ಚುನಾವಣೆಯ ಕೆಲವು ನೀತಿ ಸಂಹಿತೆಗಳು ಕೇವಲ ಕಾಗದ ಹುಲಿಗಳು

2 years ago

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಅನೇಕ ರಾಜ್ಯದಲ್ಲಿ ಮತ್ತು ಅನೇಕ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರಮುಖರಿಗೆ ಸೇರಿದ ನೂರಾರು ಕೋಟಿ ರೂಪಾಯಿಗಳ ನಗದು ಪತ್ತೆಯಾಗಿರುತ್ತದೆ. ಜೊತೆಗೆ ಬೆಳ್ಳಿ ಬಂಗಾರ ಮಾದಕ ವಸ್ತುಗಳು ದೊರೆತಿರುತ್ತದೆ. ಇವುಗಳೆಲ್ಲವನ್ನು ಚುನಾವಣೆಯ ಅಧಿಕಾರಿಗಳು ಹಲವಾರು ಕಡೆಗಳಲ್ಲಿ ಜಪ್ತಿ ಮಾಡಿ ಶೇಖರಿಸಿದ್ದಾರೆ. ಇದೊಂದು ಸುದ್ದಿ ಆಯಿತು. ಅಷ್ಟೇ ಆದರೆ ಯಾವ ಪಕ್ಷದ ಯಾವ ಅಭ್ಯರ್ಥಿಗೆ ಸೇರಿದ ಹಣ, ಹಣಹೊತ್ತು ತಿರುಗುತ್ತಿದ್ದವರು ಯಾವ ಪಕ್ಷದವರು ಎಂಬ ಯಾವ ಮಾಹಿತಿಯು ಬಹಿರಂಗಗೊಳ್ಳಲಿಲ್ಲ.

ಕರ್ನಾಟಕದಲ್ಲಿ ಅಂತೂ ಚುನಾವಣೆ ಮುಗಿದೆ ಹೋಯಿತು. ಹಣವನ್ನು ಹಿಡಿದಿದ್ದೇವೆ ಎಂಬ ಸುದ್ದಿಯೊಂದು ಬಿಟ್ಟು ಇದರಿಂದ ಚುನಾವಣೆಯ ಮೇಲೆ ಅಥವಾ ಅಭ್ಯರ್ಥಿಗಳ ಮೇಲೆ ಯಾವ ಪ್ರಭಾವವೂ ಆಗುವುದಿಲ್ಲ. ಜನಸಾಮಾನ್ಯರಿಗೆ ಹಣದ ಸಂಗ್ರಹದ ಸುದ್ದಿ ಒಂದು ಮನರಂಜನೆ ಆಗಿರುತ್ತದೆ. ಚುನಾವಣಾ ಅಧಿಕಾರಿಗಳಿಗೆ ಸುದ್ದಿ ಮಾಡಲು ಒಂದು ಸುದ್ದಿಯಾಗಿರುತ್ತದೆ. ಇದನ್ನು ಹೊರತುಪಡಿಸಿದರೆ ತಪ್ಪು ಮಾಡಿದ ಅಭ್ಯರ್ಥಿಗಳಿಗಾಗಲಿ, ರಾಜಕೀಯ ಪಕ್ಷಗಳ ನಾಯಕರುಗಳ ಮೇಲಾಗಲಿ ಯಾವ ಪ್ರಭಾವವೂ ಬೀರುವುದಿಲ್ಲ. ಚುನಾವಣೆಗಳು ನಡೆಯುತ್ತವೆ, ಫಲಿತಾಂಶಗಳು ಬರುತ್ತವೆ. ಮತ್ತೆ ಐದು ವರ್ಷಗಳು ಸಾಗುತ್ತವೆ. ಮತ್ತೆ 5 ವರ್ಷದ ನಂತರ ಇದೇ ಸುದ್ದಿಗಳನ್ನು ಮತದಾರರು ನೋಡಿ ನೋಡಿ ಸಂತೋಷ ಪಡಬೇಕಷ್ಟೆ!

