ಮಂಗಳೂರು: ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರಗಳು ಮಕ್ಕಳಲ್ಲಿ ವಿಭಿನ್ನ ಶೈಲಿಯ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ. ಸ್ವಯಂಸ್ಪೂರ್ತಿ, ಆತ್ಮವಿಶ್ವಾಸ ಬೆಳೆಸುವುದೇ ಇಂತಹ ಶಿಬಿರಗಳ ಉದ್ದೇಶವಾಗಿದೆ. ಗಂಡು ಮತ್ತು ಹೆಣ್ಣು ಮಾತ್ರವೇ ಮಾನವನಲ್ಲಿರುವ ಎರಡು ವರ್ಗಗಳು ಎಂಬ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕಾಗಿದೆ. ಭವಿಷ್ಯತ್ತಿನ ಹರಿಕಾರರಾಗಬೇಕಾದ ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿದರೆ ಮಾತ್ರವೇ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಹೇಳಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಜಂಟಿ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಚಿಣ್ಣರ ಕಲರವ – 2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತಿ ಧರ್ಮಗಳು ಮಾನವೀಯತೆಗೆ ಯಾವತ್ತೂ ಅಡ್ಡಿಯಾಗಬಾರದು.ನಮ್ಮ ಗುರಿ ಮಾನವೀಯತೆ ಆಗಿರಬೇಕು.ಪರಸ್ಪರರನ್ನು ಪ್ರೀತಿಸಿದರೆ ಮಾತ್ರವೇ ಶಾಂತಿಯುತ ಸಮಾಜ ಸಾಧ್ಯ ಎಂದರು.

ಸಂತ ಜೆರೋಸಾ ಶಾಲೆಯ ಸಹ ಶಿಕ್ಷಕರಾದ ಸಿಸ್ಟರ್ ಎಲ್ಫ್ರೆಡ್ ವಿಲ್ಮಾ ಡಿಸೋಜ ಮಾತನಾಡಿ, ಸಮಾಜದಲ್ಲಿ ಇಂದು ಅವಿಭಕ್ತ ಕುಟುಂಬಗಳು ಕಾಣಸಿಗುತ್ತಿಲ್ಲ. ವಿಭಕ್ತ ಕುಟುಂಬಗಳೇ ಹೆಚ್ಚಾಗಿವೆ. ಹಾಗಾಗಿ ಮಕ್ಕಳಿಗೆ ಮನೆಯ ಪರಿಸರದಲ್ಲಿ ಬೆರೆಯಲು ಬಂಧುಗಳ ಕೊರತೆ ಇದೆ. ಇಂತಹ ಶಿಬಿರಗಳು ಮಕ್ಕಳಲ್ಲಿ ಇರುವ ಏಕತಾನತೆಯನ್ನು ದೂರ ಮಾಡಿ,ವಿಶಾಲ ಗೆಳೆಯರುಗಳ ಬಳಗವನ್ನು ಕಲ್ಪಿಸಿಕೊಡುತ್ತದೆ ಎಂದರು.

ಶಿಬಿರಾರ್ಥಿಗಳ ಪೋಷಕರಾದ ಪ್ರವೀಣ್, ಜೆರಾಲ್ಡ್ ಡಿಸೋಜ, ವಿನಯ್ ಮಾತನಾಡಿ, ಇಂತಹ ಶಿಬಿರಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕ. ಇಂತಹ ಶಿಬಿರಗಳ ಮೂಲಕ ಒಳ್ಳೆಯ ಮನಸ್ಸುಗಳನ್ನು ಕಟ್ಟುವ ಕೆಲಸವಾಗಲಿ ಎಂದು ಶುಭಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಿಣ್ಣರ ಚಾವಡಿಯ ಸಂಚಾಲಕ ಸುನಿಲ್ ಕುಮಾರ್ ಬಜಾಲ್, ನಮ್ಮ ಮಕ್ಕಳು ಕೇವಲ ನಮ್ಮವರಲ್ಲ, ಅವರು ಸಮಾಜದ ಆಸ್ತಿ. ಎಳೆಯ ಪ್ರಾಯದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ನೀರೆರೆದು ಪೋಷಿಸುವುದು ಕೇವಲ ಹೆತ್ತವರ ಜವಾಬ್ದಾರಿಯಲ್ಲ, ಬದಲಿಗೆ ಇಡೀ ಸಮಾಜದ ಕರ್ತವ್ಯವೂ ಆಗಿದೆ. ನಮ್ಮ ಮಕ್ಕಳು ನಾವು ಎಣಿಸಿದ ಹಾಗೆ ಇಲ್ಲ.ಅದ್ಬುತ ಪ್ರತಿಭೆಗಳು ಅವರೊಳಗಡೆ ಅಡಗಿದೆ ಎಂದರು.

ವೇದಿಕೆಯಲ್ಲಿ ಸಂತ ಜೆರೋಸಾ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅರ್ಪಿತಾ, ಪ್ರಗತಿಪರ ಚಿಂತಕರಾದ ಫ್ಲೇವಿ ಕ್ರಾಸ್ತಾ ಅತ್ತಾವರ, ದಿಶಾ ರೀಟಾ ಡಿಸೋಜ,ಹೇಝೆಲ್ ರೋಡ್ರಿಗಸ್, ಮಹಮ್ಮದ್ ಇಕ್ಬಾಲ್ ಕುದ್ರೋಳಿ, ಶಿಬಿರದ ನಿರ್ದೇಶಕ ರಾದ ಪ್ರವೀಣ್ ವಿಸ್ಮಯ ಬಜಾಲ್ ರವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಚಿಣ್ಣರ ಚಾವಡಿಯ ಸಹ ಸಂಚಾಲಕರಾದ ಅಸುಂತ ಡಿಸೋಜರವರು ವಹಿಸಿದ್ದರು. SSLCಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಶಿಬಿರಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಾರಂಭದಲ್ಲಿ ಚಿಣ್ಣರ ಚಾವಡಿ ಜಿಲ್ಲಾ ಸಂಚಾಲಕ ಮನೋಜ್ ವಾಮಂಜೂರುರವರು ಸ್ವಾಗತಿಸಿದರೆ, ಕೊನೆಯಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕೋಶಾಧಿಕಾರಿ ಡೋಲ್ಫಿ ಡಿಸೋಜ ವಂದಿಸಿದರು. ಚಿಣ್ಣರ ಚಾವಡಿ ಅಧ್ಯಕ್ಷರಾದ ಪೂರ್ವಿ ಶೆಟ್ಟಿ ಹಾಗೂ ಜತೆ ಕಾರ್ಯದರ್ಶಿ ಆಲ್ಡಿನ್ ಸಿಕ್ವೇರಾರವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಕ್ಕಳ ಪ್ರತಿಭಾ ಪ್ರದರ್ಶನ ಜರುಗಿತು. ಹಾಡುಗಳು, ಮೂಕಾಭಿನಯ, ಡಾನ್ಸ್,ತಾಲೀಮು ಪ್ರದರ್ಶನ ಕಾರ್ಯಕ್ರಮಗಳು ನಡೆದು ಕೊನೆಯಲ್ಲಿ ಜಂಗಲ್ ಬುಕ್ ಎಂಬ ಅಧ್ಬುತ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು.




