ಬಂಜಾರಾ ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ನೀಡಿ: ಡಾ.ಎ.ಆರ್.ಗೋವಿಂದಸ್ವಾಮಿ

1 year ago

ಬೆಂಗಳೂರು: ತಮ್ಮ ಬಾಲ್ಯದ ದಿನಗಳಲ್ಲಿಯೇ ವ್ಯಾಸಂಗದಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡು ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಸಾಂಸಾರಿಕ ತೊಂದರೆಯಿಂದ 8ನೇ ತರಗತಿಗೆ ಶಾಲೆ ಬಿಟ್ಟು ಸಂಸಾರದ ಕೆಲ ಸಂಗತಿಗಳನ್ನೇ ಬರಹ ರೂಪದಲ್ಲಿ ತಂದೆ ಎಂದು ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾ ನಾಯಕ್ ಹೇಳಿದರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕರ್ನಾಟಕ ಸರ್ಕಾರದ ವತಿಯಿಂದ ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಕಳತಾವೂರ್ ಮಳಾವ್ -03 (ಸಜ್ಜನರ ಸಲ್ಲಾಪ -03) ಮೀನಾರೋ ಪಾಮಣೋ(ತಿಂಗಳ ಅತಿಥಿ) ಸಮಾರಂಭದಲ್ಲಿ ಮಾತನಾಡಿದ ಅವರು, ಬಹುಮುಖ್ಯವಾಗಿ ವೈಚಾರಿಕ ನೆಲಗಟ್ಟಿನಲ್ಲಿ ಚಿಂತಿಸುತ್ತಾ ಈ ಕುರಿತಾಗಿ ಹೆಚ್ಚು ಬರಹಗಳನ್ನು ಬರೆಯಲು ಉತ್ಸುಕಳಾದೆ ಎಂದರು.

ನನ್ನ ಬರಹಕ್ಕೆ ನನ್ನ ತಂದೆಯ ಒತ್ತಾಸೆ ಹಾಗೂ ಮೊದಲ ವೇದಿಕೆಯಾಗಿದ್ದು ಲಂಕೇಶ್ ಹಾಗೂ ಇತರೆ ಪತ್ರಿಕೆಗಳು  ಇದ್ದವು ಎಂಬುದನ್ನು ಮರೆಯುವಂತಿಲ್ಲ. ರಾಜಕೀಯ ಕ್ಷೇತ್ರಕ್ಕೆ ಬಂದು ಕೆಲವರ ಪಿತೂರಿಗಳಿಂದ ಅಧಿಕಾರ ಕಳೆದುಕೊಂಡೆ. ನನಗೆ ಆದರ್ಶವಾಗಿದ್ದವರು. ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಎಂಬುದನ್ನು ಹೆಮ್ಮೆಯಿಂದ ಹೇಳುವೆ ಎಂದರು.

ನಜೀರ್ ಸಾಬ್ ಅವರು ನಾನು ಎಂ.ಎಲ್.ಸಿ ಮಾಡಲು ಕಾರಣರಾದರು. ಆ ನಂತರ ಸಚಿವೆಯಾದೆ. ಈ ಸಂದರ್ಭದಲ್ಲೂ ಕೂಡ ನನಗೆ ಸಾಹಿತ್ಯ ರಚನೆ ಬಗ್ಗೆಯೇ ಹೆಚ್ಚಿನ ತುಡಿತವಿತ್ತು. ಜೊತೆಗೆ ನನ್ನ ಸತ್ಯನಿಷ್ಠೆ, ಸರಳ ಜೀವನ ಇವುಗಳು ಸಚಿವೆಯಾಗಿ ಹೆಚ್ಚು ದಿನ ಮುಂದುವರೆಯದಂತೆ ಮಾಡಿದವು. ಆದರೂ ಧೃತಿಗೆಡಲಿಲ್ಲ, ಹಲವು ಬಗೆಯಲ್ಲಿ ಸಮಾಜ ಸೇವೆಗೆ ತೊಡಗಿಸಿಕೊಂಡಿರುವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್ ಗೋವಿಂದಸ್ವಾಮಿ ಮಾತನಾಡಿ, ಕಳೆದ ಆರು ತಿಂಗಳಿಂದ ಅಕಾಡೆಮಿಯು ನಿರಂತರ 28ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಡೆಸಿದ ಕಾರ್ಯ ಚಟುವಟಿಕೆಯನ್ನು ವಿವರಿಸಿದರು.

