ಬೆಂಕಿ ಇಲ್ಲದಿದ್ದರೆ ಸೂರ್ಯನನ್ನು ಬಿಡುತ್ತಿರಲಿಲ್ಲ

1 year ago

ನೆಲಕ್ಕೆ ಬಿದ್ದ ಹೆಣದಲ್ಲಿ ಧರ್ಮದ ಬಿಂದುಗಳನ್ನ ಹುಡುಕುವ ಮಂದಿ, ಭೂಮಿಯ ಮೇಲೆ ಹಕ್ಕಿಗಾಗಿ ಧರ್ಮದ ಮಾತನಾಡುವ ಮಂದಿ, ಹರಿವ ನದಿಯ ಮೇಲೆ ಅಧಿಪತ್ಯ ಸ್ಥಾಪಿಸುವ ವ್ಯವಸ್ಥೆ, ನಡುವೆ ಸೂರ್ಯನನ್ನ ಮಾತ್ರ ಬಿಟ್ಟಿದ್ದಾರೆ ಅವನಲ್ಲಿ ಬೆಂಕಿ ಇಲ್ಲದಿದ್ದರೆ ಅಲ್ಲಿಯೂ ಹಬ್ಬಿಸುತ್ತಿದ್ದರು ಧರ್ಮದ ಕಿಚ್ಚು.

ಹಸಿದವರ ಚಿಂತೆ ಇವರಿಗಿಲ್ಲ, ಅಸಹಾಯಕರ ಗೋಳಿನ ವಿಚಾರವು ಇವರಿಗೆ ಬೇಡ, ಜಾತಿ ಧರ್ಮದ ,ಮೇಲು, ಕೀಳಿನ ಚಿಂತೆಯನ್ನು ಬಿಟ್ಟರೆ, ಬೇರೆ ಏನು ಕೆಲವರಿಗೆ ವಿಚಾರಗಳೇ ಇಲ್ಲ.

ಯಾವ ಧರ್ಮದವರಾದರೇನು? ಯಾವ ಜಾತಿಯವರಾದರೇನು, ಕುಡಿವ ಗಾಳಿ ಒಂದೇ, ಕುಡಿಯುವ ನೀರು ಒಂದೇ, ತಿನ್ನುವ ಅನ್ನವು ಒಂದೇ, ಬದುಕುವ ಭೂಮಿಯು ಒಂದೇ, ಸುಡುವ ಬೆಂಕಿ ಒಂದೇ, ಆದರೂ ಅದೆಷ್ಟು ಭೇದ ಭಾವದ ಮಾತುಗಳು. ತಾವು ಶಾಶ್ವತವೆ ಎನ್ನುವ ಭ್ರಮೆ.

ಬಿಸಿಲಿಗೆ ಅಂಜಿ ಮನೆ ಸೇರುವವರು, ಮಳೆಗೆ ಬೆದರಿ ಗೂಡು ಸೇರುವವರು, ಶ್ರಮದ ಬದುಕಿನ ಅರಿವೇ ಇಲ್ಲದವರು, ಹಸಿವಿನ ಬಾಧೆ ಇಲ್ಲದವರು, ಆವೇಶದ, ಆಕ್ರೋಶದ, ಪ್ರಚೋದನೆಯ, ಮಾತುಗಳ ಪದೇ ಪದೇ ಹೇಳುತ್ತಾ ಹಚ್ಚುವರು ಬೆಂಕಿ, ಜನಗಳ ನಡುವೆ ಮನಸ್ಸುಗಳ ಕೆಡಿಸಿ, ಯಾವುದೇ ರೀತಿಯ ತೊಂದರೆಯಾಗದಂತೆ ತಾವು ಮಾತ್ರ  ನಿಶ್ಚಿಂತೆಯಿಂದ ಬದುಕುವರು, ನೇತೃತ್ವ ಇವರದು ನೆಕ್ತರು ಮುಗ್ದರದು,

ಇನ್ನು ಸಮಾಧಾನವಾಗುತ್ತಿಲ್ಲ ಇವರುಗಳಿಗೆ ಇನ್ನೆಷ್ಟು ನೆತ್ತರ ಹರಿಯಬೇಕು , ಇನ್ನೆಷ್ಟು ಹೆಣಗಳು ಉರುಳಬೇಕು, ಇನ್ನೆಷ್ಟು ಮಂದಿ ಅನಾಥರಾಗಬೇಕು, ದಿನಕ್ಕೊಂದು, ಕ್ಷಣಗಳಿಗೆ ಮತ್ತೊಂದು, ವಿಭಜನೆಯ ಸದ್ದುಗಳನ್ನ ಮಾಡುತ್ತಲೇ ಬಂದಿದ್ದಾರೆ, ಇಂಥವರ ಸಂತತಿ ಸಾವಿಲ್ಲದೆ ಸಾಗುತ್ತಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply