ಇತ್ತೀಚಿಗೆ ಹಿರಿಯ ಪತ್ರಕರ್ತರೂ ಒಬ್ಬರನ್ನ ಮಾತನಾಡಿಸಿದಾಗ ಅವರು ಹೇಳಿದ ಮಾತುಗಳು ಹೀಗಿತ್ತು. ಈ ಮೊದಲು ಸದನ ನಡೆಯುವ ವೇಳೆಯಲ್ಲಿ ನಾವೆಲ್ಲರೂ ತಪ್ಪದೆ ಭಾಗವಹಿಸಿ ಅದನ್ನು ವರದಿ ಮಾಡುತ್ತಿದ್ದೆವು. ಅಲ್ಲಿ ಗಂಭೀರವಾದ ಚರ್ಚೆಗಳಾಗುತ್ತಿತ್ತು, ಅಂದು ಸದನದಲ್ಲಿದ್ದಂತಹ ಪ್ರತಿನಿಧಿಗಳು ಪ್ರಬುದ್ಧರಾಗಿದ್ದರು, ಮೇಧಾವಿಗಳಾಗಿದ್ದರು, ಸಮಯಪ್ರಜ್ಞೆ ಇತ್ತು, ನಾಡಿನ ಜನರ ಬಗ್ಗೆ ಕಾಳಜಿ ಕಳಕಳಿ ಇತ್ತು, ಜವಾಬ್ದಾರಿಯು ಇತ್ತು. ಈಗ ಸದನದಲ್ಲಿ ನಡೆಯುವ ಘಟನೆಗಳನ್ನ ವರದಿ ಮಾಡುವ ಅವಶ್ಯಕತೆಯೇ ಇಲ್ಲ. ಕೇವಲ ಅಬ್ಬರ, ಕಿರುಚಾಟ, ಧರಣಿ ಮತ್ತು ಕೀಳು ಪದದ ಮಾತುಗಳ ವಿನಿಮಯಗಳು ಇಷ್ಟಕ್ಕೆ ಸದನ ಸೀಮಿತವಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರಬುದ್ಧ ಪ್ರಕಾಶ್ ಅವರಂತಹ ಪ್ರತಿನಿಧಿಗಳು ಪ್ರಜಾಪ್ರಭುತ್ವದಲ್ಲಿ ಇಲ್ಲದಿರುವುದು ದೊಡ್ಡ ದುರಂತವೇ ಸರಿ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ದಶಕದ ಹಿಂದೆ ಸದನದಲ್ಲಿ ಅನೇಕ ಮೇಧಾವಿಗಳಿದ್ದರು. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಸೂದೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ಪ್ರಶ್ನಿಸುತ್ತಿದ್ದರು. ವಿರೋಧ ಪಕ್ಷ ಮತ್ತು ಸರ್ಕಾರದ ನಡುವೆ ವಿವಿಧ ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿತ್ತು. ಹೀಗಾಗಿ ಸದನ ನಡೆದರೆ ರಾಜ್ಯದ ಜನರಿಗೆ ಏನಾದರೂ ಒಂದಷ್ಟು ಒಳ್ಳೆಯದು ಆಗುತ್ತದೆ ಎನ್ನುವ ಆಶಾಭಾವನೆ ಇತ್ತು. ಈಗ ಅಂತಹ ಯಾವ ನಿರೀಕ್ಷೆಗಳನ್ನು ಹೊಂದುವ ಹಾಗಿಲ್ಲ. ಸದನಗಳು ನಡೆಯುತ್ತವೆ. ಪರಸ್ಪರ ಆರೋಪ ಪ್ರತ್ಯಾರೋಪ ಆಗುತ್ತದೆ, ಈ ಮಧ್ಯೆ ಬೇಜವಾಬ್ದಾರಿಯುತ ಸದಸ್ಯರು ತಮ್ಮ ನಾಲಿಗೆಯನ್ನು ಹರಿಬಿಟ್ಟು ಕೀಳು ಮಟ್ಟದ ಭಾಷೆಯನ್ನು ಬಳಸಿ ಸದನದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದ್ದಾರೆ. ಇವುಗಳಿಗೆ ತನಿಖೆ ಎಂಬ ಒಂದು ಹೊಸ ಆಟ, ಅಂತಿಮವಾಗಿ ಯಾವ ಪರಿಣಾಮವೂ ಬೀರುವುದಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಎಂಪಿ ಪ್ರಕಾಶ್ ನೆನಪಾಗುತ್ತಾರೆ. 1940ರ ಜುಲೈ 11ರಂದು ಹುಟ್ಟಿದಂತಹ ಇವರು 2011ರ ಫೆಬ್ರವರಿ 9ರಂದು ತಮ್ಮ ಬದುಕಿನ ಪಯಣವನ್ನು ಮುಗಿಸಿದರು.