ನಿಜಕ್ಕೂ ಚುನಾವಣಾ ಆಯೋಗಕ್ಕೆ ಸಂವಿಧಾನದಲ್ಲಿ ಅಧಿಕಾರ ಇರುವುದಾದರೆ ಯಾವ ಅಭ್ಯರ್ಥಿಗೆ ಸೇರಿದ ಹಣ ಯಾವ ಪಕ್ಷದ ವ್ಯಕ್ತಿಗೆ ಸೇರಿದ ಹಣ ಎಂಬ ಮಾಹಿತಿಯನ್ನು ನೀಡುವುದರ ಜೊತೆಗೆ ಇವರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿ, ಚುನಾವಣೆಯ ಫಲಿತಾಂಶವನ್ನು ತಡೆಹಿಡಿಯಬೇಕು. ಚುನಾವಣೆಯಲ್ಲಿನ ಅಕ್ರಮಗಳನ್ನು ತನಿಖೆ ಮಾಡುವ ಸಲುವಾಗಿ ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಒಂದು ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಬೇಕು. ಎಲ್ಲ ಪ್ರಕರಣಗಳನ್ನು ಅಲ್ಲಿಗೆ ಒಪ್ಪಿಸಿ ಅಲ್ಲಿನ ತೀರ್ಮಾನದ ಆಧಾರದ ಮೇಲೆ ಚುನಾವಣೆಯ ಫಲಿತಾಂಶವನ್ನು ನಿಗದಿಪಡಿಸಬೇಕು. ಒಂದು ವೇಳೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ನೇರವಾಗಿ ಹಣ ಹಂಚಿಕೆ ಅಥವಾ ಅಕ್ರಮ ಹಣದ ಸಾಗಾಣಿಕೆಯಲ್ಲಿ ಪಾಲುದಾರರಾಗಿದ್ದರೆ, ಅವರ ಪಾತ್ರವಿದ್ದರೆ ಅಂತವರನ್ನ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಬೇಕು. ಇಂತಹ ಕಾನೂನುಗಳು ಬಾರದಿದ್ದರೆ ಇವೆಲ್ಲವೂ ಚಂದಮಾಮದ ಕಥೆಗಳಾಗುತ್ತವೆ.

ಅಭ್ಯರ್ಥಿಗಳ ಆಸ್ತಿ ಘೋಷಣೆ ಎಂಬ ಮತ್ತೊಂದು ನಾಟಕ:  ಅಭ್ಯರ್ಥಿಗಳು ಆಸ್ತಿಯನ್ನು ಘೋಷಿಸಿಕೊಳ್ಳುತ್ತಾರೆ. ಆದರೆ ಈ ಆಸ್ತಿ ಯಾವ ಮೂಲದಿಂದ ಬಂದಿದೆ ಎಂಬುದು ಯಾವ ತನಿಖೆಯು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯ ಆಸ್ತಿ ಘೋಷಣೆಯ ಪ್ರಮಾಣ ಪತ್ರವನ್ನು ಆದಾಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿ ಆದಾಯದ ಮೂಲವೂ ತನಿಖೆಯಾದರೆ ಈ ವಿಚಾರದಲ್ಲೂ ಒಂದಷ್ಟು ಸತ್ಯ ಹೊರಬರುತ್ತದೆ. ಇಲ್ಲದಿದ್ದರೆ ಅಭ್ಯರ್ಥಿಗಳ ಆದಾಯದ ಪ್ರಮಾಣ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಿದೆ ಎಂಬ ಪತ್ರಿಕೆಯ ವರದಿಯನ್ನು ನೋಡಿ ಮತದಾರರು ಗೊಣಗುತ್ತ ಸುಮ್ಮನಿರಬೇಕು. ಇಲ್ಲದಿದ್ದರೆ ನಮ್ಮ ಅಭ್ಯರ್ಥಿ ಇಷ್ಟೊಂದು ಹಣವನ್ನು ಗಳಿಸಿದ್ದಾರೆ ಎಂದು ಸಂಭ್ರಮಿಸಬೇಕ?

ಹಲ್ಲಿಲ್ಲದ ಹಾವಿನಂತಾಗಿರುವ ಚುನಾವಣಾ ಆಯೋಗದ ನೀತಿ ಕೇವಲ ಪತ್ರಿಕೆಯ ಹುಲಿಗಳಾಗಿ ಮಾತ್ರವೇ ಉಳಿದುಕೊಂಡಿದೆ. ಇವುಗಳಿಂದ ಕವಡೆ ಕಾಸಿನ ಭಯವು ಯಾವ ಅಭ್ಯರ್ಥಿಗಳಿಗೂ ಇಲ್ಲ. ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಇಂತಹ ಕಾನೂನುಗಳಿಂದ ಚುನಾವಣಾ ವ್ಯವಸ್ಥೆ ಸುಧಾರಣೆ ಆಗುತ್ತದೆ ಎಂಬ ಯಾವ ನಂಬಿಕೆಯು ಯಾವ ಮತದಾರರಿಗೂ ಇಲ್ಲ.

ಪತ್ರಿಕೆ ಅವರಿಗೆ ಸುದ್ದಿ ಬೇಕು. ಪತ್ರಿಕೆಯಲ್ಲಿ ಬಂದ ಸುದ್ದಿ ಜನರು ಓದಬೇಕು. ಮಾಧ್ಯಮದವರಿಗೆ ಬ್ರೇಕಿಂಗ್ ನ್ಯೂಸ್ ಗಳಾಗಬೇಕು ಚುನಾವಣಾ ಸಿಬ್ಬಂದಿಗೆ ಒಂದಷ್ಟು ದೂರುಗಳು ದಾಖಲಾದ ಸುದ್ದಿ ಆಗಬೇಕು ಇಷ್ಟೇ ಇವುಗಳ ಅಂತಿಮವಾದಂತಹ ಪರಿಣಾಮಗಳು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply