ಎನ್.ಎಸ್. ಚಾಂದ್ ಪಾಷ, ಡಾ. ಪಿ.ನಂದಕುಮಾರ್ ಅವರಿಗೆ ಮುಳ್ಳೂರು ನಾಗರಾಜ ಪ್ರಶಸ್ತಿ

1 year ago

ಚಾಮರಾಜನಗರ: ಚಾಮರಾಜನಗರದ  ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆ ವತಿಯಿಂದ ನೀಡಲಾಗುವ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ 13 ಮತ್ತು 14ನೇ ವರ್ಷಗಳ ಕಾವ್ಯ ಪ್ರಶಸ್ತಿಗೆ ಕ್ರಮವಾಗಿ ಕಲಬುರಗಿ ಜಿಲ್ಲೆಯ ಎನ್.ಎಸ್. ಚಾಂದ್ ಪಾಷ [ಕವಿಚಂದ್ರ] ಅವರ ‘ಒದ್ದೆಗಣ್ಣಿನ ದೀಪ’ ಹಾಗೂ ಯಾದಗಿರಿ ಜಿಲ್ಲೆಯ ಡಾ. ಪಿ.ನಂದಕುಮಾರ್ ಅವರ ‘ಹಂಗಿನ ಕಿರೀಟಕ್ಕೆ ಜೋತು ಬಿದ್ದ ನಾಲಿಗೆ’ ಕವನ ಸಂಕಲನಗಳು ಆಯ್ಕೆಯಾಗಿವೆ.

ಆಯಾ ವರ್ಷ ಪ್ರಕಟವಾಗುವ ಅತ್ಯುತ್ತಮ ಕವನ ಸಂಕಲನವೊಂದಕ್ಕೆ ದಿವಂಗತ ಸಾಹಿತಿ ಮುಳ್ಳೂರು ನಾಗರಾಜ ಅವರ ಹೆಸರಿನಲ್ಲಿ ಪ್ರತಿವರ್ಷ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ನೀಡಲಾಗುತ್ತದೆ. ಅದರಂತೆ, ಈ ಬಾರಿ  2023 ಮತ್ತು 2024ನೇ ವರ್ಷಗಳ ಪ್ರಶಸ್ತಿಯನ್ನು ಒಟ್ಟಿಗೆ ಪ್ರದಾನ ಮಾಡಲಾಗುತ್ತಿದೆ.

ಪ್ರಶಸ್ತಿಯು ತಲಾ 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ. ರಾಮ ಮನೋಹರ ಲೋಹಿಯಾ ಟ್ರಸ್ಟ್ ಹಾಗೂ ನೆಲೆ ಹಿನ್ನೆಲೆ ಸಂಸ್ಥೆಯ ಸಹಯೋಗದಲ್ಲಿ ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಮೇ 10ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಆಯ್ಕೆಯಾಗಿರುವ ಕವನ ಸಂಕಲನಗಳ ಇಬ್ಬರೂ ಕವಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ತಿಳಿಸಿದ್ದಾರೆ.

Leave a Reply