ಬೆಂಗಳೂರು: ತಮ್ಮ ಕಚೇರಿಯಲ್ಲಿ ವಿಲೇವಾರಿಯಾಗದೆ ಸಾವಿರಾರು ಕಡತಗಳು ಕೊಳೆಯುತ್ತಿವೆ ಎಂಬ ಆರೋಪದಿಂದ ಎಚ್ಚೆತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಕಾಲಮಿತಿಯೊಳಗೆ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ನಿಗದತ ಸಮಯದಲ್ಲಿ ಕಡತ ವಿಲೇವಾರಿ ಮಾಡದಿದ್ದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ತಮ್ಮೆಲ್ಲ ಕಾರ್ಯಕ್ರಮಗಳನ್ನು ಬದಿಗೊತ್ತಿ ರೇಸ್ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಕಡತಗಳು ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಅಧಿಕೃತ ಕಚೇರಿ ಕೃಷ್ಣಾದಲ್ಲೇ ಪ್ರಮುಖ ಇಲಾಖೆಗಳ ಸಾವಿರಾರು ಕಡತಗಳು ಎರಡರಿಂದ ಮೂರು ತಿಂಗಳಾದರೂ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಪ್ರಮುಖವಾಗಿ ಆರ್ಥಿಕ, ಕಂದಾಯ, ಲೋಕೋಪಯೋಗಿ, ನಗರಾಭಿವೃದ್ಧಿ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬೃಹತ್ ಕೈಗಾರಿಕೆ, ಸಹಕಾರ, ಸಮಾಜ ಕಲ್ಯಾಣ, ಕೃಷಿ, ಕಾರ್ಮಿಕ ಸೇರಿದಂತೆ ಪ್ರಮುಖ ಇಲಾಖೆಗಳ ಕಡತಗಳು ವಿಲೇವಾರಿಯಾಗಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಕಾನೂನಿನ ತೊಡಕುಗಳನ್ನು ಮುಂದಿಟ್ಟುಕೊಂಡು ಕಡತ ವಿಲೇವಾರಿ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಬೊಮ್ಮಾಯಿ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಈಗಾಗಲೇ ಎರಡೂವರೆ ವರ್ಷ ಪೂರ್ಣಗೊಳಿಸಿದೆ. ಅಧಿಕಾರ ಸ್ವೀಕರಿಸಿದ ಪ್ರಾರಂಭದಲ್ಲಿ ಬೊಮ್ಮಾಯಿ ಅವರು ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಕಡತಗಳ ವಿಲೇವಾರಿಗಾಗಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಕಡತ ವಿಲೇವಾರಿಗಾಗಿ ನೇಮಕ ಮಾಡಿಕೊಂಡಿದ್ದಾರೆ. ಕೃಷ್ಣಾದಲ್ಲಿ ಕಡತಗಳ ವಿಲೇವಾರಿಗಾಗಿ ಡಿಜಿಟಲ್ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗಿದೆ.
ನಿಯಮಗಳ ಪ್ರಕಾರ, ಎರಡು ದಿನಗಳಲ್ಲಿ ಕಡತ, ಸಾರ್ವಜನಿಕರ ಕುಂದು-ಕೊರತೆ ಮತ್ತು ಪತ್ರಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕೆಂಬುದು ಇದರ ಉದ್ದೇಶ. ಆದರೆ ಕಳೆದ ಮೂರು ತಿಂಗಳಿನಿಂದ ಪ್ರಮುಖ ಇಲಾಖೆಗಳ ಕಡತಗಳು ಹಾಗೆಯೇ ಬಾಕಿ ಉಳಿದಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕೆಲವು ಕಡತಗಳು ಕೇವಲ ಎರಡು ದಿನಗಳಲ್ಲಿ ವಿಲೇವಾರಿಯಾದರೆ ಇನ್ನೂ ಕೆಲವು ಕಡತಗಳನ್ನು ಉದ್ದೇಶಪೂರ್ವಕವಾಗಿ ಅಕಾರಿ ವರ್ಗ ವಿಳಂಬ ಮಾಡುತ್ತದೆ ಎಂಬ ಗುಸುಗುಸು ಕೃಷ್ಣಾದಲ್ಲಿ ಹಬ್ಬಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ನೇತೃತ್ವದಲ್ಲಿ ಕಡತಗಳ ವಿಲೇವಾರಿಗಾಗಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ, ಕಾಮಗಾರಿಗಳ ಅನುಷ್ಠಾನಕ್ಕೆ ಅನುಮತಿ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿಗೆ ಪ್ರಮುಖ ಕಡತಗಳೇ ರವಾನೆಯಾಗುತ್ತವೆ.
ಕಡತ ವಿಲೇವಾರಿ ವಿಳಂಬ ಕುರಿತಂತೆ ಸಿಎಂ ಕೂಡ ಆಕ್ಷೇಪಿಸಿದ್ದರು. ಸಚಿವ ಸಂಪುಟದಲ್ಲಿ ಈ ಬಗ್ಗೆ ಪ್ರಸ್ತಾಪವಾಗಿ ಸಚಿವರು ವಾರದಲ್ಲಿ ಎರಡು ದಿನ ವಿಧಾನಸೌಧದಲ್ಲಿ ಕುಳಿತು ಕಡತ ವಿಲೇವಾರಿ ಮಾಡಬೇಕು. ಬಾಕಿ ಕಡತ ವಿಲೇವಾರಿ ಆಗುವವರೆಗೆ ಭಾನುವಾರವೂ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೂ ತಾಕೀತು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕಡತ ವಿಲೇವಾರಿ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. ಶಿಕ್ಷಣ ಹಾಗೂ ಕಂದಾಯ ಇಲಾಖೆ ಸೇರಿ ಕೆಲವು ಇಲಾಖೆಗಳ ಕಾರ್ಯ ವಿಳಂಬ ಕುರಿತಂತೆ ಸ್ವತಃ ಸಿಎಂ ಅಸಮಾಧಾನ ಹೊರಹಾಕಿದ್ದರು. ವಿಧಾನಸಭೆ ಹಾಗೂ ಪರಿಷತ್ನಲ್ಲಿ ಆಡಳಿತ ಪಕ್ಷದ ಸದಸ್ಯರೇ ಪರೋಕ್ಷವಾಗಿ ಕಿಡಿಕಾರಿದ್ದರು. ಇತ್ತೀಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿತ್ತು.
ರಾಜ್ಯದಲ್ಲಿ ಇ-ಆಡಳಿತ ಜಾರಿಗೊಳಿಸಿಯೂ ದಶಕ ಉರುಳಿದೆ. ಈ ನಡುವೆಯೂ ಆನ್ಲೈನ್ ಮೂಲಕ ಕಡತ ವಿಲೇವಾರಿ ಮಾಡುವುದರಲ್ಲಿ ಸುಧಾರಣೆ ಕಂಡಿಲ್ಲ. ಸಚಿವಾಲಯದಲ್ಲಿ ಯಾವಾಗ ನೋಡಿದರೂ ಸರ್ವರ್ ಡೌನ್ ಎಂದು ದೂರು ಹೇಳಿಕೊಳ್ಳುವುದು ಸಾಮಾನ್ಯವಾಗಿದೆ. ಇ-ಗವರ್ನೆನ್ಸ್ನಲ್ಲಿ ದೇಶದಲ್ಲಿ ಮಾದರಿ ಎಂದು ಹೇಳಿಕೊಳ್ಳುವ ರಾಜ್ಯದಲ್ಲಿ ಆನ್ಲೈನ್ ವಿಧಾನದ ಕಡತ ವಿಲೇವಾರಿಗೂ ತಂತ್ರಜ್ಞಾನದ ಪೂರ್ಣ ಸಹಕಾರ ಇಲ್ಲದಂತಾಗಿದೆ. ಕಡತಗಳು ಕದಲದೆ ಧೂಳ್ ತಿನ್ನುತ್ತಿದ್ದರೆ ಆಡಳಿತ ಯಂತ್ರ ನಿಷ್ಕ್ರಿಯಗೊಂಡಿದೆ ಎಂದೇ ಅರ್ಥ.
ಕಡತ ವಿಲೇವಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅದೆಷ್ಟೇ ಗಡುವು ನೀಡಿ ಎಚ್ಚರಿಕೆ ನೀಡಿದ್ದರೂ 2021ರ ಅಕ್ಟೋಬರ್ 25ರ ಅಂತ್ಯಕ್ಕೆ ಒಟ್ಟು 31,308 ಕಡತಗಳು ವಿಲೇವಾರಿಗೆ ಬಾಕಿ ಉಳಿದಿವೆ. ಸಿಎಂ ಸಚಿವಾಲಯದಲ್ಲಿ ಕಡತಗಳು ವಿಲೇವಾರಿಯಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ 18 ಇಲಾಖೆಗಳ ಮುಖ್ಯಸ್ಥರ ಹಂತದಲ್ಲೇ 31,308 ಕಡತಗಳು ವಿಲೇವಾರಿಯಾಗಿಲ್ಲ ಎಂಬುದು ಬಹಿರಂಗವಾಗಿದೆ.



