ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಷಣ

1 year ago

ಮಂಡ್ಯ: ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸುಮಾರು ₹15,000 ಕೋಟಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಕೈಗಾರಿಕಾಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆ ನಿಟ್ಟಿನಲ್ಲಿಯೇ ಭದ್ರಾವತಿ ಕಾರ್ಖಾನೆಗೆ ಮರುಜೀವ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು.

ಮೈಸೂರು ಮಹಾ ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಆಗಿತ್ತು. ಸಾವಿರಾರು ಜನರಿಗೆ ಅಲ್ಲಿ ಉದ್ಯೋಗ ಅವಕಾಶ ಸಿಕ್ಕಿತ್ತು. ಲಕ್ಷಾಂತರ ಜನರು ಪರೋಕ್ಷವಾಗಿ ಬದುಕು ಕಟ್ಟಿಕೊಂಡಿದ್ದರು. ಅಂತಹ ವೈಭವದ ದಿನಗಳು ಮರುಕಳಿಸುವ ದಿನಗಳು ದೂರವಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕಿನಂತಹ ಎರಡು ಮಹತ್ವದ ಖಾತೆಗಳನ್ನು ನೀಡಿದ್ದಾರೆ. ಎರಡೂ ಜವಾಬ್ದಾರಿಗಳನ್ನು ನಾನು ರಾಜ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಣೆ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಮಂಡ್ಯದ ಕೆಆರ್ ಎಸ್ ಬಳಿ ಐಐಟಿ ಸ್ಥಾಪನೆ ಮಾಡುವ ಬಗ್ಗೆ ಶಾಸಕ ದಿನೇಶ್ ಗೂಳಿಗೌಡ ಮಾಡಿದ ಮನವಿಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಚ್ ಡಿ ಕುಮಾರಸ್ವಾಮಿ, ಈ ಬಗ್ಗೆ ಪರಿಶೀಲನೆ ಮಾಡೋಣ. ಸಂಬಂಧಪಟ್ಟ ಕೇಂದ್ರ ಸಚಿವರ ಜತೆ ಖಂಡಿತಾ ಚರ್ಚೆ ಮಾಡುತ್ತೇನೆ. ರಾಜ್ಯದಲ್ಲಿ ಈಗಾಗಲೇ ಒಂದು ಐಐಟಿ ಸ್ಥಾಪನೆಯಾಗಿದೆ, ಇನ್ನೊಂದು ಐಐಟಿ ಬರಲಿ, ಬರಬೇಕು ಕೂಡ. ಎಲ್ಲರೂ ಒಟ್ಟಿಗೆ ಪ್ರಯತ್ನ ಮಾಡಿ ರಾಜ್ಯಕ್ಕೆ ಮತ್ತೊಂದು ಐಐಟಿ ತರೋಣ. ಅದಕ್ಕೆ ಎಲ್ಲರ ಸಹಕಾರ ಇರಲಿ ಎಂದರು.

ಮಂಡ್ಯ ಜಿಲ್ಲೆ ಅಪ್ಪಟ ಕನ್ನಡತನ, ಅಪ್ಪಟ ಕನ್ನಡಿಗರೇ ಇರುವ ಜಿಲ್ಲೆ. ನಾನು ಕೇಂದ್ರ ಸಚಿವನಾಗಿ ನಾನು ಇಲ್ಲಿಗೆ ಬಂದಿಲ್ಲ, ಅಪ್ಪಟ ಕನ್ನಡಿಗನಾಗಿ, ಸಾಮಾನ್ಯ ಕನ್ನಡಿಗನಾಗಿ ಇಲ್ಲಿಗೆ ಬಂದಿದ್ದೇನೆ. ಸಮ್ಮೇಳನದಲ್ಲಿ ಭಾಗಿಯಾಗಿದ್ದು ನನಗೆ ಬಹಳ ಸಂತೋಷ ಉಂಟು ಮಾಡಿದೆ ಎಂದರು.

ಸಮ್ಮೇಳನ ಸರ್ವಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಸಮ್ಮೇಳನದ ಪ್ರಧಾನ ಭಾಷಣದಲ್ಲಿ ಅನೇಕ ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ. ನಾಡಿಗೆ ಅವರು ಕೊಟ್ಟಿರುವ ಸಂದೇಶಗಳನ್ನು ಜಾರಿಗೆ ತರಬೇಕು, ಅದು ಆಡಳಿತ ನಡೆಸುವವರ ಕರ್ತವ್ಯ. ಅವರ ಆಶಯಗಳನ್ನು ಅನುಷ್ಠಾನಕ್ಕೆ ತರಬೇಕು ಎನ್ನುವುದು ನನ್ನ ಬಲವಾದ ಒತ್ತಾಸೆಯಾಗಿದೆ ಎಂದರು.

