ಯಾದಗಿರಿ: ರಂಗಬಳಪ ವೇದಿಕೆ ವತಿಯಿಂದ ಎಸ್.ಎಸ್.ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾವ್ಯ ವಿಸ್ಮಯ ಕಾರ್ಯಕ್ರಮವನ್ನು ಗಿರಿನಾಡಿನ ಬಯಲಾಟದ ಕಲಾವಿದ ವೀರಭದ್ರಪ್ಪ ಕೋಟಗೇರಾ ಅವರು ತಬಲಾ ಬಾರಿಸುವುದರ ಮೂಲಕ ಉದ್ಘಾಟಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಾನು ಹಳ್ಳಿಗಳಿಗೆ ಹೋಗಿ ಬಯಲಾಟವನ್ನು ಆಡಿಸುತ್ತಿದ್ದೇನೆ. ಜನರು ಬಹಳ ಆಸಕ್ತಿಯಿಂದ ಬಯಲಾಟವನ್ನು ಕಲಿಯುತ್ತಾರೆ. ಅಕ್ಷರಸ್ಥರು ಇದರಿಂದ ವಿಮುಖರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಬಯಲಾಟದಲ್ಲೂ ಕಾವ್ಯ, ನೃತ್ಯ ಎಲ್ಲ ಸೊಗಸಾಗಿ ಮೂಡಿಬರುತ್ತದೆ. ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಪೋಷಿಸಬೇಕಾದ ಜವಾಬ್ದಾರಿ ನಮ್ಮ ಮುಂದಿದೆ. ಅದನ್ನು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವಲ್ಲಿ ಸೋಲುತ್ತಿದ್ದೇವೆಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿರಂಜನಪ್ರಭ ಪತ್ರಿಕೆ ಸಂಪಾದಕ ಶಂಕ್ರಪ್ಪ ಅರುಣಿ, ಸಾಹಿತ್ಯ, ಸಂಸ್ಕೃತಿ ನಮ್ಮ ಮನಸ್ಸನ್ನು, ಬದುಕಿನ ಉತ್ಸಾಹವನ್ನು ಹೆಚ್ಚಿಸುವ ಸಾಧನಗಳಾಗಿದ್ದು, ಸಮಾಜಮುಖಿಯಾಗಿ ಬದುಕಲು ಪ್ರೇರಣೆಯನ್ನು ನೀಡುತ್ತವೆ ಎಂದರು.
ಸಾಂಸ್ಕೃತಿ ಚಟುವಟಿಕೆಗಳು ಗಿರಿನಾಡಿನಲ್ಲಿ ಇನ್ನು ಹೆಚ್ಚುಹೆಚ್ಚು ನಡೆಯಬೇಕೆಂಬ ಒತ್ತಾಸೆ, ಅಭಿಲಾಷೆ ನಮ್ಮದೆಲ್ಲರದು ಆಗಬೇಕಾಗಿದೆ. ರಂಗ ಚಟುವಟಿಕೆ ನಿರಂತರ ನಡೆಯುವಂತಾಗಲಿ ಎಂದರು.
‘ಕಾವ್ಯ ಪ್ರಕ್ರಿಯೆ ಸಾಧ್ಯತೆಗಳ ‘ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಅನ್ನಪೂರ್ಣ ಬಂಡಾರಿ, ಓದದೆ ಕಾವ್ಯ ರಚಿಸುವವರ ಸಂಖ್ಯೆ ಹೆಚ್ಚಾಗಿದೆ. ಅಶ್ಲೀಲ ಕಾವ್ಯ ನಮ್ಮನ್ನು ಆವರಿಸಿ ಕೊಳ್ಳುತ್ತಿರುವುದು ದುರಂತ. ಹೀಗಾಗುವುದಕ್ಕೆ ಮೂಲ ಕಾರಣ ನಾವು ಓದುವುದಕ್ಕೆ ಹಿಂದೇಟು ಹಾಕುತ್ತಿದ್ದೇವೆ. ಹಾಗಾಗಿ ಕಾವ್ಯ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದೆ ಎಂದರು
ಇದನ್ನು ತಡೆಯಬೇಕಾದರೆ ಹೆಚ್ಚಿನ ಓದಿನ ಅವಶ್ಯಕತೆ ನಮಗಾಗಬೇಕಿದೆ. ಹೊಸ ಕಾವ್ಯ ಮಾರ್ಗಕ್ಕೆ ಮಾರ್ಗದರ್ಶನದ ಅವಶ್ಯಕತೆಯೂ ತುಂಬಾ ಇದೆ. ಕಾವ್ಯಕ್ಕೆ ಗೇಯತೆ ಬಹಳ ಮುಖ್ಯ ಎಂದರು.
ಪ್ರತಿಯೊಂದು ಅಂಶದಲ್ಲೂ ಕಾವ್ಯವನ್ನು ಹುಡುಕಾಡುವ ಮನಸ್ಸಿರಬೇಕು. ಆಗ ಕಾವ್ಯವು ತನ್ನ ಪ್ರಕ್ರಿಯೆಯನ್ನು ಶುರು ಮಾಡುತ್ತದೆ. ಭಾಷಾ ಕೌಶಲದ ಜೊತೆಗೆ ಸೃಜನಶೀಲತೆ ಕೆಲಸ ಮಾಡಿದಾಗ ಕಾವ್ಯ ನಿಲ್ಲುವುದು ಎಂದರು.