ಎಂ ಪಿ ಪ್ರಕಾಶ್ ಎಂದರೆ ಪ್ರಬುದ್ಧ ರಾಜಕಾರಣದ ಸಂಕೇತ, ಎಂ ಪಿ ಪ್ರಕಾಶ್ ಎಂದರೆ ಸಜ್ಜನಿಕೆಯ ಸೌಜನ್ಯದ ನಡವಳಿಕೆಯ ಸಾಕ್ಷಿ ಪ್ರಜ್ಞೆ. ಎಂ ಪಿ ಪ್ರಕಾಶ್ ಎಂದರೆ ಅಪಾರವಾದ ಜ್ಞಾನದ ಭಂಡಾರ, ಎಂ ಪಿ ಪ್ರಕಾಶ್ ಎಂದರೆ ಅನುಭವದ ಹಿನ್ನೆಲೆಯಲ್ಲಿ ಯಾವುದೇ ವೇದಿಕೆಯಲ್ಲೂ ಆ ಕಾರ್ಯಕ್ರಮಕ್ಕೆ ಅನುಗುಣವಾಗಿ ವಿಚಾರ ಪೂರಿತ ಮಾತುಗಳನ್ನಾಡಬಲ್ಲ ಜ್ಞಾನವಂತರು.
ಎಂ ಪಿ ಪ್ರಕಾಶ್ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಒಂದು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ, ಎಚ್ ಡಿ ದೇವೇಗೌಡ, ಜೆ ಎಚ್ ಪಟೇಲ್, ಧರ್ಮಸಿಂಗ್ ಮತ್ತು ಎಚ್ ಡಿ ಕುಮಾರಸ್ವಾಮಿ ಇವರುಗಳ ಸಂಪುಟದಲ್ಲಿ ಸಚಿವರಾಗಿ ಪ್ರತಿಯೊಂದು ಇಲಾಖೆಯಲ್ಲೂ ತಮ್ಮದೇ ಆದಂತಹ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾರೆ.
ಒಬ್ಬ ರಾಜಕಾರಣಿ, ಸಾಹಿತಿಯಾಗಿ ಸಾಹಿತ್ಯವನ್ನು ಓದುವುದರ ಜೊತೆಗೆ ಸ್ವತಹ ಲೇಖಕರಾಗಿ ಹಲವಾರು ಕೃತಿಗಳನ್ನ ರಚಿಸಿರುವುದು ಅಪರೂಪ. ಇಂತಹ ಅಪರೂಪದ ರಾಜಕಾರಣಿ ಎಂ ಪಿ ಪ್ರಕಾಶ್.
ಹಲವಾರು ನಾಟಕಗಳಲ್ಲಿ ಅಭಿನಯಿಸಿ, ಹಲವಾರು ನಾಟಕಗಳನ್ನು ಬರೆದು ಬೇರೆ ಬೇರೆ ಭಾಷೆಯಲ್ಲಿ ಇದ್ದಂತಹ ನಾಟಕಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ನಿರ್ದೇಶನ ಮಾಡಿದ್ದಾರೆ. ಸಂಸ್ಥೆಯನ್ನ ಸ್ಥಾಪಿಸಿ ನಾಟಕೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹೂವಿನ ಹಡಗಲಿ ಎಂಬ ಸಣ್ಣ ಪ್ರದೇಶದಲ್ಲಿ ಸಾಂಸ್ಕೃತಿಕವಾದಂತಹ ಸಂಭ್ರಮವನ್ನು ನೀಡಿದ್ದಾರೆ. ಅಲ್ಲಿನ ಜನರಲ್ಲಿ ಸಾಹಿತ್ಯ, ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿದ್ದಾರೆ.