ತ್ರಿಭಾಷಾ ಸೂತ್ರಕ್ಕಿಂತ ದ್ವಿಭಾಷಾ ಸೂತ್ರ ಅಗತ್ಯ ಎಂದು ಸಮ್ಮೇಳನ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ. ಆದರೆ, ಗ್ರಾಮಿಣ ಪ್ರದೇಶದ ಪೋಷಕರಿಗೆ ಬೃಹತ್ತಾದ ಸವಾಲು ಇದೆ. ಒಂದು ಕಡೆ ತಮ್ಮ ಮಾತೃಭಾಷೆ ಕನ್ನಡವನ್ನು ಉಳಿಸಬೇಕು, ಇನ್ನೊಂದು ಕಡೆ ಜಾಗತಿಕ ಓಟಕ್ಕೆ ಅನುಗುಣವಾಗಿ ತಮ್ಮ ಮಕ್ಕಳ ಭವಿಷ್ಯವನ್ನೂ  ಕಟ್ಟಿಕೊಡಬೇಕು. ಇಂತಹ ತಳಮಳ, ಸವಾಲು, ಆತಂಕದಲ್ಲಿ ಪೋಷಕರು ಇದ್ದಾರೆ. ಅದಕ್ಕೆ ಪರಿಹಾರವೇನು ಎಂಬ ಬಗ್ಗೆ ನಾವೆಲ್ಲರೂ ಆಲೋಚನೆ ಮಾಡಬೇಕು ಎಂದರು.

ಅನ್ಯಭಾಷೆಗಳ ಹೇರಿಕೆಯ ಬಗ್ಗೆ ಇರುವ ಆತಂಕಗಳ ಬಗ್ಗೆ ಅಧ್ಯಕ್ಷರು ಚರ್ಚೆ ಮಾಡಿದ್ದಾರೆ. ಅವರ ಅಷ್ಟೂ ಭಾಷಣವನ್ನು ಓದಿದ್ದೇನೆ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಭಾಷಣಕ್ಕೆ ಈ ವೇದಿಕೆಯನ್ನು ಬಳಕೆ ಮಾಡಿಕೊಳ್ಳಲಾರೆ, ಮಾಡಿಕೊಳ್ಳಬಾರದು ಕೂಡ. ಕನ್ನಡ ಶಾಲೆಗಳಿಗೆ ಪ್ರೋತ್ಸಾಹ ಕೊಡುವ ವಿಷಯದಲ್ಲಿ ಲೋಪಗಳಾಗಿವೆ. ಅದನ್ನು ನಾವು ಸರಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮಕ್ಕಳು, ಪೋಷಕರು ಮಾತೃಭಾಷೆಯಿಂದ ವಿಮುಖರಾಗುತ್ತಾರೆ ಎಂದರು.

2006ರಲ್ಲಿ ನಾನು ಬಿಜೆಪಿ ಪಕ್ಷದ ಜತೆ ಮೈತ್ರಿ ಸರಕಾರ ರಚನೆ ಮಾಡಿದ್ದಾಗ ಈ ವೇದಿಕೆಯಲ್ಲಿರುವ ಹಾಲಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಪ್ರಾಥಮಿಕ ಶಿಕ್ಷಣ ಖಾತೆ ಸಚಿವರಾಗಿದ್ದರು. ಆಗ ರಾಜ್ಯದಲ್ಲಿ 169 ಪ್ರಥಮ ದರ್ಜೆ ಕಾಲೇಜುಗಳು ಇದ್ದವು, ಆಗ  ಕಾಲೇಜುಗಳ ಕೊರತೆ ಹೆಚ್ಚಾಗಿತ್ತು. ಅದಕ್ಕೆ ಅಂದಿನ ನಮ್ಮ ಸರಕಾರ ಸ್ಪಂದಿಸಿತು. ಹೊಸದಾಗಿ 189 ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪನೆ ಮಾಡಲಾಯಿತು. ಅದರಲ್ಲಿ ವಿಜ್ಞಾನ ಕಾಲೇಜುಗಳನ್ನು ಹೆಚ್ಚು ತೆರೆಯಲಾಯಿತು. 500 ಜ್ಯೂನಿಯರ್ ಕಾಲೇಜುಗಳು, ಆರು ಎಂಜಿನಿಯರಿಂಗ್ ಕಾಲೇಜ್ ಹಾಗೂ ಸಾವಿರಾರು ಶಾಲೆಗಳನ್ನು ಆರಂಭ ಮಾಡಿದ್ದೆವು. ಇದರಿಂದ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯೇ ಆಯಿತು ಎನ್ನುವುದು ನನ್ನ ಭಾವನೆ ಎಂದರು.

ಪೋಷಕರ ಮನಸ್ಥಿತಿ ಹಾಗೂ ಪೈಪೋಟಿ ಮನೋಭಾವನೆಯಿಂದ ಗ್ರಾಮೀಣ ಭಾಗದ ಮಕ್ಕಳ ಮಾತೃಭಾಷಾ ಕಲಿಕೆ ಪ್ರಮಾಣ ಕುಸಿಯುತ್ತಿದೆ. ನಗರ ಪ್ರದೇಶಗಳ ಮಕ್ಕಳ ಜತೆ ಅವರು ಪೈಪೋಟಿ ನಡೆಸಬೇಕಿದೆ. ಹೀಗಾಗಿ ಪೋಷಕರ ಆಲೋಚನೆಯೇ ಬೇರೆಯಾಗಿದೆ. ಅವರಿಗೆ ಮಕ್ಕಳ ಭವಿಷ್ಯವನ್ನು ರೂಪಿಸುವುದೇ ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆದಾಗ, ಸಾವಿರ ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲು ಹೊರಟಿದ್ದು ನಿಜ. ಕನ್ನಡಕ್ಕೆ ಅಪಾಯ ಉಂಟು ಮಾಡಬೇಕು ಎಂದು ಆ ನಿರ್ಧಾರ ಮಾಡಲಿಲ್ಲ. ನಗರ ಪ್ರದೇಶಗಳ ಮಕ್ಕಳ ಜತೆ ಪೈಪೋಟಿಗೆ ಹಳ್ಳಿ ಮಕ್ಕಳನ್ನು ಸಜ್ಜು ಮಾಡುವ ಸದುದ್ದೇಶದಿಂದ ನಾನು ಆ ನಿರ್ಧಾರ ಮಾಡಿದ್ದೆ. ಜತೆಗೆ, ಕಲಿಕೆಯಲ್ಲಿ ಕನ್ನಡಕ್ಕೆ ಒತ್ತು ಕೊಡುವ ಕೆಲಸವನ್ನು ನಾನು ಮಾಡಿದ್ದೆ ಎಂದರು.

‘ದುರ್ಗಾಸ್ತಮಾನ’ ನಾನು ಬಹುವಾಗಿ ಇಷ್ಟಪಟ್ಟು ಓದಿದ ಬೃಹತ್ ಕಾದಂಬರಿ. ಸಾವಿರ ಪುಟಗಳ ಆ ಮಹಾನ್ ಕಾದಂಬರಿಯನ್ನು ಓದಿ ರೋಮಾಂಚನಗೊಂಡಿದ್ದೇನೆ. ಆ ಕಾದಂಬರಿಯಲ್ಲಿ ವೀರ ಮದಕರಿನಾಯಕರ ಅಂತ್ಯದ ಕಥನ ಓದಿದರೆ ಎಂತಹವರ ಹೃದಯವೂ ಕರಗುತ್ತದೆ ಎಂದರು.

ವ್ಯಾಸರಾಯ ಬಲ್ಲಾಳರ ಕಾದಂಬರಿಗಳಿಗೆ ನಾನು ಹೆಚ್ಚು ಆಕರ್ಷಿತನಾಗಿದ್ದೇನೆ. ಗಜಾನನ ಶರ್ಮ ಅವರ ‘ಚನ್ನಾಭೈರಾದೇವಿ’ ಕಾದಂಬರಿ, ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’, ಬೊಳುವಾರು ಮುಹಮ್ಮದ್ ಕುಂಞಿ ಅವರ ‘ಸ್ವಾತಂತ್ರ್ಯದ ಓಟ’ ಇತ್ಯಾದಿ ಕಾದಂಬರಿಗಳನ್ನು ಓದಿದ್ದೇನೆ ಎಂದರು.

