುಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನ ಮುಖ್ಯ ಅತಿಥಿಗಳನ್ನಾಗಿ ಬರಮಾಡಿಕೊಳ್ಳಬೇಕಾದರೆ ಅವರ ಆಯ್ಕೆ ಹೇಗೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ ಕಾರಣ ಬಹಳಷ್ಟು ರಾಜಕಾರಣಿಗಳಿಗೆ ಚುನಾವಣೆ ಅಧಿಕಾರ ಅಂತಸ್ತು ಇವುಗಳಲ್ಲಿ ಮಾತ್ರವೇ ನಂಬಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ರಾಜಕೀಯ ಕ್ಷೇತ್ರದಿಂದ ಆಯ್ಕೆ ಮಾಡುವುದು ತುಂಬಾ ಕಷ್ಟದ ಕೆಲಸವಾಗಿದೆ. ಕೆಲವೊಂದು ರಾಜಕಾರಣಿಗಳು ಇನ್ನು ಎಂಪಿ ಪ್ರಕಾಶ್ ರವರ ರೀತಿಯಲ್ಲಿ ಆಸಕ್ತಾರಾದವರು ಇದ್ದಾರೆ.
ಆದರೆ ಅವರುಗಳು ಅಧಿಕಾರದಲ್ಲಿ ಇಲ್ಲದೆ ಇರುವ ಕಾರಣದಿಂದ ಅವರನ್ನು ಮುಖ್ಯ ಅತಿಥಿಯನ್ನಾಗಿಸಿದರೆ ಜನರನ್ನು ಸೇರಿಸಿವುದು ಕಷ್ಟ. ಇಲ್ಲವೇ ಮಾಧ್ಯಮದವರು ಪ್ರಚಾರವನ್ನು ಕೊಡುವುದಿಲ್ಲ ಎನ್ನುವ ಮತ್ತೊಂದು ಕಾರಣವೂ ಇದೆ. ಹೀಗಾಗಿ ಜನ ಸೇರಬೇಕು ಕಾರ್ಯಕ್ರಮದ ಸುದ್ದಿ ಆಗಬೇಕು ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಂಸ್ಕೃತಿ ಕಲೆ, ಇವುಗಳಲ್ಲಿ ನಯಾಪೈಸೆ ಆಸಕ್ತಿ ಇಲ್ಲದ ಅಧಿಕಾರದಲ್ಲಿರುವ ಜನರನ್ನು ಕರೆಸುವಂತಹ ಕೆಲಸವನ್ನು ಅನಿವಾರ್ಯವಾಗಿ ಮಾಡುತ್ತಿದ್ದಾರೆ.
ಎಂಪಿ ಪ್ರಕಾಶ್ ಕರ್ನಾಟಕ ರಾಜ್ಯ ಕಂಡ ಅಪರೂಪದ ರಾಜಕಾರಣಿ. ವೇದಿಕೆಯ ಮೇಲೆ ನಿಂತರೆ ಯಾವುದೇ ವಿಚಾರವನ್ನು ಬೇಕಾದರೂ ಹಲವಾರು ಗಂಟೆಗಳ ಕಾಲ ಅರ್ಥಗರ್ಭಿತವಾಗಿ ವಿಚಾರಪೂರಿತವಾಗಿ ಆಸಕ್ತಿಯೊಂದಿಗೆ ಮಾತನಾಡುವಂತಹ ಜ್ಞಾನ ಮತ್ತು ಪಾಂಡಿತ್ಯವಿತ್ತು. ಅದೇ ರೀತಿಯಲ್ಲಿ ತಮ್ಮ ಅಚ್ಚುಮೆಚ್ಚಿನ ಕ್ಷೇತ್ರವಾದ ಹೂವಿನ ಹಡಗಲಿಯ ಜನರು ಇಲ್ಲವೇ ರಾಜ್ಯದ ಯಾವುದೇ ಸಾಮಾನ್ಯ ಜನರು ಇವರ ಮನೆಗೆ ಅಥವಾ ಕಚೇರಿಗೆ ಭೇಟಿ ಮಾಡಲು ಬಂದಾಗ ಅವರೊಂದಿಗೆ ಒಬ್ಬ ಸಾಮಾನ್ಯ ನಾಗರೀಕರ ರೀತಿಯಲ್ಲಿ ಯಾವುದೇ ಆಡಂಬರ ಅಬ್ಬರ ಅಹಂಕಾರವಿಲ್ಲದೆ ಪ್ರೀತಿಯಿಂದ ಗ್ರಾಮೀಣ ಭಾಷೆಯಲ್ಲಿ ಮಾತನಾಡಿಸುತ್ತಿದ್ದ ರೀತಿ ಗಮನಿಸಿದಾಗ ಅಚ್ಚರಿಯನಿಸುತ್ತಿತ್ತು. ಇದು ಹೇಗೆ ಸಾಧ್ಯ ಎಂಬ ಭಾವನೆಯು ಬರುತ್ತಿತ್ತು.
