ಹಣ ಕೂಡಿಟ್ಟರೆ ಐಟಿ ದಾಳಿ, ರಕ್ತ ಕೂಡಿಟ್ಟರೆ ತೊಂದರೆ: ಡಿ.ಕೆ.ಶಿವಕುಮಾರ್

2 years ago

#IT #attack #money #trouble #DKShivakumar

ಬೆಂಗಳೂರು: ಹಣವನ್ನು ಪೆಟ್ಟಿಗೆಯಲ್ಲಿ ಕೂಡಿಟ್ಟರೆ ಐಟಿ ದಾಳಿ ಸೇರಿದಂತೆ ನಾನಾ ತೊಂದರೆಗಳು ಬರುತ್ತವೆ. ಅದೇ ರೀತಿ ರಕ್ತವನ್ನು ದೇಹದಲ್ಲಿ ಕೂಡಿಟ್ಟರೂ ತೊಂದರೆ. ಹೀಗಾಗಿ ಎರಡನ್ನೂ ಆಗಾಗ್ಗೆ ದಾನ ಮಾಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆನೀಡಿದರು.

ಬೆಂಗಳೂರಿನಲ್ಲಿ ಎಚ್.ಡಿ.ಎಫ್. ಸಿ.ಬ್ಯಾಂಕ್ ಏರ್ಪಡಿಸಿದದ್ದ 15ನೇ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಹಣಕೊಟ್ಟು ಜೀವ ಪಡೆಯಲು ಆಗುವುದಿಲ್ಲ. ಆದ ಕಾರಣ ಜೀವ ಉಳಿಸುವ ರಕ್ತವನ್ನು ಸ್ವಯಂಪ್ರೇರಿತರಾಗಿ ದಾನ ಮಾಡಬೇಕು ಎಂದು ಕರೆನೀಡಿದರು.

ದೇಹದಲ್ಲಿ ರಕ್ತ ಕೂಡಿಟ್ಟುಕೊಂಡರೆ ಮಧುಮೇಹ, ಹೃದಯಾಘಾತ ಸೇರಿದಂತೆ ಅನೇಕ ರೋಗಗಳು ಬರುತ್ತವೆ. ಬಡ ರೋಗಿಗಳಿಗೆ, ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವ ಮೂಲಕ ಅವರ ಆರೋಗ್ಯಕ್ಕೆ ನೆರವಾಗಬೇಕು, ರಕ್ತ ಮತ್ತು ಹಣ ಎರಡೂ ಸಮಾಜದಲ್ಲಿ ಸಮಪ್ರಮಾಣದಲ್ಲಿ‌ ಬಳಕೆಯಾಗಬೇಕು. ಆಗ ಮಾತ್ರ ನಮ್ಮ ಸಮಾಜ ಆರೋಗ್ಯವಾಗಿರುತ್ತದೆ ಎಂದರು.

ಬ್ಯಾಂಕಿನವರು ಸಹ ಹಣವನ್ನು ಕೂಡಿಟ್ಟುಕೊಳ್ಳದೆ, ಜನರ ನಡುವೆ ಹಂಚಬೇಕು. ಹಣದ ಹರಿವು ಹೆಚ್ಚಾದಷ್ಟು ಲಾಭ, ಇಲ್ಲದಿದ್ದರೆ ತೊಂದರೆಗಳು ಬರುತ್ತವೆ ಎಂದರು.

ರಾಜ್ಯದ 2 ಸಾವಿರ ಗ್ರಾಮೀಣ ಶಾಲೆಗಳನ್ನ ಸಿಎಸ್ಆರ್ ಅನುದಾನದ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಈ ಬಗ್ಗೆ ಖಾಸಗಿ ಕಂಪೆನಿಗಳ ಆಡಳಿತ ಮಂಡಳಿಗಳ‌ ಜೊತೆ ಮಾತುಕತೆ ನಡೆಸಲಾಗಿದೆ. ಕರ್ನಾಟಕದ ಶಾಲೆಗಳಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. ಈಗಾಗಲೆ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜೊತೆ ಮಾತುಕತೆ ನಡೆಸಿ ಗ್ರಾಮೀಣ ಭಾಗದ ಒಂದೊಂದು ಶಾಲೆಗಳ ನಿರ್ವಹಣೆ ಮಾಡುವುದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.

ಸರ್ಕಾರದಿಂದ ಒಂದು ಸಮಿತಿ ರಚನೆ ಮಾಡಿ ಕಾರ್ಪೊರೇಟ್ ವಲಯದಿಂದ 2 ಸಾವಿರ ಶಾಲೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ‌. ಕಂಪೆನಿಗಳು ಅವರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಶಾಲೆಗಳ ಉಸ್ತುವಾರಿ ನೋಡಿಕೊಳ್ಳಬಹುದು. ಸರ್ಕಾರ ಸಮಾಜಮುಖಿ ಕೆಲಸಗಳಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ನೀವು ಆಯ್ಕೆ ಮಾಡಿಕೊಂಡ ಶಾಲೆಗಳ ಮುಂದೆ ಎಚ್.ಡಿ.ಎಫ್. ಸಿ. ಬ್ಯಾಂಕ್ ಅಭಿವೃದ್ಧಿಪಡಿಸಿದ ಶಾಲೆ ಎಂದು ಹೆಸರಿಸಿಕೊಳ್ಳಬಹುದು. ಈ ಕಾರ್ಯಕ್ರಮವನ್ನು ತೆಲಂಗಾಣದ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ‌ ಉಲ್ಲೇಖಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ಅನುದಾನ ಬಳಸಿ ಎಂದು ಕರೆ‌ ನೀಡಿದಾಗ ಎಚ್ಡಿಎಫ್ಸಿ ಬ್ಯಾಂಕ್ ಮುಂದೆ ಬಂತು. ಇದು‌ ಕರ್ನಾಟಕದ ಮತ್ತು ಕಾಂಗ್ರೆಸ್ ಸರ್ಕಾರದ ಅತ್ಯಮೂಲ್ಯವಾದ ಯೋಜನೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ‌ ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಬೇಕು. ನಗರ ಪ್ರದೇಶದ ಮೇಲಿನ ಒತ್ತಡ ಕಡಿಮೆ ಮಾಡಬೇಕು. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

Leave a Reply