ಕನ್ನಡ ಚಿತ್ರರಂಗದಿಂದ ಬಂದವನು ನಾನು, ಅಂದಿನ ಚಿತ್ರ ಕಥೆಗಳು ಇಂದಿನ ಚಿತ್ರ ಕಥೆಗಳ ನಡುವೆ ಬಹಳ ವ್ಯತ್ಯಾಸವಿದೆ. ಸಮಾಜವನ್ನು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಬೇಸರವಾಗುತ್ತದೆ. ಡಾ.ರಾಜ್ ಕುಮಾರ್ ಅವರು ಹಾಡಿರುವ ‘ಹಾಲಿನ ಹೊಳೆಯೋ.. ಜೇನಿನ ಮಳೆಯೋ..’ ಹಾಡನ್ನು ಕೇಳುತ್ತಾ ಅನೇಕ ಸಲ  ಮೈಮರೆತಿದ್ದೇನೆ ಎಂದರು.

ಇಂದಿನ ಚಿತ್ರರಂಗದಲ್ಲಿ ಉತ್ತಮ, ಸದಭಿರುಚಿಯ ಚಿತ್ರಗಳು ಬರಬೇಕು, ಉತ್ತಮ ಕಥೆಗಳ, ಸಮಾಜಕ್ಕೆ ಒಳ್ಳೆಯದು ಮಾಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಸಮಾಜದಲ್ಲಿ ನೆಮ್ಮದಿಯ ವಾತಾವರಣ ನೆಲೆಸಬೇಕಿದೆ. ಮನುಷ್ಯ ಸಂಬಂಧಗಳು ಹಾಳಾಗಬಾರದು. ಅವುಗಳನ್ನು  ಕಾಪಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ಎಲ್ಲರೂ ಕೂತು ಪಂಕ್ತಿಭೋಜನ ಮಾಡುವ ದಿನಗಳು ಮತ್ತೆ ಬರಬೇಕು. ಈಗ ಎಲ್ಲವೂ ಇದೆ, ಆದರೆ ಏನೂ ಇಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಿಂದಿನ ನಮ್ಮ ಸಂಸ್ಕೃತಿ, ಬಾಂಧವ್ಯ, ಸಂಬಂಧಗಳು ಮರುಕಳಿಸಬೇಕು ಎಂದರು.

ಸಮ್ಮೇಳನ ಸರ್ವಾಧ್ಯಕ್ಷರಾದ ಗೊರುಚ ಅವರು ಶತಾಯುಷಿ ಆಗಬೇಕು ಎನ್ನುವುದು ನನ್ನ ಹಾರೈಕೆ. ಅವರಿಗೆ ಜ್ಯೋತಿಷಿ ಹೇಳಿರುವ ಭವಿಷ್ಯ ನಿಜವಾಗಲಿ. ಅವರು ಶತಾಯುಷ್ಯ ಮೀರಿ ನಮ್ಮ ಜತೆಯಲ್ಲಿ ಬಾಳಲಿ ಎಂದರು.

ಗೊರುಚ ಅವರ ಬದುಕು ನಮಗೆ ಪ್ರೇರಣೆ. ನಾನು ನೂರು ವರ್ಷ ಬದುಕುತ್ತೇನೆ, ಹಾಗೆಂದು ಜ್ಯೋತಿಷಿ ಹೇಳಿದ್ದಾರೆ ಎಂದು ಅವರು ಹೇಳಿದ ಮಾತನ್ನು ನಾನು ವೇದಿಕೆಯಲ್ಲಿ ಗಮನಿಸಿದ್ದೇನೆ. ಅವರಿಗೆ ಆಯುಷ್ಯದ ಆತಂಕ ಬೇಡ. ಜ್ಯೋತಿಷಿ ಭವಿಷ್ಯದ ಜತೆಗೆ ನಮ್ಮೆಲ್ಲರ ಹಾರೈಕೆಯೂ ಇದೆ. ನನ್ನ ಪಿತೃ ಸಮಾನರಾದ ಗೊರುಚ ಅವರು ಇನ್ನೂ ಅನೇಕ ವರ್ಷಗಳ ಕಾಲ ನಮ್ಮ ಜತೆಯಲ್ಲಿಯೇ ಇರುತ್ತಾರೆ ಎಂದರು.

Leave a Reply