ಕನ್ನಡ ಸಾಹಿತ್ಯದ ಅಲೆಗಳು ಬಹುಮುಖೀ ಆಯಾಮವನ್ನೊಳಗೊಂಡಿವೆ: ಪ್ರೊ.ಚಂದ್ರಶೇಖರ ನಂಗಲಿ

2 days ago

ಬೆಂಗಳೂರು: ಸಾವಿರ ವರ್ಷಗಳಿಗೂ ಹೆಚ್ಚಿನ ಪರಂಪರೆಯನ್ನುಳ್ಳ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಹಾಗೂ ತತ್ವಪದ ಸಾಹಿತ್ಯದ ಮೂರು ಅಲೆಗಳಿವೆಯೆಂದು ವಿಮರ್ಶಕ ಪ್ರೊ. ಚಂದ್ರಶೇಖರ ನಂಗಲಿ ಹೇಳಿದರು.

ಸರ್ಕಾರಿ ಕಲಾ ಕಾಲೇಜಿನಲ್ಲಿ ಅವ್ಯಕ್ತ ಪ್ರಕಾಶನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಸಿ. ನಾಗೇಂದ್ರಕುಮಾರ್ ಅವರ ಅನುಸಂಧಾನ ಸಂಶೋಧನ ಲೇಖನಗಳ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಎಲ್ಲರನ್ನೂ ಒಳಗೊಂಡ, ಸ್ಪಂದನಶೀಲಗುಣವುಳ್ಳ, ಪ್ರಗತಿಪರವಾದ, ಜನರ ಜೀವನಾಡಿಯ ಸಾಹಿತ್ಯ ಈ ಮೂರು ಅಲೆಗಳಾಗಿವೆ. ಒಂದು ವಿಶೇಷವೆಂದರೆ ಇವುಗಳು ಏಕಮುಖಿಯಾದ ಚಿಂತನೆಯಾಗದೆ, ಬಹುಮುಖೀ ಆಯಾಮವನ್ನೊಳಗೊಂಡಿವೆ ಎಂದರು.

ಡಾ. ಬಿ.ಸಿ. ನಾಗೇಂದ್ರಕುಮಾರರು ತಮ್ಮ ಅನುಸಂಧಾನ ಕೃತಿಯಲ್ಲಿ ಕನ್ನಡ ಸಾಹಿತ್ಯದ ಮೂರು ಅಲೆಗಳನ್ನು ಸಮರ್ಥವಾಗಿ ಗುರುತಿಸಿದ್ದಾರೆ. ನವೋದಯ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಮತ್ತು ಸ್ವಾತಂತ್ರ್ಯ ಚಳವಳಿಯ ವಿಭಿನ್ನ ನೆಲೆಗಳನ್ನು ಗಾಂಧೀವಾದಿ, ಹಿಂದೂವಾದಿ ಹಾಗೂ ಸಮಾಜವಾದಿ ರಾಷ್ಟ್ರೀಯತೆಯನ್ನು ಪ್ರಕ್ರಿಯಾತ್ಮಕ ಪ್ರಜ್ಞೆಯೆಂದು ಲೇಖಕರು ಗುರುತಿಸಿದ್ದಾರೆ ಎಂದರು.

ಭಾಷಾಂಧತೆ, ಮತಾಂಧತೆಗಿಂತ ವಿಶ್ವಮಾನವ ಅನಿಕೇತನ  ಮುಖ್ಯ ಎಂಬುದನ್ನು ಪ್ರಕ್ರಿಯಾತ್ಮಕ ಪ್ರಜ್ಞೆಯೆಂದು ಗುರುತಿಸಿದ್ದಾರೆಂದು ಕೃತಿಯನ್ನು ಕುರಿತು ಮಾತನಾಡಿದರು.

ಕೃತಿಕಾರ ಡಾ.ಬಿ.ಸಿ.ನಾಗೇಂದ್ರಕುಮಾರ್ ಮಾತನಾಡಿ, ಓರ್ವ ಲೇಖಕ ಎಂದಿಗೂ ತವಕ ತಲ್ಲಣಗಳನ್ನು ಎದುರಿಸುತ್ತಾನೆ. ಅವನಿಗೆ ಬರವಣಿಗೆ ಒಂದು ಬಿಡುಗಡೆಯ ದಾರಿಯಾಗಬೇಕು. ಬರೆದದ್ದೆಲ್ಲ ಸಾಹಿತ್ಯವಲ್ಲ, ಅದು ಸಮಕಾಲೀನ ಪ್ರತಕ್ರಿಯಾತ್ಮಕವಾಗಿರಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಪಿ. ಶಿವಪ್ರಸಾದ್ ಮಾತನಾಡಿ, ಭಾಗವತ ಕವಿಯಾದ ಕುಮಾರವ್ಯಾಸ ಓರ್ವ ಜನಪದೀಯ ಕವಿಯಾಗಿದ್ದಾನೆ. ಆ ಕಾರಣದಿಂದಲೇ ಆತ ಜನಸಾಮಾನ್ಯರ ನಾಲಿಗೆಯಲ್ಲಿ ಮತ್ತು ಮನಸ್ಸಿನಲ್ಲಿ ನೆಲೆನಿಂತಿದ್ದಾನೆ ಎಂದರು.

ಕೆ.ಜಿ.ಸಿ.ಟಿ.ಇ ಕಾರ್ಯದರ್ಶಿ ಡಾ. ಹೆಚ್.ಜಿ. ನಾರಾಯಣ, ಅವ್ಯಕ್ತ ಪ್ರಕಾಶನದ ವಸು ವತ್ಸಲೆ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ವೈ. ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಕನ್ನಡ ಸಂಘದ ಸಂಚಾಲಕ ಡಾ. ರುದ್ರೇಶ್ ಅದರಂಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Leave a Reply