ಎಂ ಪಿ ಪ್ರಕಾಶ್ ರವರು ರಾಮ್ ಮನೋಹರ್ ಲೋಹಿಯಾ ಇವರ ಅನುಯಾಯಿ. ಸಮಾಜವಾದದಲ್ಲಿ ಅಪಾರವಾದ ನಂಬಿಕೆ ಮತ್ತು ಶ್ರದ್ಧೆ. ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬದುಕಿಗೆ ವಕೀಲರಾಗಿ ದುಡಿಯುತ್ತಲೇ ಸಾರ್ವಜನಿಕ ಬದುಕಿನಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಸಂಡೂರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದವರು. ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ದುಡಿದಿದ್ದವರು. ಜಿಲ್ಲೆಯಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಎಲ್ಲಾ ಕಾಲದಲ್ಲೂ ಹೊಂದಿದ್ದರು.
ಎಂ ಪಿ ಪ್ರಕಾಶ್ ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಇಂದು ಇಡೀ ದೇಶದಲ್ಲಿ ಮಾತನಾಡುತ್ತಿರುವ ಸ್ವಚ್ಛ ಭಾರತದ ಅಭಿಯಾನಕ್ಕೆ ನಾಂದಿ ಪುರುಷರಾಗಿದ್ದಾರೆ. ಇವರು ಮಂತ್ರಿಗಳಾಗಿದ್ದಾಗ ಜಾರಿಗೆ ತಂದಂತಹ ನಿರ್ಮಲ ಕರ್ನಾಟಕ ಎಂಬ ಯೋಜನೆಯಡಿಯಲ್ಲಿ ಶೌಚಾಲಯಗಳನ್ನು ಕಟ್ಟಿಸುವಂತಹ ಕಾರ್ಯ ಇಂದು ದೇಶದ ಕಾರ್ಯಕ್ರಮವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸಚಿವರಾಗಿ ಕನ್ನಡ ನಾಡಿನಲ್ಲಿ ಎಂದೆಂದಿಗೂ ಇವರು ಆ ಇಲಾಖೆಗಳಿಗೆ ಸದಾ ಕಾಲ ನೆನಪು ಮಾಡಿಕೊಳ್ಳುವಂತೆ ಯೋಜನೆಗಳನ್ನು ರೂಪಿಸಿದ್ದಾರೆ. ಇಂದಿಗೂ ಸಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಚಾರ ನೆನಪಿಗೆ ಬಂದರೆ ಎಂ ಪಿ ಪ್ರಕಾಶ್ ಮತ್ತು ಡಾ. ಜೀವರಾಜ್ ಆಳ್ವಾ ಅವರನ್ನು ಕಲಾವಿದರು ಸಾಹಿತಿಗಳು ಸ್ಮರಿಸಿಕೊಳ್ಳುತ್ತಾರೆ.
ಎಂ ಪಿ ಪ್ರಕಾಶ್ ಯಾವುದೇ ವೇದಿಕೆಯಲ್ಲಿ ಭಾಷಣ ಮಾಡಿದರೆ ಹಲವಾರು ಪುಸ್ತಕಗಳನ್ನ ಓದಿದ ಅನುಭವ ಭಾಷಣ ಕೇಳುವವರಿಗೆ ಆಗುತ್ತಿತ್ತು. ಅವರ ಭಾಷಣದಲ್ಲಿ ಅಂತಹ ಸತ್ವವಿರುತ್ತಿತ್ತು. ಆಳವಾದ ಅಧ್ಯಯನವನ್ನು ಅವರ ಮಾತುಗಳಲ್ಲಿ ಗುರುತಿಸಬಹುದಾಗಿತ್ತು.
ಸದನದಲ್ಲಿ ಎಂ ಪಿ ಪ್ರಕಾಶ್ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ಎಲ್ಲಿಯೇ ಇರಲಿ ಮಾತನಾಡಲು ನಿಂತರೆ ಸದಸ್ಯರುಗಳು ಮೌನದಿಂದ ಇವರ ಮಾತುಗಳನ್ನ ಆಲಿಸುತ್ತಿದ್ದರು. ಇವರ ಮಾತುಗಳು ಕೇವಲ ಮಾತುಗಳಾಗಿರುತ್ತಿರಲಿಲ್ಲ, ರಾಜ್ಯದ ಇತಿಹಾಸದಲ್ಲಿ ದಾಖಲಿಸಬಹುದಾದ ದಾಖಲೆಗಳಾಗಿರುತ್ತಿತ್ತು.
