ಬಿಜೆಪಿ ನಾಯಕರು ಧೈರ್ಯವಿದ್ದರೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲಿ: ಎಂ ಬಿ ಪಾಟೀಲ್

6 months ago

ಬೆಂಗಳೂರು: ರಾಜ್ಯದ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ನೆರವು ಪಡೆಯುವ ದೃಷ್ಟಿಯಿಂದ ಬಿಜೆಪಿ ನಾಯಕರು ದೆಹಲಿಗೆ ಹೋಗುವ ಧೈರ್ಯ ತೋರುತ್ತಿಲ್ಲ. ಅವರಿಗೆ ಭಯ ಕಾಡುತ್ತಿದೆ ಎಂದು ಬೃಹತ್ ಕೈಗಾರಿಕೆ ಮಂತ್ರಿ ಎಂಬಿ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಹಲವಾರು ಬಣಗಳಿವೆ. ಹೀಗಾಗಿ ರಾಜ್ಯ ನಾಯಕರು ದೆಹಲಿಗೆ ಹೋಗಲು ಹೆದರುತ್ತಿದ್ದಾರೆ. ಬಣ ರಾಜಕೀಯದಿಂದ ಬೇಸತ್ತಿರುವ ಬಿಜೆಪಿ ವರಿಷ್ಠರು ತಮ್ಮನ್ನು ಬಯ್ಯುತ್ತಾರೆ ಎಂದು ಹೆದರಿ ಯಾವುದೇ ನಾಯಕರು ದೆಹಲಿಗೆ ಹೋಗುತ್ತಿಲ್ಲ ಎಂದರು.

ವರಿಷ್ಠರು ಬೈಯುತ್ತಾರೆ ಎಂಬ ಭಯದಿಂದ ದೆಹಲಿಗೆ ಹೋಗದೆ ಕರ್ನಾಟಕದಲ್ಲಿಯೇ ಸುತ್ತಾಡುತ್ತಾ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿರುವ ಬಿಜೆಪಿ ನಾಯಕರು ಧೈರ್ಯವಿದ್ದರೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲಿ ಎಂದು ಸವಾಲೆಸೆದರು.

ಕೇಂದ್ರದ 14ನೇ ಹಣಕಾಸು ಆಯೋಗದಿಂದ ನ್ಯಾಯಯುತವಾಗಿ ರಾಜ್ಯಕ್ಕೆ ಬರಬೇಕಾದ 60 ರಿಂದ 70 ಸಾವಿರ ಕೋಟಿ ರೂಪಾಯಿ ಬಂದಿಲ್ಲ. ‌ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ ಇದರ ಅನ್ವಯ ಈ ಯೋಜನೆಗೆ ಘೋಷಣೆಯಾದ 5800 ಕೋಟಿ ರೂಪಾಯಿ ಕೂಡ ಬಂದಿಲ್ಲ ಎಂದರು.

ರಾಜ್ಯಕ್ಕೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಗೊತ್ತಿರುವ ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ಹೋಗಿ ಈ ಹಣ ತರುವ ಧೈರ್ಯ ತೋರಿಸಲಿ. ಬಿಜೆಪಿ ನಾಯಕರು ಮೊದಲು ಈ ಹಣವನ್ನು ರಾಜ್ಯಕ್ಕೆ ತರುವ ಕೆಲಸ ಮಾಡಬೇಕು. ಪ್ರಸ್ತುತ 8500 ರೂಪಾಯಿ ಇರುವ ಪರಿಹಾರವನ್ನು 20,000 ರೂಪಾಯಿಗೆ ಹೆಚ್ಚಿಸಲು ಅವರು ಪ್ರಯತ್ನಿಸಬೇಕು. ರಾಜ್ಯದ ಬಿಜೆಪಿಯವರಿಗೆ ದೆಹಲಿಗೆ ಹೋಗೋ ತಾಕತ್ತು ಇಲ್ಲ, ಧೈರ್ಯವೂ ಇಲ್ಲ. ದೆಹಲಿಗೆ ಹೋದರೆ ಬೈಯ್ಯುತ್ತಾರೆ ಎಂಬ ಭಯವಿದೆ. ಹಾಗಾಗಿ, ಇಲ್ಲೇ ಸುಮ್ಮನೇ ಸುತ್ತಾಡುತ್ತಾರೆ ಎಂದರು.

ನಾನು ಸಿದ್ದರಾಮಯ್ಯ ಈಗಾಗಲೇ ಪ್ರವಾಹ ಪ್ರದೇಶ ವೀಕ್ಷಣೆಮಾಡಿ ಪರಿಹಾರ ಕೊಡುತ್ತಿದ್ದೇವೆ. ಹೆಕ್ಟೇರ್‌ಗೆ 17,000 ರೂಪಾಯಿ ಘೋಷಣೆ ಮಾಡಿದ್ದೇವೆ. ಈಗ ಬಿಜೆಪಿಯವರು ಟ್ರೇನ್ ಹೋದ ಮೇಲೆ ಟಿಕೆಟ್ ತೆಗೆಸುತ್ತಿದ್ದಾರೆ ಎಂದರು.

Leave a Reply