ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮ

6 months ago

ಹಾಸನ: ಕಾಲು-ಬಾಯಿ ರೋಗವು ದನ, ಎಮ್ಮೆ, ಹಂದಿ, ಕುರಿ, ಮೇಕೆ ಮತ್ತು ವನ್ಯ ಜೀವಿಗಳಲ್ಲಿ ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಜಾನುವಾರುಗಳಲ್ಲಿ ಅತೀಯಾದ ಜ್ವರ ಹಾಗೂ ಕಾಲು ಮತ್ತು ಬಾಯಿಗಳಲ್ಲಿ ಉಣ್ಣು ಕಂಡುಬರುತ್ತದೆ. ರೋಗಗ್ರಸ್ಥ ಜಾನುವಾರುಗಳಲ್ಲಿ ಉತ್ಪಾದಕತೆ ಕುಂಠಿತಗೊಂಡು ರೈತಾಪಿ ವರ್ಗಕ್ಕೆ ಇದರಿಂದ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುತ್ತದೆ.

ಭಾರತ ಸರ್ಕಾರದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ದಿನಾಂಕ: 03.11.2025 ರಿಂದ 02.12.2025 ರವರೆಗೆ ಹಾಸನ ಜಿಲ್ಲೆಯಾದ್ಯಂತ 8ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸದರಿ ಲಸಿಕಾ ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಿಬ್ಬಂದಿ ವರ್ಗದವರು ಗ್ರಾಮಗಳಿಗೆ ಭೇಟಿ ನೀಡಿ ಉಚಿತವಾಗಿ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ನೀಡಲಿದ್ದಾರೆ. ಸದರಿ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿದ ಜಾನುವಾರುಗಳ ವಿವರಗಳೊಂದಿಗೆ ಲಸಿಕಾ ಪ್ರಗತಿಯನ್ನುಆನ್ ಲೈನ್ ನಲ್ಲಿ ಭಾರತ್ ಪಶುಧನ್ ತಂತ್ರಾಂಶದಲ್ಲಿ ದಾಖಲು ಮಾಡಲಾಗುತ್ತದೆ. ಹಾಗೂ ಜಿಲ್ಲೆಯ ಲಸಿಕಾ ಪ್ರಗತಿಯನ್ನು ಭಾರತ್ ಪಶುಧನ್ ಪೋರ್ಟಲ್ ನಲ್ಲಿ ವೀಕ್ಷಿಸಬಹುದು.

ಜಿಲ್ಲೆಯ ಎಲ್ಲಾ ರೈತ ಬಾಂಧವರು ಹಾಗೂ ಸಾರ್ವಜನಿಕರು ತಮ್ಮ ಜಾನುವಾರುಗಳಿಗೆ ಅಂದರೆ ಎಲ್ಲಾ ದನ ಮತ್ತು ಎಮ್ಮೆಗಳಿಗೆ ಹಾಗೂ 4 ತಿಂಗಳ ಮೇಲ್ಪಟ್ಟ ಎಲ್ಲಾ ಕರುಗಳಿಗೆ ತಪ್ಪದೇ ಕಾಲು-ಬಾಯಿ ರೋಗದ ಲಸಿಕೆಯನ್ನು ಹಾಕಿಸುವ ಮೂಲಕ ತಮ್ಮ ಜಾನುವಾರುಗಳನ್ನು ಕಾಲು-ಬಾಯಿ ರೋಗದಿಂದ ಸಂರಕ್ಷಿಸಿಕೊಂಡು ಈ ರೋಗದಿಂದ ಉಂಟಾಗಬಹುದಾದ ಆರ್ಥಿಕ ನಷ್ಟದಿಂದ ಪಾರಾಗಲು ಸಹಕರಿಸುವಂತೆ ಪಶು ಪಾಲನಾ ಇಲಾಖೆ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.

Leave a Reply