ರೈತರ ಅನುಕೂಲಕ್ಕಾಗಿ ಸುಸಜ್ಜಿತ ಪುಷ್ಪ ಮಾರುಕಟ್ಟೆ ಸ್ಥಾಪನೆ: ಶಿವಾನಂದ ಪಾಟೀಲ

1 year ago

ಬೆಂಗಳೂರು: ಪುಷ್ಪೋದ್ಯಮವನ್ನು ಉತ್ತೇಜಿಸುವ ಮೂಲಕ, ಪುಷ್ಪೋದ್ಯಮದಲ್ಲಿ ತೊಡಗಿರುವ ರೈತರ ಅನುಕೂಲಕ್ಕಾಗಿ ಸುಸಜ್ಜಿತ ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನ ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪುಷ್ಪ ಮಾರಾಟ ಮತ್ತು ರಫ್ತು ಉತ್ತೇಜಿಸಲು ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾರ್ವಜನಿಕ ಸಹಭಾಗಿತ್ವದ ಬದಲಿಗೆ ಸರ್ಕಾರ ಅಥವಾ ಎಪಿಎಂಸಿಯ ಸ್ವಂತ ನಿಧಿಯಿಂದ ಮಾರುಕಟ್ಟೆ ಅನುಷ್ಠಾನಗೊಳಿಸಲು ನಿರ್ಧರಿಸಿ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದೆ ಎಂದರು.

ಬೆಂಗಳೂರಿನ ದಾಸನಪುರ, ಮೈಸೂರು, ಕೋಲಾರ ಎಪಿಎಂಸಿಗಳಲ್ಲಿ ಪಿಪಿಪಿ ಮಾದರಿಯಲ್ಲಿ ಬಯೋ ಸಿಎನ್ಜಿ ಪ್ಲಾಂಟ್ ಗಳ ಸ್ಥಾಪನೆಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಅನುಮೋದನೆ ಪಡೆಯಲು ಡಿಪಿಆರ್ ಹಾಗೂ ಆರ್ಎಫ್ಪಿಗಳನ್ನು ಸಲ್ಲಿಸಲಾಗಿದೆ. ರಾಯಚೂರಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲು ಅನುಮೋದನೆಯಾಗಿದ್ದು, ಟೆಂಡರ್ ಕರೆಯಲಾಗಿದೆ ಎಂದರು.

ರಾಜ್ಯದ ಎಲ್ಲ ಎಪಿಎಂಸಿಗಳ ಕಾರ್ಯ ಚಟುವಟಿಕೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ. ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಾಯದೊಂದಿಗೆ ಇಆರ್ಪಿ ಅಭಿವೃದ್ಧಿಪಡಿಸಲಾಗುತ್ತಿದೆ. 8 ಮಾಡ್ಯೂಲ್ ಗಳಲ್ಲಿ 4 ಮಾಡ್ಯೂಲ್ ಗಳು ಪೂರ್ಣಗೊಂಡಿದ್ದು, ಇತರ 4 ಪ್ರಗತಿಯಲ್ಲಿವೆ ಎಂದರು.

ಬಳ್ಳಾರಿ, ಗದಗ, ರಾಣೆಬೆನ್ನೂರು ಹಾಗೂ ಮೈಸೂರು ಎಪಿಎಂಸಿಗಳಲ್ಲಿ ಶೀತಲಗೃಹ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಬಸವನಬಾಗೇವಾಡಿ ಮತ್ತು ಯಲಬುರ್ಗಾಗಳಲ್ಲಿ ಆರ್ಐಡಿಎಫ್ 29ರ ಅಡಿ ಶೀತಲಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಬಾರ್ಡ್ ಕಾಮಗಾರಿಗಳ ಯೋಜನೆ ಅಡಿಯಲ್ಲಿ ಗ್ರಾಮೀಣ ಮಾರುಕಟ್ಟೆಗಳ ಅಭಿವೃದ್ಧಿ ಮಾಡಲಿದ್ದು, ಆರ್ಐಡಿಎಫ್ -28 ಅಡಿ ಸುಮಾರು 179.13 ಕೋಟಿ ರೂ. ವೆಚ್ಚದಲ್ಲಿ 18 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ 6 ಪೂರ್ಣಗೊಂಡಿವೆ. 11 ಪ್ರಗತಿಯಲ್ಲಿದ್ದು, ಒಂದು ಕಾಮಗಾರಿ ಕೈಬಿಡಲಾಗಿದೆ ಎಂದರು.

ಆರ್ ಐ ಡಿಎಫ್ -28ರ ಅಡಿ ಅಂದಾಜು 210 ಕೋಟಿ ರೂ. ವೆಚ್ಚದಲ್ಲಿ 70 ಕಾಮಗಾರಿಗಳನ್ನು ಕೈಗೊಂಡಿದ್ದು, 28 ಮುಗಿದಿವೆ, 42 ಕಾಮಗಾರಿಗಳು ಪ್ರಗತಿಯಲ್ಲಿವೆ. ಆರ್ ಐ ಡಿಎಫ್ -30ರ ಅಡಿಯಲ್ಲಿ 144.75 ಕೋಟಿ ರೂ. ವೆಚ್ಚದಲ್ಲಿ 10 ಕಾಮಗಾರಿ ಕೈಗೊಂಡಿದ್ದು, ಟೆಂಡರ್ ಕರೆಯಲಾಗಿದೆ. ಎಪಿಎಂಸಿ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕದಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ರೈತಭವನ, ಮುಚ್ಚು ಹರಾಜುಕಟ್ಟೆ, ಶೌಚಾಲಯ, ರಸ್ತೆ, ಚರಂಡಿ,ಗೋದಾಮು, ಮಳಿಗೆ  ಮತ್ತಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಬೆಸ್ಕಾಂ ವತಿಯಿಂದ ಎಪಿಎಂಸಿಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡಲು ಯೋಜಿಸಲಾಗಿದೆ. ಕಬ್ಬಿನ ತೂಕದಲ್ಲಿ ವಂಚನೆ ತಡೆಗೆ ಎಲ್ಲ ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿಗಳ ಮೂಲಕ ಡಿಜಿಟಲ್ ತೂಕದ ಯಂತ್ರ ಸ್ಥಾಪನೆಗೆ ನಿರ್ಧರಿಸಿ 14 ಸ್ಥಳಗಳಲ್ಲಿ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ ಎಂದರು.

Leave a Reply