ಗಿರಿನಾಡಿನ ಆಧುನಿಕ ವಚನಕಾರ ಸಾಯಪ್ಪ ಬಿ ಮುನಿಯವರು ಗುರು ಶಿಷ್ಯರ ಆಧ್ಯಾತ್ಮದ ಸಂಬಂಧ ಕುರಿತಾಗಿ ಮಾತನಾಡಿದರು. ಶರಣಾದಾಗ ಮಾತ್ರ ಶಿಷ್ಯನಾಗಲು ಸಾಧ್ಯ ಅರಿವಿನ ದಾರಿ ತೋರುವುದು ವಿನಯದಿಂದ ಹೊರತು ಅಹಂಕಾರದಿಂದಲ್ಲ ಎಂದರು.
ರಂಗ ಬಳಪದ ನಿರ್ದೇಶ ಡಾ.ರಾಜೇಂದ್ರ ಕುಮಾರ್ ಮುದ್ನಾಳ್ ಪ್ರಾಸ್ತಾವಿಕವಾಗಿ ಮಾತಾಡಿ, ನಮ್ಮ ರಂಗಬಳಪವು ಗಿರಿನಾಡಿನಲ್ಲಿರುವ ಜನಪದ ಕಲಾವಿದರನ್ನು ಗುರುತಿಸುವುದು, ಪ್ರತಿಭಾನ್ವಿತ, ಹೊಸ ಕವಿಗಳಿಗೆ ಲೇಖಕರಿಗೆ ವೇದಿಕೆ ಕಲ್ಪಿಸುವುದು, ಕಾವ್ಯ, ನಾಟಕ, ಕಾದಂಬರಿ ಅಂತಹ ಕಮ್ಮಟಗಳನ್ನು ಮುಂದಿನ ದಿನಮಾನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಸಾಧ್ಯವಾದರೆ ಮಕ್ಕಳ ರಂಗ ಶಿಬಿರವನ್ನು ಆಯೋಜಿಸುವ ವ್ಯವಸ್ಥೆ ಮಾಡಲಾಗುವುದು. ಮಕ್ಕಳು, ಯುವಕರು ಸೃಜನಶೀಲರಾಗಿರಲು ವೇದಿಕೆಯನ್ನು ಕಲ್ಪಿಸುವ ಆಶಾ ಕಿರಣದೊಂದಿಗೆ ವೇದಿಕೆ ಕೆಲಸ ಮಾಡುವ ಉದ್ದೇಶ ಹೊಂದಿದೆ ಎಂದರು.
ಕವಿತೆಗಳನ್ನು ವಾಚಿಸಿದ 21 ಜನ ಕವಿಗಳಿಗೆ ಸಾಯಪ್ಪ ಬಿ ಮುನಿಯವರು ರಚಿಸಿದ ‘ಪ್ರಭು ನರಸೇಶ್ವರ ವಚನಗಳು’ ಕೃತಿಯನ್ನು ಉಡುಗೊರೆಯಾಗಿ ನೀಡಲಾಯಿತು. ಕವಿತೆಗಳು ಅಮ್ಮ, ಅಪಘಾತ, ಶಾಂತಿ, ಸಹನೆ, ಸಂಸಾರ, ಧರ್ಮ, ಅಹಿಂಸೆ, ಗೆಳೆತನ, ಅಪಘಾತ, ಪ್ರೀತಿ, ತ್ಯಾಗ, ರಾಷ್ಟ್ರ ನಾಯಕರ ಬಗ್ಗೆ ವೈವಿಧ್ಯಮಯವಾದ ವಸ್ತು ವಿಷಯವನ್ನು ಒಳಗೊಂಡು ಸಭಿಕರನ್ನು ವಿವೇಚಿಸುವಂತೆ ಮಾಡಿದವು ಎಂದು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಮಚ್ಚೇಂದ್ರ ಅಣಕಲ್ ಅವರು ಮೆಚ್ಚುಗೆ ಸೂಚಿಸಿದರು.
ಬಹಳ ಕವಿಗಳು ಮೊದಲ ಬಾರಿಗೆ ಕವಿತೆ ಓದುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ರಂಗ ಬಳಪದ ಗೆಳೆಯರಾದ ಸಂತೋಷ್ ಕುಮಾರ್ ಶರಣಪ್ಪ, ಸಹದೇವ, ಶಿವಕುಮಾರ್ ಪೊರ್ಲ, ಸೈಯದ್ ರಫಿ, ಗುರು ಸಿದ್ದಯ್ಯ, ಹುಸೇನಪ್ಪ ಇದ್ದರು.ಶಿವಕುಮಾರ್ ಜುಲ್ಫಿ ನಿರೂಪಿಸಿದರು. ಮಲ್ಲಿಕಾರ್ಜುನ್ ರಾಂಪುರ ವಂದಿಸಿದರು. ಮಲ್ಲಿಕಾರ್ಜುನ್ ಎಸ್. ಕೆ ಸ್ವಾಗತಿಸಿದರು. ಸಾಬಣ್ಣ ಹತ್ತಿಕುಣಿ ಕಲಾ ಬಳಗ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.










