ಕನ್ನಡ ನುಡಿದರೆ ಮುತ್ತಿನ ಹಾರದಂತಿರಬೇಕು

2 years ago

“ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಮೆಚ್ಚಿ ಅಹುದಹುದೆನಬೇಕು!
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ಎಂತು ಒಲಿವನಯ್ಯಾ?”

-ಬಸವಣ್ಣ

ಗುರು, ಕಿ‌.ರಂ. ನಾಗರಾಜ್  ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬ ಸಾಲುಗಳನ್ನು ನಮ್ಮೆದುರು ಹೇಳಿ, ‘ಏನನ್ನು ನುಡಿದರೆ ಮುತ್ತಿನ ಹಾರದಂತಿರಬೇಕು?’ ಎಂದು ಪ್ರಶ್ನಿಸುತ್ತಿದ್ದರು. ವಿದ್ಯಾರ್ಥಿಗಳಾಗಿದ್ದ ನಾವು ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತಿದ್ದೆವು. ತಕ್ಷಣ ಕಿ.ರಂ. ಬಸವಣ್ಣನವರ ವಚನಕ್ಕೆ ‘ಕನ್ನಡ’ ಎನ್ನುವ ಮೂರು ಅಕ್ಷರಗಳನ್ನು ಸೇರಿಸಿ ಉತ್ಕಂಠಿತರಾಗಿ ಹೇಳುತ್ತಿದ್ದರು.

“ಕನ್ನಡ ನುಡಿದರೆ ಮುತ್ತಿನ ಹಾರದಂತಿರಬೇಕು
ಕನ್ನಡ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ಕನ್ನಡ ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ಕನ್ನಡ ನುಡಿದರೆ ಲಿಂಗ ಮೆಚ್ಚಿ ಮೆಚ್ಚಿ ಅಹುದಹುದೆನಬೇಕು”

ಕಿ.ರಂ. ಅವರ ಮಾತುಗಳನ್ನು ಕೇಳಿ ನಮ್ಮ ಮೈ ಬೆರಗಿನ ಅರಮನೆಯಾಗುತ್ತಿತ್ತು. ಯಾವುದೋ ನಿಗೂಢವನ್ನು ಕೇಳಿದವರಂತೆ, ಕಂಡು ಉಂಡವರಂತೆ‌ ತೇಲುಗಣ್ಣು, ಮೇಲುಗಣ್ಣು ಮಾಡಿಕೊಂಡು ಆಕಾಶದ ನಕ್ಷತ್ರಗಳಂತೆ ಕುಳಿತಲ್ಲೆ ಅಲೆಯುತ್ತಿದ್ದೆವು. ಮುತ್ತಿನ ಹಾರದಂತಿರಬೇಕು ಎನ್ನುವ ಮಾತಿಗೂ ಅವರು ನಾನಾರ್ಥಗಳನ್ನು ಕಲ್ಪಿಸುತ್ತಿದ್ದರು. ಹಾರದಂತಿರಬೇಕು ಎಂದರೆ‌ it should not fly ಎನ್ನುತ್ತಿದ್ದರು. ಮಾತು ಕೇವಲ ಮಣಿ ಸರವಲ್ಲ. ಗಾಳಿಯಲ್ಲಿ ಹಾರಿ ಹೋಗುವಂತಹುದಲ್ಲ. ಅದು ತೂಕವುಳ್ಳದ್ದು, ಘನವಾದದ್ದು ಎಂದು ಕಿ.ರಂ. ವಿವರಿಸುತ್ತಿದ್ದರು. ಕನ್ನಡ ಪದಗಳಿಗಿರುವ ವಿವಿಧ ಅರ್ಥ ವಿಸ್ತಾರಗಳ ಬಗ್ಗೆ ನಮ್ಮ ಗಮನ ಸೆಳೆಯುತ್ತಿದ್ದರು.

ಕೃಪೆ: -‘ಕಿ.ರಂ. ನಾಗರಾಜ’ (ಪುಸ್ತಕ, ಪುಟ: 06-07, 2013)

– ಎಲ್.ಎನ್. ಮುಕುಂದರಾಜ್, ಹಿರಿಯ ಸಾಹಿತಿ

Leave a Reply