ಮೌಢ್ಯಾಚರಣೆ ವಿರುದ್ಧ ಹೋರಾಡಿದ ಮಹಾನ್ ಚೇತನ ನಾರಾಯಣ ಗುರು: ಕೆ.ಎಸ್.ಬಸವಂತಪ್ಪ

7 months ago

ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

ದಾವಣಗೆರೆ: ಸಮಾಜದಲ್ಲಿ ಅಸಮಾನತೆ ಹಾಗೂ ಮೌಢ್ಯಾಚರಣೆ ವಿರುದ್ಧ ಹೋರಾಡಿ ಸಮಾನತೆಯೆಡೆಗೆ ಕೊಂಡೊಯ್ದ ಮಹಾನ್ ಮಾನವತವಾದಿ ಶ್ರೀ ನಾರಾಯಣ ಗುರು ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ನಾರಾಯಣಗುರು ಜಯಂತಿಯಲ್ಲಿ ನಾರಾಯಣಗುರು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಹಿಂದೆ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಮನುಷ್ಯ ಮನುಷ್ಯರ ನಡುವೆ ಪ್ರೀತಿ ಸಹಬಾಳ್ವೆ, ಮಾನೀಯತೆ ಬೆಸುಗೆ ಬೆಸೆದ ಮಹಾನ್ ಮಾನವತಾವಾದಿ. ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತಾಂಡವಾಡುವ ಹೊತ್ತಿನಲ್ಲಿ ಶಿಕ್ಷಣ ನೀಡುವ ಸಲುವಾಗಿ ರಾತ್ರಿ ಶಾಲೆ, ವಿಶೇಷವಾದ ದೇವಸ್ಥಾನಗಳನ್ನು ಸ್ಥಾಪಿಸಿ ಸಮಾನತೆ ಕಲ್ಪಿಸಿಕೊಟ್ಟರು. ಅಂತಹ ದಾರ್ಶನಿಕರ ಜಯಂತಿಯನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಜಯಂತಿ ಅರ್ಥಪೂರ್ಣವಾಗಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮಾತನಾಡಿ, ಗುರು ಹಿರಿಯರು ಹಾಕಿಕೊಟ್ಟ ಸಲಹೆ-ಸೂಚನೆ, ಆಚಾರ-ವಿಚಾರವನ್ನು ಸಂಘ, ಸಮುದಾಯವಷ್ಟೇ ಅಲ್ಲದೇ ಎಲ್ಲಾ ಮನುಕುಲ ಪಾಲನೆ ಮಾಡಿ, ಅವರ ಆದರ್ಶಗಳನ್ನು ರೂಡಿಸಿಕೊಳ್ಳಿಲಿ ಎಂಬ ಉದ್ದೇಶದಿಂದ ಈ ಜಯಂತಿಗಳನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಇಂದಿಗೂ ಮೌಡ್ಯತೆ, ಮೂಢ ನಂಬಿಕೆ ಜೀವಂತವಾಗಿರುವುದು ನಾವು ಕಾಣಬಹಹುದು ಎಂದರು.

ನಮ್ಮಲ್ಲಿನ ಮೂಢ ನಂಬಿಕೆ ತೊಲಗಿಸಿ ಮುಂದೆ ಸಾಗಿದಲ್ಲಿ ನಾರಾಯಣಗುರು ಹಾಕಿ ಕೊಟ್ಟ ಪಥದಲ್ಲಿ ಸಾಗಿದಂತೆ. ಜಯಂತಿಗಳು ಕೇವಲ ಮಾತಿಗೆ, ಪುಷ್ಪಾರ್ಚನೆಗೆ ಸೀಮಿತವಾಗದೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಳಿಲು ಸೇವೆ ಮಾಡಿದಲ್ಲಿ ಜೀವನ ಸಾರ್ಥಕ ಎಂದರು.

ಸಮಾಜದ ಜಿಲ್ಲಾ ಅಧ್ಯಕ್ಷ ನಾಗರಾಜ್ ಮಾತನಾಡಿ, ಅನಿಷ್ಟ ಪದ್ಧತಿಗಳ ವಿರುದ್ದ ಹೋರಾಡಿ, ರಾತ್ರಿ ಶಾಲೆ ತೆರೆದು ತಳ ಸಮುದಾಯಕ್ಕೂ ಶಿಕ್ಷಣ ಒದಗಿಸಿ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬ ಸಂದೇಶ ಸಾರಿದ ವ್ಯಕ್ತಿ ನಾರಾಯಣ ಗುರು ಎಂದರು.

ಮಕ್ಕಳಿಗೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಇಂದು ಕೇರಳದಲ್ಲಿ ಶೇ. 100 ರಷ್ಟು ಸಾಕ್ಷರತೆ ಹೊಂದಿದೆ ಎಂದರೆ ಅದಕ್ಕೆ ಕಾರಣ ನಾರಾಯಣ ಗುರು. ಅವರು ಯಾವುದೋ ಒಂದು ಜಾತಿ ಜನಾಂಗಕ್ಕೆ ಸೀಮಿತವಾಗದೇ ಇಡೀ ಮಾನವ ಕುಲಕ್ಕೆ ಆದರ್ಶ ಪುರುಷ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ರವಿಚಂದ್ರ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಬಸವರಾಜ್, ಈಡಿಗ ಸಮಾಜದ ಗೌರವಾಧ್ಯಕ್ಷ ಹೆಚ್.ಶಂಕರ್, ಕಾರ್ಯದರ್ಶಿ ದೇವೆಂದ್ರಪ್ಪ, ಉಪಾಧ್ಯಕ್ಷರಾದ ಶಾಂತರಾಮ್, ರವೀಂದ್ರ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.

Leave a Reply