ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿಗಳು ಮತ್ತು ಕಡತಗಳು ಕಾಲಕಾಲಕ್ಕೆ ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ ಗೆ ಮುಂದಕ್ಕೆ ಹೋಗಿ ವಿಲೇವಾರಿಯಾಗಬೇಕಾದರೆ ಒಂದಷ್ಟು ಹಣ ನಿಗದಿಯಾಗಿರುತ್ತದೆ. ಅವುಗಳು ಪಾವತಿಯಾದರೆ ಮಾತ್ರ ಅರ್ಜಿಗಳು ಮತ್ತು ಕಡತಗಳು ಸುಗಮವಾಗಿ ಸಾಗುತ್ತವೆ. ವ್ಯವಸ್ಥೆ ಸರಿ ಇದ್ದರೆ ಸಕಾರಾತ್ಮಕವಾದ ಆದೇಶಗಳು ಹೊರಬರುತ್ತವೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ವಾದ ವಿವಾದ ಮಾಡಿದರೆ, ಪ್ರತಿಷ್ಠೆಯಿಂದ ನಡೆದುಕೊಂಡರೆ, ಅವರಿವರ ಶಿಫಾರಸು ಮಾಡಿಸಿದರೆ ಕೆಲವು ಬಾರಿ ಕಡತಗಳು ಮತ್ತು ಅರ್ಜಿಗಳು ಕಣ್ಮರೆಯಾಗುತ್ತವೆ. ಇವುಗಳ ಹುಡುಕಾಟದಲ್ಲಿ ಕಚೇರಿಗಳಿಗೆ ಸುತ್ತಾಡಿ ಸುಸ್ತಾಗಿ ನಿರಾಸೆಯಾಗುತ್ತದೆ. ಅಂತಿಮವಾಗಿ ಅರ್ಜಿಯೂ ಸಿಗುತ್ತದೆ, ಕಡತವು ಸಿಗುತ್ತದೆ. ಸೂಕ್ಷ್ಮವಾದ ಕಣ್ಣಿನಿಂದ ಇವುಗಳನ್ನು ಪರಿಶೀಲಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳು ಲೋಪಗಳನ್ನು ಹುಡುಕಿ ಅವುಗಳನ್ನು ಸರಿಪಡಿಸಿ ಕೊಡುವಂತೆ ಮತ್ತಷ್ಟು ಪತ್ರ ವ್ಯವಹಾರಗಳನ್ನ ನಡೆಸುತ್ತಾರೆ. ಇಲ್ಲಿಯ ಪರಿಸ್ಥಿತಿ ಅರಿತು ಮತ್ತೆ ಮುಂದುವರೆದರೆ ಕೇಳುವವರು ಹೇಳುವವರು ಯಾರು ಇಲ್ಲದ, ದ್ವನಿ ಇಲ್ಲದ ಜನರಿಗೆ ನಕಾರಾತ್ಮಕವಾದ ಆದೇಶಗಳು ಹೊರಬರುತ್ತವೆ. ಇವುಗಳನ್ನ ಕಂಡು ಅಸಹಾಯಕರಾಗಿ ಮತ್ತೆ ಅಲ್ಲಿನ ವ್ಯವಸ್ಥೆಯನ್ನು ನಿಯಂತ್ರಿಸುವ ಮಂದಿಯೊಂದಿಗೆ ಸಂಪರ್ಕ ಸಾಧಿಸಿದರೆ ಅಂತೂ ಇಂತೂ ಅರ್ಜಿಗಳು ಮತ್ತು ಕಡತಗಳು ಒಂದು ಹಂತಕ್ಕೆ ಬಂದು ನಿಲ್ಲುತ್ತವೆ.
ಕಡತಗಳು ಮತ್ತು ಅರ್ಜಿಗಳು ಕಣ್ಮರೆ ಆಗುವುದು ಸರ್ವೇಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವುದಾದರೂ ಒಂದು ಮಾರ್ಗವನ್ನು ಹುಡುಕಿ ಕಡತಗಳು ಮತ್ತು ಅರ್ಜಿಗಳು ಕಣ್ಮರೆಯಾಗದಂತೆ ಕಾಯುವಂತಹ ಕೆಲಸಗಳನ್ನ ಮಾಡಬೇಕು. ಪ್ರಾಣಿಗಳಿಗೆ ಅವುಗಳ ಸಂಚಾರಕ್ಕೆ ನಿಗಾ ವಹಿಸಲು ಜಿಪಿಎಸ್ ಅಳವಡಿಸುವಂತೆ ಸಾಧ್ಯವಾಗುವುದಾದರೆ ಸರ್ಕಾರಿ ಕಚೇರಿಯಲ್ಲಿ ಕಡತಗಳಿಗೂ ಜಿಪಿಎಸ್ ವ್ಯವಸ್ಥೆಯನ್ನ ಅಳವಡಿಸಿದರೆ ಕಡತಗಳ ಕಣ್ಮರೆ ರೋಗಕ್ಕೆ ಪರಿಹಾರ ದೊರೆತು ನಾಗರೀಕರ ಸುತ್ತಾಟದ ಸುಸ್ತಿನ ಕಥೆ ಒಂದಷ್ಟು ಕಡಿಮೆಯಾಗುತ್ತದೆ.
ಸರ್ಕಾರಿ ಕಚೇರಿಗಳಲ್ಲಿನ ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮಗಳಾಗಬೇಕು ಹೊರತು, ಬೇರೆ ಯಾವ ಮಾರ್ಗದಲ್ಲೂ ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳಲ್ಲಿ ನ್ಯಾಯವನ್ನು ಒದಗಿಸಲು ಸಾಧ್ಯವಾಗುವುದಿಲ್ಲ.
ಸರ್ಕಾರಿ ಕಚೇರಿಗಳಲ್ಲಿನ ವ್ಯವಸ್ಥೆ ಮತ್ತು ಆಡಳಿತದ ರೀತಿ ನೀತಿ ಇವುಗಳ ಬಗ್ಗೆ ವಿಧಾನಸೌಧದಲ್ಲಿ ಒಂದು ದಿನ ಸುಧೀರ್ಘವಾಗಿ ಚರ್ಚೆಯಾಗಿ ಸುಧಾರಣೆಯ ಮಾರ್ಗಗಳನ್ನ ಪಡೆದುಕೊಳ್ಳುವುದು ಸಾಧ್ಯವಿದೆಯೇ ಎಂಬುದನ್ನು ಯೋಚಿಸಬೇಕಾಗಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




