ಕನ್ನಡ ವಿರೋಧಿ ಮ್ಯಾನೇಜರ್ ಗೆ ವರ್ಗಾವಣೆ ಶಿಕ್ಷೆ

11 months ago

ಕನ್ನಡ ಪರ ಹೋರಾಟಗಾರರ ಮೇಲುಗೈ

ಬೆಂಗಳೂರು: ಕನ್ನಡ ಮಾತನಾಡುವ ವಿಚಾರಕ್ಕೆ ವಿವಾದ ಮಾಡಿದ ಬೆಂಗಳೂರಿನ ಚಂದಾಪುರ ಸೂರ್ಯಸಿಟಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯ ಮಹಿಳಾ ಮ್ಯಾನೇಜರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬ್ಯಾಂಕ್‌ನಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಕ್ಕೆ ನಾನು ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ. ಇದು ಇಂಡಿಯಾ, ಹಿಂದಿ ಅಷ್ಟೇ ಎಂದು ಈ ಅಧಿಕಾರಿ ದರ್ಪದಿಂದ ಮಾತನಾಡಿದ್ದರು.

ಈ ವಿಡಿಯೋ ವೈರಲ್‌ ಆಗಿ ಕೂಡಲೇ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು. ಅಲ್ಲದೆ ಆ ಬ್ಯಾಂಕ್‌ಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದವು.

ಸಿಎಂ ಸಿದ್ದರಾಮಯ್ಯ ಈ ಘಟನೆಯನ್ನು ಬಲವಾಗಿ ಖಂಡಿಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ವಿವಿಧ ಕನ್ನಡ ಪರ ಸಂಘಟನೆಗಳು ರಾಜಕೀಯ ನಾಯಕರು ಅಧಿಕಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು.

ಇದರಿಂದ ಎಚ್ಚೆತ್ತುಕೊಂಡ ಬ್ಯಾಂಕ್ ಆಡಳಿತ ಮಂಡಳಿ ಕನ್ನಡ ವಿರೋಧಿ ಮ್ಯಾನೇಜರ್‌ ಅನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿದೆ. ಜೊತೆಗೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ಆ ಅಧಿಕಾರಿ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. ಆದರೂ ಬ್ಯಾಂಕ್‌ ವಿರುದ್ಧ ಕನ್ನಡಿಗರ ಕೋಪ ತಣ್ಣಗಾಗಿಲ್ಲ.

ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬ್ಯಾಂಕ್‌ಗೆ ಮುತ್ತಿಗೆ ಯತ್ನ, ಪ್ರತಿಭಟನೆ, ರಸ್ತೆ ತಡೆ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

Leave a Reply