ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗೆ ಎಂ  ಜವರಾಜ್ ಆಯ್ಕೆ

2 years ago

ಚಾಮರಾಜನಗರ: ನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆ ಮೈಸೂರಿನ ನೆಲೆ ಹಿನ್ನೆಲೆ ಮತ್ತು ರಾಮ ಮನೋಹರ ಲೋಹಿಯ ಟ್ರಸ್ಟ್ ಸಹಯೋಗದಲ್ಲಿ ನೀಡಲಾಗುತ್ತಿರುವ 12ನೇ ವರ್ಷದ ರಾಜ್ಯಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಯನ್ನು ಟಿ. ನರಸೀಪುರದ ಕವಿ ಎಂ  ಜವರಾಜ್ ಅವರ ಮೆಟ್ಟು ಹೇಳಿದ ಕಥಾ ಪ್ರಸಂಗ ಕೃತಿಗೆ  ನೀಡಲಾಗುತ್ತಿದೆ.

ಇದೆ ಮೇ 26ರಂದು ಭಾನುವಾರ  ಸಂಜೆ 5.30 ಕ್ಕೆ ಮೈಸೂರಿನ ರಮಾ ಗೋವಿಂದ ರಂಗಮಂದಿರದಲ್ಲಿ  ಹಮ್ಮಿಕೊಂಡಿರುವ ರಾಜ್ಯಮಟ್ಟದ ಮುಳ್ಳೂರು  ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ರಾಜಶೇಖರ ಕೋಟ ನೆನಪು ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಕವಿ ಜವರಾಜ್ ಗೆ ನೀಡಲಾಗುತ್ತಿದೆ. ಪ್ರಶಸ್ತಿಯು 10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಈ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಲ್ ಎನ್ ಮುಕುಂದರಾಜು ಉದ್ಘಾಟಿಸುವರು. ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ. ಆರ್. ರಾಜು ಅಧ್ಯಕ್ಷತೆ ವಹಿಸುವರು. ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕ ಡಿ ಚಂದ್ರಶೇಖರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು. ಭುವನೇಶ್ವರ ವಿವಿ ವಿಶ್ರಾಂತ ಕುಲಪತಿ ಪ್ರೋ ಮಹದೇವ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತರ ಕುರಿತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ಸುಬ್ಬು ಹೊಲೆಯಾರ್ ಮಾತನಾಡುವರು.

ರಾಜಶೇಖರ ಕೋಟಿ ಕುರಿತು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡುವರು, ಮುಖ್ಯ ಅತಿಥಿಗಳಾಗಿ ನೆಲೆ ಹಿನ್ನೆಲೆ ಸಂಸ್ಥೆಯ ಕೆ ಆರ್ ಗೋಪಾಲ್ ಕೃಷ್ಣ ಭಾಗವಹಿಸುವರು ಎಂದು ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply