ತಾರತಮ್ಯಗಳನ್ನು ತೆಗೆದುಹಾಕಲು ನಾರಾಯಣಗುರು ಜೀವನವನ್ನು ಮುಡಿಪಾಗಿಟ್ಟಿದ್ದರು: ಗೀತಾ ಸಿ.ಡಿ.

2 years ago

ಧಾರವಾಡ: ಕೇರಳ ರಾಜ್ಯದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರು ಎಂಬ ಒಬ್ಬ ಸಮಾಜ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ತೆಗೆದುಹಾಕಲು ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ಜಗತ್ತಿನಲ್ಲಿ ಇರುವುದು ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯ ವಾಕ್ಯವನ್ನು ಪ್ರತಿಪಾದಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾದ ಬ್ರಹ್ಮರ್ಷಿ  ನಾರಾಯಣ ಗುರು ಜಯಂತಿ  ಪ್ರಯುಕ್ತ  ಬ್ರಹ್ಮರ್ಷಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣಗುರು ಅವರು 1850ರಂದು ಕೇರಳದಲ್ಲಿ ಜನಿಸಿದರು. ಇದೇ ಸಮಯದಲ್ಲಿ ಅಲ್ಲಿ ಜಾತಿ, ಧರ್ಮ, ಮೇಲು, ಕೀಳು ತಾರತಮ್ಯ ಹೆಚ್ಚು ಸಮಾಜದಲ್ಲಿ ಕಾಡುತಿತ್ತು, ನಾರಾಯಣ ಗುರುಗಳು ಜನ್ಮ ತಾಳಿ ಅಲ್ಲಿನ ಸಮಾಜದಲ್ಲಿ ಇದ್ದಂತಹ ಪಿಡಗನ್ನು ಕಿತ್ತೊಗೆಯಲು  ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.

ಮುಖ್ಯ ಅತಿಥಿಗಳಾಗಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ರಾಮಪ್ಪ ಕೃಷ್ಣಪ್ಪ ಬಡಿಗೇರ ಮಾತನಾಡಿ, ನಾರಾಯಣಗುರು ಅವರು ನಮ್ಮ ಸಮಾಜಕ್ಕೆ ನೀಡಿದಂತಹ ಕೊಡುಗೆ ಗಣನೀಯವಾಗಿದೆ. ಅವರು ತಮ್ಮ ವೈದ್ಯಕೀಯ, ಶಿಕ್ಷಣಕ್ಕೆ ನೀಡಿದ ಕೊಡುಗೆಗಳನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಹುಬ್ಬಳ್ಳಿಯ ರೇವಡಿಹಾಳದ ದಯಾನಂದ ವಿದ್ಯಾರಣ್ಯ ಭಾರತಿ ಶಾಲೆಯ ಆಡಳಿತ ಅಧಿಕಾರಿ ರತ್ನಾಕರ ಪೂಜಾರಿ ಅವರು ಬ್ರಹ್ಮರ್ಷಿ ನಾರಾಯಣ ಗುರು ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಚಂದ್ರಶೇಖರ ಢವಳಗಿ, ಹುಬ್ಬಳ್ಳಿ-ಧಾರವಾಡ ಹಿತವರ್ದಕ ಸಂಘದ ಅಧ್ಯಕ್ಷ ತಿಮ್ಮಪ್ಪ. ಡಿ ನಾಯ್ಕ, ಶಂಕರ ಕೋಟಿ, ಬಸವರಾಜ ಇಳಗೇರಿ, ಮಂಜುನಾಥ ಇಳಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಕುಮಾರ ಬೇಕ್ಕೇರಿ, ಆರತಿ ದೇವಶಿಕಾಮಣಿ, ಸಮಾಜದ ಮುಖಂಡರು, ಗಣ್ಯರು ಹಾಗೂ ಹಿರಿಯರು, ಸಮಾಜ ಬಾಂಧವರು, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply