ಬೆಂಗಳೂರು ಟ್ರಾಫಿಕ್ ನಿರ್ವಹಣೆ ಮೇಲೆ ಸಿಂಗಪೂರ್ ಹೂಡಿಕೆಗೆ ಪ್ರಸ್ತಾವನೆ
ಐಟಿ-ಬಿಟಿ, ಬಯೋ ಟೆಕ್ನಾಲಜಿ, ಹೆಲ್ತ್ ಟೂರಿಸಂ ಮೇಲೂ ಹೂಡಿಕೆಗೆ ಚಿಂತನೆ
ಹೊಸ ಉದ್ಯೋಗಗಳ ಸೃಷ್ಟಿಗೆ ಮೊದಲ ಆದ್ಯತೆ
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಟ್ರಾಫಿಕ್ ಸುಧಾರಣೆಗಾಗಿ ಟ್ರಾಫಿಕ್ ಮ್ಯಾನೇಜ್ಮೆಂಟ್ (ನಿರ್ವಹಣೆ) ಮೇಲೆ ಹೂಡಿಕೆ ಮಾಡುವಂತೆ ಸಿಂಗಪೂರ್ ಉದ್ಯಮಗಳ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ಪ್ರಸ್ತಾವ ಸಲ್ಲಿಸಿದ್ದಾರೆ.
ವಿಕಾಸಸೌಧದಲ್ಲಿ ಸಿಂಗಪೂರ್ ಮೂಲದ ಹೂಡಿಕೆದಾರ ಕಂಪೆನಿಗಳ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ ಸಚಿವ ಕೃಷ್ಣಭೈರೇಗೌಡ ಅವರು, “ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ನಗರಗಳಲ್ಲಿ ಮಿತಿಮೀರಿದ ಟ್ರಾಫಿಕ್ ಸಮಸ್ಯೆ ಇದೆ. ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಸಹ ಟ್ರಾಫಿಕ್ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಆದರೆ, ಸಿಂಗಪೂರ್ ಟ್ರಾಫಿಕ್ ನಿರ್ವಹಣೆಯಲ್ಲಿ ಮಾದರಿಯಾಗಿದ್ದು, ಬೆಂಗಳೂರಿನ ಟ್ರಾಫಿಕ್ ನಿರ್ವಹಣೆ ಮೇಲೂ ಹೂಡಿಕೆ ಮಾಡಬಹುದು. ಸರ್ಕಾರ ಹೂಡಿಕೆದಾರರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ” ಎಂದು ಆಶ್ವಾಸನೆ ನೀಡಿದರು.
ಟ್ರಾಫಿಕ್ ನಿರ್ವಹಣೆ ಮಾತ್ರವಲ್ಲದೆ, ಸಾರ್ವಜನಿಕ ಸಾರಿಗೆ, ರಸ್ತೆ ನಿರ್ವಹಣೆ ವಿಚಾರದಲ್ಲೂ ಸಿಂಗಪೂರ್ ಮಾದರಿ ನಗರ. ಹೀಗಾಗಿ ನಮ್ಮ ಪ್ರಸ್ತಾವನೆಯನ್ನು ಹೂಡಿಕೆದಾರರು ಒಪ್ಪಿದರೆ ಶೀಘ್ರದಲ್ಲೇ ಒಂದು ನಿಯೋಗ ಸಿಂಗಪೂರ್ ಗೆ ಭೇಟಿ ನೀಡಿ ಅಲ್ಲಿನ ಟ್ರಾಫಿಕ್ ನಿರ್ವಹಣೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿನ ಪ್ರಗತಿಯ ಬಗ್ಗೆ ಅಧ್ಯಯನ ನಡೆಸಲಿದೆ” ಎಂದು ತಿಳಿಸಿದರು.
ಅಲ್ಲದೆ, “ಬಯೋ ಟೆಕ್ನಾಲಜಿ ವಿಭಾಗದಲ್ಲೂ ಬೆಂಗಳೂರು ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಐಟಿ-ಬಿಟಿ, ಡೇಟಾ ಸೈನ್ಸ್, ಹಾಗೂ ಹೆಲ್ತ್ ಟೂರಿಸಂ ವಿಭಾಗದಲ್ಲೂ ಹೂಡಿಕೆಗೆ ಮುಕ್ತ ಅವಕಾಶ ಇದೆ. ರಾಜ್ಯ ಸರ್ಕಾರ ಹಾಗೂ ವಿಜ್ಞಾನ-ತಂತ್ರಜ್ಞಾನ ಹಾಗೂ ಕೈಗಾರಿಕಾ ಸಚಿವರು ಸಹ ಹೊಸ ಹೂಡಿಕೆ- ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ಸುಕರಾಗಿದ್ದಾರೆ. ಹೀಗಾಗಿ ಈ ವಿಭಾಗದಲ್ಲೂ ಹೂಡಿಕೆ ಮಾಡಬಹುದು” ಎಂದು ಹೂಡಿಕೆದಾರರಿಗೆ ಮುಕ್ತ ಅವಕಾಶ ನೀಡಿದರು.
“ಆಪಲ್ ಹಾಗೂ ವಿಸ್ಟ್ರಾನ್ ಕಂಪೆನಿಗಳ ಜೊತೆಗೆ ರಾಜ್ಯದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಒಪ್ಪಂದಗಳಾಗಿವೆ. ಹೀಗಾಗಿ ಸಿಂಗಪೂರ್ ಉದ್ಯಮಗಳ ಹೂಡಿಕೆಗೆ ಸಂಬಂಧಿಸಿದ ವಿವರಗಳನ್ನು ಮೊದಲು ಸರ್ಕಾರಕ್ಕೆ ಸಲ್ಲಿಸಿ. ನಂತರ ಮುಂದಿನ ವಿಚಾರದ ಬಗ್ಗೆ ಚರ್ಚಿಸೋಣ” ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಸಿಂಗಪೂರ್ ಉದ್ಯಮಗಳ ಅಧಿಕಾರಿಗಳು, “ಭಾರತದ ವಿವಿಧ ಕ್ಷೇತ್ರಗಳಲ್ಲಿ $ 70 ಮಿಲಿಯನ್ ಅಮೇರಿಕಾ ಡಾಲರ್ ಹೂಡಿಕೆ ಮಾಡುವ ಉದ್ದೇಶ ಇದೆ. ಈ ಪೈಕಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ತಿಳಿಸಿದರು.
ಸಭೆಯಲ್ಲಿ ಸಿಂಗಪೂರ್ ಉದ್ಯಮ ಅಧಿಕಾರಿಗಳ ಜೊತೆಗೆ ಮಾಜಿ ಕಾನ್ಸುಲೇಟ್ ಜನರಲ್ ಅಜಿತ್ ಸಿಂಗ್ ಉಪಸ್ಥಿತರಿದ್ದರು.




