ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲು ಪ್ರಧಾನಿ ನರೇಂದ್ರ ಮೋದಿ ನಡೆಸಿದ ರೋಡ್ ಶೋನಿಂದಾಗಿ ರಾಜಧಾನಿ ಮಹಾನಗರಿ ಬೆಂಗಳೂರಿನ ವಾಹನ ಸವಾರರು ಅಕ್ಷರಶಃ ಹೈರಾಣರಾಗಿ ಪೊಲೀಸ್ ಮತ್ತು ಬಿಜೆಪಿಗೆ ಹಿಡಿ ಶಾಪ ಹಾಕಿದರು. ನಗರದ ಪ್ರಮುಖ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ ರೋಡ್ ಶೋನಿಂದಾಗಿ ಬೆಂಗಳೂರಿನ ಹೃದಯ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಜನತೆ ತತ್ತರಿಸಿದರು. ಅಲ್ಲದೇ ಬಿಜೆಪಿ, ಬಿಜೆಪಿ ನಾಯಕರು, ನರೇಂದ್ರ ಮೋದಿ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಮತ್ತು ಮುಖಂಡರಿಗೆ ಹಿಡಿಹಿಡಿ ಶಾಪ ಹಾಕಿದ ಘಟನೆಗಳು ಬೆಂಗಳೂರಿನಲ್ಲಿ ನಡೆದವು.
ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆದಿದ್ದು ಸಂಜೆಯಾದರೂ ಸಹ ಭದ್ರತಾ ದೃಷ್ಟಿಯಿಂದ ಪೊಲೀಸರು ಮಧ್ಯಾಹ್ನ 12 ಗಂಟೆಗೆ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿದರೆ, ಕೆಲವರು ರಸ್ತೆಗಳಲ್ಲಿ ಬೆಳಿಗ್ಗೆಯಿಂದಲೇ ವಾಹನ ನಿಲುಗಡೆ ರದ್ದುಪಡಿಸಲಾಗಿತ್ತು.
ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವ ಕುರಿತಂತೆ ಪೊಲೀಸರು ಯಾವುದೇ ಮುನ್ಸೂಚನೆ ನೀಡದ ಹಿನ್ನೆಲೆಯಲ್ಲಿ ಎಂದಿನಂತೆ ಆ ರಸ್ತೆಗೆ ಬಂದ ವಾಹನ ಸವಾರರು ಬಿಸಿಲಿನಲ್ಲಿ, ಮಧ್ಯಾಹ್ನ ದಿಡೀರ್ ಎಂದು ಸುರಿದ ಮಳೆಯಿಂದ ನೆಂದು ತೊಪ್ಪೆಯಾದರು.
ಹಲವು ಜಂಕ್ಷನ್ಗಳಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ಮಾಮೂಲಿಯಾಗಿತ್ತು. ನಾಗರಬಾವಿಯಲ್ಲಿ ರಸ್ತೆ ದಾಟಲು ಬಂದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಬೆಳಿಗ್ಗೆಯೇ ರಸ್ತೆ ಬಂದ್ ಮಾಡಿದ್ದೀರಿ. ನಾವೂ ಮನೆಗೆ ಹೋಗುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದರು.