ಬಹುಶಃ ಇವರಲ್ಲಿದ್ದಂತಹ ಸಾಹಿತ್ಯ ಸಂಗೀತದ ಪ್ರೀತಿ ಪ್ರೇಮ ಇವರನ್ನು ಒಬ್ಬ ಮನುಷ್ಯರನ್ನಾಗಿಸಿತ್ತು. ಅದಕ್ಕಾಗಿ ಏನೇ ಆದರೂ ಮಾನವರಾಗಿ ಬದುಕಬೇಕೆಂಬ ವಿಚಾರ ಇವರಲ್ಲಿ ಆಳವಾಗಿ ಬೇರೂರಿತ್ತು.
ಎಂಪಿ ಪ್ರಕಾಶ್ 1983ರಿಂದ ಸತತವಾಗಿ ಶಾಸಕರಾಗಿ ಹಲವಾರು ಬಾರಿ ಆಯ್ಕೆಯಾಗಿ ರಾಜ್ಯದ ಅನೇಕ ಖಾತೆಗಳ ಸಚಿವರಾಗಿ ಉಪಮುಖ್ಯಮಂತ್ರಿಯನ್ನಾಗಿ ಪ್ರತಿಯೊಂದು ಸಂದರ್ಭದಲ್ಲೂ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ತಮ್ಮ ಅಧಿಕಾರವನ್ನು ನಡೆಸಿರುತ್ತಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಶುದ್ಧವಾದ ಜೀವನವನ್ನು ನಡೆಸಿದಂತಹ ಕೀರ್ತಿಯು ಇವರ ಪಾಲಿಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಇಲಾಖೆಗೆ ಒಂದು ಹೊಸ ಆಯಾಮವನ್ನು ಕೊಟ್ಟು ಅಕಾಡೆಮಿ ಗಳಿಗೆ ಜೀವವನ್ನು ತುಂಬಿದರು. ನಿಜಕ್ಕೂ ನಾಡಿನ ಸಾಂಸ್ಕೃತಿಕ ಕ್ಷೇತ್ರ ಇವರ ಕಾಲದ ಅವಧಿಯಲ್ಲಿ ತುಂಬಾ ಹೆಮ್ಮೆಯಿಂದ ಮೆರೆದಿತ್ತು. ದೇಶ ವಿದೇಶಗಳಲ್ಲಿ ನಮ್ಮ ರಾಜ್ಯದ ಕಲಾ ಪ್ರತಿಭೆಗಳು ಬೆಳಗಲು ಅವಕಾಶವನ್ನು ಕಲ್ಪಿಸಿಕೊಟ್ಟರು.
ಸಾರಿಗೆ ಸಚಿವರಾಗಿ ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿ ಖಾತೆ ಸಚಿವರಾಗಿ ಇಂದು ಸ್ವಚ್ಛ ಭಾರತ್ ಅಭಿಯಾನ ಎನ್ನುವ ಯಾವ ಒಂದು ಅಬ್ಬರದ ಮಾತು ಕೇಳಿ ಬರುತ್ತದೆ. ಇದಕ್ಕೆ ಹಲವಾರು ದಶಕಗಳ ಹಿಂದೆ ಎಂಪಿ ಪ್ರಕಾಶ್ ರವರು ನಿರ್ಮಲ ಕರ್ನಾಟಕ ಎಂಬ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ಮನೆಗೆ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳನ್ನು ಕಟ್ಟುವ ಯೋಜನೆಯನ್ನ ರೂಪಿಸಿದರು. ಇದಕ್ಕಾಗಿ ಕೆಲವರು ಇವರನ್ನು ಕಕ್ಕಸು ಸಚಿವರು ಎಂದರು. ಆದರೂ ಇವರು ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿರ್ಮಲ ಕರ್ನಾಟಕದ ಯೋಜನೆಯ ಅಡಿಯಲ್ಲಿ ಅನೇಕ ಹಳ್ಳಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದರು.
ಸದನದಲ್ಲಿ ಯಾರು ಬೇಕಾದರೂ ಸದಸ್ಯರಾಗಬಹುದು ಯಾರು ಬೇಕಾದರೂ ಮಾತನಾಡಬಹುದು. ಆದರೆ ಸಂಸದೀಯ ಪಟುಗಳ ಮಾತುಗಳು ಮಾತ್ರವೇ ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ ಆಕಾರ ಗ್ರಂಥವಾಗುತ್ತದೆ. ಜೊತೆಗೆ ಮಾರ್ಗದರ್ಶನವನ್ನು ಮಾಡಬಲ್ಲ ಮಹತ್ವದ ಮಾತುಗಳಾಗಿರುತ್ತದೆ.
ಈ ನಿಟ್ಟಿನಲ್ಲಿ ನಾಡು ಕಂಡಂತಹ ಶ್ರೇಷ್ಠ ಸಂಸದೀಯ ಪಟುಗಳ ಸಾಲಿನಲ್ಲಿ ಎಂಪಿ ಪ್ರಕಾಶ್ ಮೊದಲಿಗರಾಗಿ ನಿಲ್ಲುತ್ತಾರೆ. ಇವರು ಸದನದಲ್ಲಿ ಮಾತನಾಡುತ್ತಾರೆ ಎಂದರೆ ಎಲ್ಲರೂ ಸಹ ಒಬ್ಬ ಉಪಾಧ್ಯಾಯರ ಮಾತುಗಳನ್ನ ವಿದ್ಯಾರ್ಥಿಗಳು ಕೇಳುವ ರೀತಿಯಲ್ಲಿ ಆಸಕ್ತಿಯಿಂದ ಕೇಳುತ್ತಿದ್ದರು. ಪಕ್ಷಾತೀತವಾಗಿ ಇವರ ಮಾತುಗಳಿಗಾಗಿ ಹಂಬಲಿಸುತ್ತಿದ್ದರು.
ಇವರ ಮಾತಿನಲ್ಲಿ ದ್ವೇಷ ವಿರುತ್ತಿರಲಿಲ್ಲ ಅಸೂಯೆ ಇರುತ್ತಿರಲಿಲ್ಲ ಆದರೆ ಅನುಭವವಿತ್ತು ಪಾಂಡಿತ್ಯ ಇರುತ್ತಿತ್ತು ಸೂಕ್ಷ್ಮತೆ ಇರುತ್ತಿತ್ತು. ಸರ್ಕಾರಕ್ಕೆ ಮಾರ್ಗದರ್ಶನ ಮಾಡಬಲ್ಲ ದಾರಿಯಾಗಿತ್ತು. ಹೀಗಾಗಿ ಕರ್ನಾಟಕದಲ್ಲಿ ಎಂಪಿ ಪ್ರಕಾಶ್ ರವರ ನಿರ್ಗಮನ ರಾಜಕಾರಣದ ಕ್ಷೇತ್ರದಲ್ಲಿನ ಸಾಹಿತ್ಯ ಸಂಸ್ಕೃತಿ ಕಲೆ ಇವುಗಳ ಸ್ಪರ್ಶ ನೀಡಬಲ್ಲ ನಾಯಕತ್ವದ ನಿರ್ಗಮನವಾಗಿದೆ. ನಿಜಕ್ಕೂ ಇಂತಹ ರಾಜಕಾರಣಿಗಳು ಹುಟ್ಟಿ ಬಂದರೆ ಮಾತ್ರವೇ ರಾಜಕಾರಣದಲ್ಲಿ ಕೀಳು ಮಟ್ಟದ ಮಾತುಗಾರಿಕೆ ದ್ವೇಷದ ಅಬ್ಬರದ ಅರ್ಥವಿಲ್ಲದ ಟೀಕೆಗಳಿಗೆ ಕಡಿವಾಣವಾಗಬಹುದು.
– ಕೆ ಎಸ್ ನಾಗರಾಜ್, ಬೆಂಗಳೂರು




