ಸಿದ್ದರಾಮಯ್ಯ ನವರನ್ನು ದೂರಿ ಏನು ಪ್ರಯೋಜನ ಸಂಸದ ಚೌಟರೆ?

1 year ago

ಮಾನ್ಯ ಸಂಸದರು ಮಂಗಳೂರಿನ ಕಾನೂನು ಸುವ್ಯವಸ್ಥೆಯ ಕುರಿತು ಆತಂಕಿತರಾಗಿದ್ದಾರೆ. ಮುಖ್ಯಮಂತ್ರಿ ನಗರದಲ್ಲಿ ಇರುವಾಗಲೆ ಬ್ಯಾಂಕ್ ಮೇಲೆ ಸಶಸ್ತ್ರ ದುಷ್ಕೃರ್ಮಿಗಳ ಧಾಳಿ, ಹತ್ತಾರು ಕೋಟಿ ಲೂಟಿಯ ಕೃತ್ಯ ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟಿರುವುದರ ಸಂಕೇತ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ. ಮಂಗಳೂರು ಅಕ್ರಮ ದಂಧೆಗಳ ಕೇಂದ್ರವಾಗಿದೆ ಎಂದು ದೂರಿದ್ದಾರೆ.

ಆದರೆ, ಸಂಸದರು ಹಾಗೂ ಅವರ ಪಕ್ಷದ ಶಾಸಕರು ಮಂಗಳೂರು ಪೊಲೀಸ್ ಕಮೀಷನರ್ ಮೇಲೆ ಸತತ ಆರೋಪಗಳು ಬಂದಾಗಲು ಚಕಾರ ಎತ್ತಿದ್ದನ್ನು ನಾವು ಕಂಡಿಲ್ಲ. ಗ್ಯಾಂಬ್ಲಿಂಗ್, ಬೆಟ್ಟಿಂಗ್, ಅಕ್ರಮ ಮರಳು ಸಹಿತ ವಿವಿಧ ದಂಧೆಗಳು ರಾಜಾರೋಷವಾಗಿ ನಡೆಯಲು ಅನುವು ಮಾಡಿಕೊಟ್ಟದ್ದನ್ನು ಆಧಾರ ಸಹಿತ ಬಯಲಿಗೆಳೆದಾಗಲೂ ಕಮೀಷನರ್ ಅನುಪಮ್ ಅಗ್ರವಾಲ್ ವಿರುದ್ದ ಒಂದು ಶಬ್ದ ಮಾತಾಡಲಿಲ್ಲ.  ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಡುವಂತೆ ಮಾಡಿದ ಕಮೀಷನರ್ ವರ್ಗಾವಣೆಗೆ ಆಗ್ರಹಿಸಿ ನಾವು ಪ್ರತಿದಿನ ಪ್ರತಿಭಟನೆ ಮಾಡುತ್ತಿದ್ದಾಗಲೂ ಬಿಜೆಪಿ ಮೌನವಾಗಿ ಕಮೀಷನರ್ ಪರವಾಗಿ ನಿಂತಿತ್ತು.  ಬಿಜೆಪಿ ಶಾಸಕರುಗಳು ಅನುಮತಿಯನ್ನೇ ಪಡೆಯದೆ ರಸ್ತೆಗಳನ್ನೆ ಅತಿಕ್ರಮಿಸಿ ಆಹಾರ ಮೇಳ, ಆರ್ಕೆಸ್ಟ್ರಾ ನಡೆಸಲು ಕಮೀಷನರ್ ಅವಕಾಶ ಒದಗಿಸಿದ್ದೂ ಕಾನೂನು ಸುವ್ಯವಸ್ಥೆ ಹಿಡಿತ ತಪ್ಪಲು ಒಂದು ಕಾರಣ.

ಆಗೆಲ್ಲಾ ಮೌನ ವಹಿಸಿ,  ಈಗ ಬ್ಯಾಂಕ್ ಲೂಟಿಯ ಸಂದರ್ಭ ಸಿದ್ದರಾಮಯ್ಯ ನವರನ್ನು ದೂರಿ ಏನು ಪ್ರಯೋಜನ ಸಂಸದ ಚೌಟರೆ?  ದಂಧೆಗಳು, ದಂಧೆಕೋರರ ಕುರಿತು ಬಿಜೆಪಿಯ ಮೃದು ಧೋರಣೆ, ಕಮೀಷನರ್ ಅಗ್ರವಾಲ್ ಜೊತೆಗೆ ಅಂತರಂಗದ ಒಡನಾಟ ಮಂಗಳೂರಿನ ಜನತೆಗೆ ತಿಳಿದಿಲ್ಲ ಎಂದು ಭಾವಿಸಿದ್ದೀರಾ? ಗೃಹ ಸಚಿವರು, ಮುಖ್ಯಮಂತ್ರಿಗಳು ಬಿಡಿ, ಅವರು ಮಂಗಳೂರಿನ ಕೈ ಸಾಮ್ರಾಜ್ಯವನ್ನು ಮುಳುಗಿಸಲು ಪಣತೊಟ್ಟ, ಬಿಜೆಪಿ ಜೊತೆ “ಸೋದರ” ಸಂಬಂಧ ಹೊಂದಿರುವ “ಮಹಾ” ನಾಯಕರ ಮಾತುಗಳಿಗೆ  “ಟೀ ಕುಡಿಯುತ್ತಾ” ತಲೆಯಾಡಿಸಿ ಹೊರಟು ಹೋಗುತ್ತಾರೆ. ಅದರಿಂದ ನಿಮಗೆ, ಬಿಜೆಪಿಗೆ ಭರ್ಜರಿ ಲಾಭವೇ ಆಗುತ್ತಿದೆ ಬಿಡಿ.

– ಮುನೀರ್ ಕಾಟಿಪಳ್ಳ

Leave a Reply