ಎಂಥಾ ಗೊತ್ತುಂಟ ಮಾರ್ರೆ…. ಮೊನ್ನೆ ನೀತಿ ಆಯೋಗದ ಚೇರ್ಮನ್ರು ಹೇಳಿದ್ರು ನಮ್ಮ ಭಾರತ ಈಗ ಆರ್ಥಿಕತೆಯಲ್ಲಿ ಜಪಾನನ್ನೂ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ ಅಂತ. ಶ್ಯಾನೆ ಖುಷಿಯ ಇಚಾರ ಅಲ್ಲುವ್ರಾ.. ಬಿಯಿಂಗ್ ಎ ಪ್ರೌಡ್ಫುಲ್ ಇಂಡಿಯನ್ನು, ಇಂಡಿಯಾವು ಥೋ.. ಥೋ… ಭಾರತವು (ಇಂಡಿಯಾ ಅಂದ್ರೆ ಆ ವಿರೋಧಿ ಕಾಂಗಿಗಳ ಕೂಟ ಅಲ್ಲವ್ರಾ… ಮರೆತೇ ಬಿಟ್ಟಿದ್ದೆ!) ನಮ್ಮ ನೆಲದ ಕಾಲುಭಾಗದಲ್ಲಿ ಅರ್ಧದಷ್ಟಿರುವ ಜಪಾನನ್ನು ಹಿಂದಿಕ್ಕಿದೆ ಅನ್ನೋದು ಗರ್ವದ ಸಂಗ್ತಿ ಅಲ್ಲವಾ!! ವ್ಹೇಯ್ಟ್ ಫ್ರೆಂಡ್ಸ್…. ಜಾಸ್ತಿ ಖುಷಿ ಪಡೋಕ್ಕೆ ಹೋಗ್ಬೇಡಿ. ಇಂಡಿಯಾ ಅಂದ್ರೆ, ಥೋ…ಥೋ…ಥೋ…. ಭಾರತ ಅಂದ್ರೆ ನಾವು-ನೀವು ಅಂದ್ಕೊಂಡ್ರಾ? ಇಲ್ಲೇ ಇರೋದು ಗುಟ್ಟು. ಹಾಗೆ ಸಿಕ್ಕಾಪಟ್ಟೆ ಅಭಿವೃದ್ಧಿಯಾಗಿರೋದು ನಮ್ಮನಿಮ್ಮ ಭಾರತವಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ನಮ್ಮನ್ನು ಒಳಗೊಂಡ ಭಾರತವಿನ್ನೂ ಒಂದು ರೈಲು ಹತ್ತುವುದಕ್ಕೂ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣಬಿಡುವ ದುರಂತದಿಂದ ದೂರವಾಗಿಲ್ಲ; ಆಕ್ಸಿಜನ್ನಿಗೆ ಬಿಲ್ ಕಟ್ಟಲಾಗದೆ ಹತ್ತಾರು ಕಂದಮ್ಮಗಳು ಐಸಿಯುನಲ್ಲಿ ಅಸುನೀಗುವ ದುರ್ಭರತೆಯಿಂದ ದೂರವಾಗಿಲ್ಲ; ಎಂಬತ್ತು ಕೋಟಿ ಜನ, ಉಚಿತ ಅಕ್ಕಿಯನ್ನು ಅವಲಂಬಿಸುವ ಸಾಮಾಜಿಕ ನಿಶ್ಯಕ್ತಿಯಿಂದ ದೂರವಾಗಿಲ್ಲ; ಆಂಬ್ಯುಲೆನ್ಸಿಗೆ ಹಣಕಟ್ಟಲಾಗದೆ ಹೆಂಡತಿಯ ಶವವನ್ನು ಸೈಕಲ್ಲಿಗೆ ಕಟ್ಟಿಕೊಂಡು ಹಲವು ಕಿಲೋಮೀಟರು ಸಾಗಬೇಕಾದ ಗಂಡನ ಅಸಹಾಯಕತೆಯಿಂದ ದೂರವಾಗಿಲ್ಲ; ಮಕ್ಕಳ ಹಸಿವು ನೋಡಲಾಗದೆ, ತನ್ನ ತಲೆಗೂದಲನ್ನೇ ಬೋಳಿಸಿ ಮಾರಾಟ ಮಾಡುವ ತಾಯಂದಿರ ಕಣ್ಣೀರಿನಿಂದ ದೂರವಾಗಿಲ್ಲ; ಅನ್ನನೀಡುವ ರೈತರು ಸಾಲದ ಬಾಧೆಗೆ ಹೆದರಿ ನೇಣಿಗೆ ಕೊರಳೊಡ್ಡುತ್ತಿರುವ ಕರಾಳತೆಯಿಂದ ದೂರವಾಗಿಲ್ಲ; ಸೂರಿಲ್ಲದೆ, ಫುಟ್ಪಾತುಗಳ ಮೇಲೆ ಮಲಗಿ ಉಳ್ಳವರ ದುಬಾರಿ ಕಾರುಗಳ ಚಕ್ರಕ್ಕೋ, ಕಸದ ಲಾರಿಗೋ ಸಿಕ್ಕಿ ಸಾಯುವವರ ಗೋಳಿನಿಂದ ದೂರವಾಗಿಲ್ಲ…
ಅಬ್ಬಾ!! ಹಾಗಾದ್ರೆ ಚೇರ್ಮನ್ರು ಹೇಳಿದ ಆ ಭಾರತ ಯಾವುದು?