ಸದನದಲ್ಲಿ ಒಂದು ದಿನ 13 ಜನ ಮಂತ್ರಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ಸರ್ಕಾರದ ಸಮರ್ಥನೆಗೆ ನಿಂತಂತಹ ದಾಖಲೆ ಇದೆ. ಸದನದಲ್ಲಿ ಎಂಪಿ ಪ್ರಕಾಶ್ ಪ್ರಶ್ನೆ ಕೇಳುವ ದಾಟಿ, ಉತ್ತರ ಕೊಡುವ ರೀತಿ, ಚರ್ಚೆಗಳಲ್ಲಿ ಪಾಲ್ಗೊಂಡು ವಿಷಯವನ್ನು ವಿಸ್ತರಿಸುವ ರೀತಿ, ಎಲ್ಲವೂ ಅನುಕರಣೆಯ ಮತ್ತು ಇಂತಹ ವ್ಯಕ್ತಿತ್ವಗಳು ಪ್ರಜಾಪ್ರಭುತ್ವದಲ್ಲಿ ವಿರಳ.
ಎಂ ಪಿ ಪ್ರಕಾಶ್ ಅವರು ಇಷ್ಟೆಲ್ಲ ಜ್ಞಾನ ವಿದ್ಯೆ ಅನುಭವ ಎಲ್ಲವೂ ಇದ್ದರೂ ತಮ್ಮ ಗ್ರಾಮೀಣ ಪ್ರದೇಶದ ಮತದಾರ ಬಂಧುಗಳು ಭೇಟಿ ಮಾಡಲು ಬಂದಾಗ ಅತ್ಯಂತ ವಿನಯದಿಂದ ಪ್ರೀತಿಯಿಂದ ಆತ್ಮೀಯತೆಯಿಂದ ಸೌಜನ್ಯದಿಂದ ಅವರೊಂದಿಗೆ ಮಾತನಾಡಿ ಆ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದ ಕಾರಣದಿಂದ ಒಬ್ಬ ವ್ಯಕ್ತಿ ಹೀಗೆ ಜನರೊಂದಿಗೆ ಬೆರೆಯಬಹುದೆ ಎನ್ನುವುದನ್ನ ಅಚ್ಚರಿ ಮೂಡುವ ರೀತಿಯಲ್ಲಿ ಬದುಕಿ ತೋರಿಸಿದ್ದರು.
ಎಂ ಪಿ ಪ್ರಕಾಶ್ ರಂತಹ ಪ್ರತಿನಿಧಿಗಳು ಸದನದಲ್ಲಿ ಇಲ್ಲದೆ ಸದನಗಳು ಸೊರಗುತ್ತಿವೆ. ಎಂ ಪಿ ಪ್ರಕಾಶ್ ರವರನ್ನು ನೆನಪು ಮಾಡಿಕೊಳ್ಳುವುದು ಎಂದರೆ ಕೇವಲ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವುದಲ್ಲ, ರಾಜಕೀಯ ರಂಗದಲ್ಲಿರುವ ನಾಯಕರುಗಳು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸ್ವಲ್ಪಮಟ್ಟಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಾವು ಪ್ರತಿನಿಧಿಗಳಾಗಿರುವ ಸಂಸ್ಥೆಗಳಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ತಮ್ಮ ಕಾರ್ಯವನ್ನು ಮಾಡಿ, ಸದನದಲ್ಲಿ ಗಂಭೀರವಾದ ರೀತಿಯಲ್ಲಿ ನಡೆದುಕೊಂಡು ಸದನದ ಗೌರವವನ್ನು ಕಾಪಾಡಿದರೆ ಅಥವಾ ಕೆಡದಂತೆ ವರ್ತಿಸಿದರೆ ಅದುವೇ ಅವರಿಗೆ ಸಲ್ಲಿಸಬಹುದಾದ ಗೌರವವಾಗುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




