ಬಿಜೆಪಿಯವರಿಗೆ ಸದನದ ಶಿಸ್ತು, ಪಾವಿತ್ರ್ಯದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ?: ಬಿ ಕೆ ಹರಿಪ್ರಸಾದ್

3 months ago

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮೊದಲ ದಿನದ ಅಧಿವೇಶನ ಹಲವು ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣ ಓದದೆ ನಿರ್ಗಮಿಸಿದರೆ, ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅಡ್ಡಗಟ್ಟಿದರು.

ಈ ವೇಳೆ ಹರಿಪ್ರಸಾದ್ ಅವರಿಗೆ ಅಡ್ಡಲಾಗಿ ಬಿಜೆಪಿ ಸದಸ್ಯರು ನಿಂತರು ಆಗಿ ಮಧ್ಯ ಪ್ರವೇಶಿಸಿದ ಮಾರ್ಷಲ್ ಗಳು ಎಲ್ಲರನ್ನು ಪಕ್ಕಕ್ಕೆ ಸರಿಸಿ ರಾಜ್ಯಪಾಲರು ಸುಗಮವಾಗಿ ತೆರಳಲು ಅವಕಾಶ ಕಲ್ಪಿಸಿದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಅರಿಪ್ರಸಾದ್ ಅವರು ಹಾಕಿಕೊಂಡಿದ್ದ ಜುಬ್ಬ ಹರಿದು ಹೋಯಿತು.

ಇದರಿಂದ ವಿಚಲಿತರಾದ ಅವರು ಕೆಲಕಾಲ ಪ್ರತ್ಯೇಕವಾಗಿ ನಿಂತರು ನಂತರ ತಮ್ಮ ಆಪ್ತ ಸಿಬ್ಬಂದಿಗೆ ಹೇಳಿ ಬೇರೆ ಬಟ್ಟೆ ತರಿಸಿಕೊಂಡು ಧರಿಸಿದರು. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಾಜ್ಯ ರಾಜಕಾರಣದಲ್ಲಿ ಅತ್ಯಂತ ಕರಾಳ ದಿನವನ್ನು ಸೃಷ್ಟಿಸಿರುವ ಬಿಜೆಪಿಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ರಾಜ್ಯಪಾಲರು ರಾಜ್ಯದ ತೆರಿಗೆಯ ಹಣದಿಂದ ಅಧಿಕಾರ ಅನುಭವಿಸುತ್ತಿದ್ದಾರೆಯೇ ಹೊರತು ನಾಗಪುರದಲ್ಲಿರುವ ನೋಂದಣಿಯೇ ಆಗದ ಸಂಘಟನೆಗೆ ಬರುವ ಬಿಟ್ಟಿ ಹಣದಿಂದಲ್ಲ ಎಂದು ವಾಗ್ದಾಳಿ ನಡೆಸಿದರು.

ಸದನದಲ್ಲಿ ಬಟ್ಟೆ ಹರಿದುಕೊಂಡು, ಕೈ ಕೈ ಮಿಲಾಯಿಸಿದ, ನೀಲಿ ಚಿತ್ರ ವೀಕ್ಷಿಸಿದ ಸಭಾಪತಿಗಳ ಮುಖದ ಮೇಲೆ ಕಾಗದ ಹರಿದು ಬಿಸಾಕಿದ ಬಿಜೆಪಿಯವರಿಗೆ ಸದನದ ಶಿಸ್ತು ಪಾವಿತ್ರ್ಯ ಮತ್ತು ಗೌರವದ ಬಗ್ಗೆ ಮಾತನಾಡಲು ಕಿಂಚಿತ್ತಾದರು ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

Leave a Reply