ಪ್ರಸ್ತುತ ಬಂಜಾರ ವಿಶ್ವಕೋಶ (ಎನ್ಸೈಕ್ಲೋಪೀಡಿಯಾ) ರಚಿಸುವ ಕೆಲಸದಲ್ಲಿ ಅಕಾಡೆಮಿ ತೊಡಗಿದ್ದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.  ಪ್ರಥಮ ಸಾಹಿತಿ ಹಾಗೂ ಕಲಾವಿದರ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಾಣವಾಗುತ್ತಿವೆ ಎಂದರು.

ರಾಜ್ಯದ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಹಾಗೂ ಬಂಜಾರ ಯುವಕ ಯುವತಿಯರಿಗೆ ಕಸೂತಿ, ತರಬೇತಿ ಶಿಬಿರ ಯಶಸ್ವಿ ಆಯೋಜಿಸಲಾಗಿದೆ ಹಾಗೂ ವಿಜಯಪುರದಲ್ಲಿ  ಹತ್ತು ದಿನಗಳ ಬಂಜಾರ ಆಭರಣ ತಯಾರಿಕೆ ಕಾರ್ಯಾಗಾರ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ ಪ್ರತಿ ತಿಂಗಳು ನಾಡಿನ ಸಾಹಿತಿಗಳು, ಚಿಂತಕರು, ಪ್ರಗತಿಪರರು, ಸಮುದಾಯದ ಎಲೆಮರೆ ಕಾಯಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಕರೆಸಿ ತಿಂಗಳ ಅತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇವುಗಳ ಜೊತೆಗೆ ಅಕಾಡೆಮಿಯು ಬಂಜಾರ ಸಮುದಾಯದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡುವ, ಕೊಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ಪ್ರಧಾನಿ ಅವರನ್ನು ಬಂಜಾರ ಅಕಾಡೆಮಿಯ ಅಧ್ಯಕ್ಷನಾಗಿ, ಬಂಜಾರ ಭಾಷೆಯನ್ನೂ ಪ್ರಸಾರ ಭಾರತಿಯ ಅಕಾಶವಾಣಿ, ದೂರದರ್ಶನ ಹಾಗೂ ಇತರೆ ಕಡೆ ಬೆಳಸಲು ಅವಕಾಶ ಹಾಗೂ ಬಂಜಾರ ಭಾಷೆಗೆ ಸಾಂವಿಧಾನಿಕ ಸ್ಥಾನ ಮಾನಕ್ಕೆ ಕೋರಲಾಗಿದೆ. ಜೊತೆಗೆ ಬಂಜಾರ ಮ್ಯೂಸಿಯಂ ಹಾಗೂ ಮಾದರಿ ತಾಂಡ ಅಲ್ಲದೆ ಲಿಪಿ ಇಲ್ಲದ ಬಂಜಾರ ಭಾಷೆಯನ್ನು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿಯೂ ಮತ್ತು ರಾಷ್ಟ್ರಮಟ್ಟದಲ್ಲಿ ನಾಗರೀ ಲಿಪಿಯಲ್ಲಿ ಬರೆಯುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಂಗ್ಲ ಭಾಷೆ ಬಳಕೆ ಇದೆ. ಇದನ್ನೇ ಅನೇಕ ಬಂಜಾರ ಭಾಷಾ ತಜ್ಞರು ಆಖೈರುಗೊಳಿಸಲು ತಮ್ಮ ಸಮರ್ಥನೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಕಾಡೆಮಿ ಹೆಚ್ಚಿನ ಸಂಶೋಧನೆ ಮಾಡಲಿದೆ ಮತ್ತು ಆಖೈರುಗೊಳಿಸಲಿದೆ ಎಂದರು.

ಮುಖ್ಯ ಅತಿಥಿಯಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಲಲಿತನಾಯಕ್ ಸಾಹಿತಿಯಾಗಿ ಗುರುತಿಸಿಕೊಂಡು ಆನಂತರ ರಾಜಕಾರಣಿಯಾದವರು. ಅನುವಾದಕಿ ಕೂಡ ಆಗಿದ್ದರು. ಬಿ. ಟಿ. ಲಲಿತಾ ನಾಯಕ ಅವರು ಒಬ್ಬ ರಾಜಕಾರಣಿ, ಸಾಹಿತಿ, ಪತ್ರಕರ್ತೆ ಅಂತ ತಿಳಿದುಕೊಂಡರೆ ಅಷ್ಟೇ ಅಲ್ಲ, ಎಲ್ಲವನ್ನು ಒಳಗೊಂಡು ಸಾರ್ವಜನಿಕ ಹಿತಕ್ಕಾಗಿ ಯಾವ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆಯೋ ಆ ಎಲ್ಲಾ ಕ್ಷೇತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ ಎಂದರು.

ಅವರು ಮೊದಲ ಬಾರಿ ಸಚಿವರಾಗಿದ್ದಾಗ ಬಹಳ ದೊಡ್ಡ ಸಂಚು ನಡೆದು ಅದನ್ನು ಕಳೆದುಕೊಳ್ಳಬೇಕಾಯಿತು. ಯಾವುದನ್ನು ಕೂಡ ಸಾರ್ವಜನಿಕ ಹಿತಾಸಕ್ತಿಯಲ್ಲಿಯೇ ತೆಗೆದುಕೊಂಡವರು. ನನಗೆ ಆಶ್ಚರ್ಯ ಆಗಿರುವುದು ಏನೆಂದರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅವರ ಹೆಸರು ಕಾಣಿಸಿಕೊಂಡಾಗ, ಅವರಿಗೆ 10 ವರ್ಷದ ಹಿಂದೆಯೇ ರಾಜ್ಯೋತ್ಸವ ಪ್ರಶಸ್ತಿ ಬಂದಿರಬಹುದು ಎಂದು ತಿಳಿದುಕೊಂಡಿದ್ದೆ. ಆದರೆ ಇಲ್ಲಿಯವರೆಗೆ ಬರದಿರುವುದು ಶೋಚನೀಯ, ಪ್ರಸಕ್ತ ಸಾಲಿನಲ್ಲಿ ಬಂಜಾರ ಅಕಾಡೆಮಿಯ ಅಧ್ಯಕ್ಷರ ಹಾಗೂ ಇತರರ ಶಿಫಾರಸ್ಸು, ತಜ್ಞರ ಸಮಿತಿ ಶಿಫಾರಸ್ಸಿನಿಂದ ಪ್ರಶಸ್ತಿ ಸಿಕ್ಕಿದ್ದಕ್ಕಾಗಿ ಅಭಿನಂದನೆ ಎಂದರು.

ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದ್ ರಾಜ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಶಿಕ್ಷಣ ತಜ್ಞ ಪ್ರೊ. ಪಾಂಡುನಾಯಕ್, ಪತ್ರಕರ್ತೆ ಮಂಜುಶ್ರೀ, ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಉತ್ತಮ್ ರಾಥೋಡ್ ಹಾಗೂ ಇತರೆ ಸದಸ್ಯರು, ದಲಿತ ಕಾರ್ಮಿಕ ಮುಖಂಡ ಗವಿಕುಮಾರ್, ಸಾಹಿತಿ ಬಾಲುನಾಯಕ್ ಮುಂತಾದವರು ಹಾಜರಿದ್ದರು.

Leave a Reply