ಅದು ನಾವು-ನೀವಿರುವ ಭಾರತವಲ್ಲ; ಅದಾನಿ-ಅಂಬಾನಿಗಳಿರುವ ಭಾರತ. ಆ ಭಾರತ ಈ ಭಾರತದೊಳಗೇ ಇದೆ, ಆದರೆ ಈ ನಮ್ಮ ಭಾರತದಿಂದ ಆ ಭಾರತ ಬಹಳ ಎತ್ತರದಲ್ಲಿದೆ. ಎಷ್ಟು ಎತ್ತರ? ಎನ್ನುವಿರಾ…. ವರದಕ್ಷಿಣೆಯ ಪೀಡೆಯಿಂದಾಗಿ ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡಲಾಗದೆ, ಅವರಿಗೆ ವಿಷವಿಟ್ಟು ತಾವೂ ನೇಣು ಹಾಕಿಕೊಳ್ಳುವ ಹೆತ್ತವರನ್ನು ಅಣಕಿಸುವಂತೆ ವರ್ಷಾನುಗಟ್ಟಲೇ ವಿಜೃಂಭಣೆಯ ಒಡ್ಡೋಲಗದಲ್ಲಿ ನಡೆಯುವ ದುಬಾರಿ ಮದುವೆಯಷ್ಟು ಎತ್ತರ!!!
ಚೇರ್ಮನ್ ಸಾಹೇಬರು, ಹಾಗೆ ಹೇಳಿದ ಮಾರನೇ ದಿನವೇ, ಅದೆಲ್ಲ ಸುಳ್ಳು; ಭಾರತವಿನ್ನೂ ಜಪಾನನ್ನು ಹಿಂದಿಕ್ಕಿಲ್ಲ; ಅದಕ್ಕಿನ್ನು ಸಮಯವಿದೆ ಅನ್ನೋ ಸುದ್ದಿ ಬಂತು. ಎರಡು ಇಂಡಿಯಾಗಳ ನಡುವೆ ಬಾಯ್ತೆರೆದು ಬಿದ್ದುಕೊಂಡಿರುವ ನೀಳ ಕಂದಕಕ್ಕೆ ಪರದೆ ಸುತ್ತಿ ಮರೆಮಾಡುವ ವ್ಯರ್ಥ ಯತ್ನದಂತಿತ್ತು ಆ ಕಸರತ್ತು. ಹೀಗೇ ಸಾಗಿದರೆ, ಡಿಸೆಂಬರ್ ಹೊತ್ತಿಗೆ ಹಿಂದಿಕ್ಕುವ ಈ ಸುದ್ದಿ ನಿಜವಾಗಬಹುದಂತೆ. ಆಗಲೂ ನೆನಪಿಡಿ, ಅದು ಅದಾನಿ-ಅಂಬಾನಿಗಳ ಭಾರತವೇ ಹೊರತು, ನಮ್ಮ-ನಿಮ್ಮ ಭಾರತವಲ್ಲ!!
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




