ಬಿಜೆಪಿಯವರು ಇದ್ದಾಗ ಏನು ಬದನೆಕಾಯಿ ಮಾಡಿದ್ದಾರಾ?: ಎಂ ಬಿ ಪಾಟೀಲ್

6 months ago

ಬೆಂಗಳೂರು: ರಾಜಧಾನಿ ಮಹಾನಗರ ಬೆಂಗಳೂರಿನ ರಸ್ತೆಗಳ ಸ್ಥಿತಿಯ ಕುರಿತು ಉದ್ಯಮಿ ಕಿರಣ್ ಮಜುಂದಾರ್ ಷಾ ಮಾಡಿರುವ ಟ್ವೀಟ್ ಹಾಗೂ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಸುಗಳ ಕುರಿತಂತೆ ಮಾತನಾಡಿದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ರಾಜ್ಯ ಸರ್ಕಾರದ ಸಚಿವರು ಮತ್ತು ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.

ಮೋಹನ್ ದಾಸ್ ಪೈ ಮತ್ತು ಕಿರಣ್ ಮುಜುಂದಾರ್ ಅವರು ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತೆ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿಯೇ ನೆಲೆಸಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಇವರು, ನಗರಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.

ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಂಡಿದ್ದ ಚೀನಾದ ಉದ್ಯಮಿಯೊಬ್ಬರು ಬೆಂಗಳೂರಿನ ಹದಗೆಟ್ಟ ರಸ್ತೆಯ ಬಗ್ಗೆ ಮಾತನಾಡಿದ್ದು ತಮಗೆ ಬೇಸರ ತಂದಿದೆ ಎಂದು ಕಿರಣ್ ಮಜುಂದಾರ್ ನೀಡಿರುವ ಹೇಳಿಕೆಯ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿರಣ್ ಮಜುಂದಾರ್ ಬೆಂಗಳೂರಿಗೆ ಸಾಕಷ್ಟು ಬಯೋ ಟೆಕ್ನಾಲಜಿ ಕಾಣಿಕೆ ಕೊಟ್ಟಿದ್ದಾರೆ.‌ ಬೆಂಗಳೂರು ಕೂಡ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಮಳೆಯಿಂದ ರಾಜ್ಯದಲ್ಲಿ ನ್ಯಾಷನಲ್ ಹೈವೇ, ಸ್ಟೇಟ್ ಹೈವೇ, ಅಂಗನವಾಡಿಗಳು ಅನಾಹುತ ಆಗಿವೆ. ನಾನು ಕೂಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.

ಮೂಲಸೌಕರ್ಯಗಳ ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬೆಂಗಳೂರಿನ‌ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಇದಕ್ಕಾಗಿಯೇ ಒಂದು ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಹಾಗಾಗಿ ಗುಂಡಿ ಸಂಪೂರ್ಣವಾಗಿ ಮುಚ್ಚಲು ಸ್ವಲ್ಪ ಸಮಯ ಬೇಕು ಎಂದು ವಿವರಿಸಿದ್ದಾರೆ.

ಬೆಂಗಳೂರಿಗೆ ಬೇರೆ ಕಡೆಗಳಿಂದ ಸಾಕಷ್ಟು ಮಂದಿ ಬಂದು‌ ನೆಲೆಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡ್ತಿದ್ದೇವೆ.‌ ಪದೇ ಪದೇ ಮಂಜುದಾರ್ ಮಾತಾಡುವ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಮೋಹನ್ ದಾಸ್ ಪೈಗೂ ಕರ್ನಾಟಕ ರಾಜ್ಯ ಎಲ್ಲವನ್ನೂ ಕೊಟ್ಟಿದೆ. ಬೇರೆ ರಾಜ್ಯಗಳ ಮಂತ್ರಿಗಳು ಈ ಕಡೆ ಬನ್ನಿ ಅಂದರೆ ಯಾರು ಹೋಗ್ತಾರೆ? ಇನ್ನೂ ಬೇರೆ ಕಡೆಗಳಿಂದಲೇ ಈ ಕಡೆ ಉದ್ಯಮಿಗಳು ಬರುತ್ತಾರೆ. ರಾಜ್ಯದಿಂದ ಯಾರೂ ಕೂಡ ಹೊರಗೆ ಹೋಗುವುದಿಲ್ಲ.‌ ಬಿಜೆಪಿಯವರು ಇದ್ದಾಗ ಏನು ಬದನೆಕಾಯಿ ಮಾಡಿದ್ದಾರಾ? ಎಂದು ತಿರುಗೇಟು ನೀಡಿದ್ದಾರೆ

Leave a Reply