ವಾಟರ್ ಬೆಂಗಳೂರಾಗಿ ಪರಿಣಮಿಸಿದ ಸಿಲಿಕಾನ್ ಸಿಟಿ

11 months ago

ಬೆಂಗಳೂರು: ಕಳೆದ ಗುರುವಾರವಷ್ಟೇ ಗ್ರೇಟರ್ ಬೆಂಗಳೂರು ಆಗಿ ಪರಿವರ್ತನೆಯಾದ ಮಹಾನಗರ ಬೆಂಗಳೂರು ಎರಡು ದಿನಗಳಿಂದ ವಾಟರ್ ಬೆಂಗಳೂರಾಗಿ ಪರಿಣಮಿಸಿದೆ.

ಶನಿವಾರ, ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ರಸ್ತೆಗಳು ಜಲಾವೃತವಾಗಿವೆ. ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಿರುಗಾಳಿ ಸಹಿತ ಭಾರಿ ಮಳೆಗೆ ಅಲ್ಲಲ್ಲಿ ಮರಗಳು ಮುರಿದು ಬಿದ್ದಿರುವುದರಿಂದ ಸೋಮವಾರ ರಸ್ತೆ ಸಂಚಾರಕ್ಕೆ ತೀವ್ರ ತೊಡಕಾಗಿದೆ. ಮಹಾನಗರ ಪಾಲಿಕೆ,ಜಲ ಮಂಡಳಿ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಸತತ ಪ್ರಯತ್ನ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 103 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಕಳೆದ ಮೂರು ದಿನಗಳಿಂದ ಬೆಂಗಳೂರಿನಿಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆ ಸಂದರ್ಭದಲ್ಲಿ ನಗರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗುವುದು ಸಾಮಾನ್ಯ. ಬಿಬಿಎಂಪಿ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಮಹದೇವಪುರದ  ಚನ್ನಸಂದ್ರದಲ್ಲಿ ನಡೆದಿದೆ.

ಶಶಿಕಲಾ (35) ಮೃತ ಮಹಿಳೆ. ವೈಟ್ ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋದಾಗ ದುರ್ಘಟನೆ ನಡೆದಿದೆ. ಕೆಲಸದ ಸ್ಥಳದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಶಶಿಕಲಾ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಮಳೆಗೆ ಗೋಡೆ ನೆನೆದಿದ್ದರಿಂದ ಕುಸಿದು ಶಶಿಕಲಾ ಮೇಲೆ ಬಿದ್ದಿದೆ. ಘಟನೆಯ ಪರಿಣಾಮ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೈಟ್‌ಫೀಲ್ಡ್ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಯಾದಗಿರಿಯ ಶಹಾಪುರ ಮೂಲದ ಶಶಿಕಲಾ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮೃತ ಶಶಿಕಲಾಗೆ ಇಬ್ಬರು ಸಣ್ಣ ಮಕ್ಕಳಿದ್ದು, ಗಂಡ ಕೂಡ ಕೂಲಿ ಕೆಲಸ ಮಾಡುತ್ತಿದ್ದರು.

ಈ ನಡುವೆ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೊಸಪೇಟೆಗೆ ತೆರಳಿರುವ ಡಿ ಕೆ ಶಿವಕುಮಾರ್ ದಿಡೀರ್ ಬೆಂಗಳೂರಿಗೆ ದೌಡಾಯಿಸಿ ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಟ್ಟೆಬರೆ ಸಹಿತ ಸಮಾವೇಶಕ್ಕೆ ಬಂದಿದ್ದೆ. ಆದರೆ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಬಿರುಸಿನ ಮಳೆ ಸುರಿದು ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಅಂತಹ ಕೆಲವು ಸ್ಥಳಗಳನ್ನು ನಾನು ಮತ್ತು ಮುಖ್ಯಮಂತ್ರಿ ಅವರು ಜತೆಯಾಗಿ ವೀಕ್ಷಿಸಲಿದ್ದೇವೆ ಎಂದರು.

ಬೆಂಗಳೂರಿನ ಮಳೆನೀರು ಹರಿಯುವ ಕಾಲುವೆಗಳನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ವಿಶ್ವಬ್ಯಾಂಕ್‌, ಇತರ ಹಣಕಾಸು ಮೂಲಗಳಿಂದ ಸಾಲ ಪಡದು 2 ಸಾವಿರ ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿತ ಮಳೆನೀರು ಕಾಲುವೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಸಾಲ ಹೊಂದಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ ಎಂದರು.

ಮಳೆ ಬರಬೇಕು, ಅದರಿಂದ ರೈತರು ಬೆಳೆ ಬೆಳೆಯುತ್ತಾರೆ. ಬೆಂಗಳೂರಿನಲ್ಲಿ ಕೆಲವು ತಗ್ಗು ಪ್ರದೇಶಗಳಲ್ಲಿ ಅಧಿಕ ಮಳೆ ಸುರಿದಾಗ ಇಂತಹ ಸಮಸ್ಯೆ ಎದುರಾಗುವುದು ಸಹಜ, ಆದರೆ ನಿನ್ನೆಯ ಮಳೆಯಿಂದ ಯಾವುದೇ ಜೀವಹಾನಿ ಆಗಿಲ್ಲ. ಮಳೆ ಮುನ್ಸೂಚನೆ ಇದ್ದ ಕಾರಣ ಅಧಿಕಾರಿಗಳು ಮೊದಲೇ ಎಚ್ಚರಿಕೆ ವಹಿಸಿದ್ದರು ಎಂದರು.

Leave a Reply