ಮಾರ್ಚ್ 5ಕ್ಕೆ ರಾಜ್ಯ ಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮ
ಚಾಮರಾಜನಗರ: ರಂಗವಾಹಿನಿ, ರಾಮಮನೋಹರ ಲೋಹಿಯ ಟ್ರಸ್ಟ್, ನೆಲೆ ಹಿನ್ನೆಲೆ, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಸಹಯೋಗದಲ್ಲಿ ಹನ್ನೊಂದನೇ ವರ್ಷದ ರಾಜ್ಯಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೈಸೂರು ವಿವಿ ಮಾನಸ ಗಂಗೋತ್ರಿಯ ಇ.ಎಂ.ಆರ್.ಸಿ ಸಭಾಂಗಣದಲ್ಲಿ ಮಾರ್ಚ್ 5 ಭಾನುವಾರದಂದು ಸಂಜೆ 4.00 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಆರ್. ರವಿ ಉದ್ಘಾಟಿಸಲಿದ್ದಾರೆ. ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿ ಪುರಸ್ಕೃತರನ್ನು ಕುರಿತು ಕವಿ ಹಾಗೂ ಸಾಹಿತಿ ಸುಬ್ಬು ಹೊಲೆಯಾರ್ ಮಾತನಾಡಲಿದ್ದಾರೆ. ರಾಜಶೇಖರ ಕೋಟಿ ಅವರನ್ನು ಕುರಿತು ಹಾಸನದ ವಾಣಿಜ್ಯ ತೆರಿಗೆ ಉಪ ಆಯುಕ್ತ ಮಂಜುನಾಥ ಸೋಸ್ಲೆ ಮಾತನಾಡಲಿದ್ದಾರೆ. ‘ಆಂದೋಲನ’ದಿನಪತ್ರಿಕೆ ಸಂಪಾದಕ ರವಿ ಕೋಟಿ, ನೆಲೆ ಹಿನ್ನೆಲೆ ಸಂಸ್ಥೆಯ ಕೆ.ಅರ್. ಗೋಪಾಲಕೃಷ್ಣ, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ಅಧ್ಯಕ್ಷ ನಟರಾಜ್ ಶಿವಣ್ಣ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಬಿ.ಆರ್. ಪರಂಜ್ಯೋತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಪ್ರದೇಶಾಭಿವೃದ್ಧಿ ಮಂಡಳಿ ಯೋಜನ ಇಲಾಖೆ ನಿರ್ದೇಶಕ ಡಿ. ಚಂದ್ರಶೇಖರಯ್ಯ ವಹಿಸಲಿದ್ದಾರೆ.
ಹಾಸನ ಜಿಲ್ಲೆಯ ಕವಯಿತ್ರಿ ನಂದಿನಿ ಹೆದ್ದುರ್ಗ ಮತ್ತು ತುಮಕೂರು ಜಿಲ್ಲೆಯ ಕವಿ ಬಿದಲೋಟಿ ರಂಗನಾಥ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ ಐದು ಸಾವಿರ ರೂಪಾಯಿ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಇದೇ ಸಂದರ್ಭದಲ್ಲಿ ಖ್ಯಾತ ಗಾಯಕರಾದ ದೇವಾನಂದ ವರಪ್ರಸಾದ್, ಸೋಮಹಳ್ಳಿ ನಾಗರಾಜ, ಕೃಷ್ಣಮೂರ್ತಿ, ಎಚ್.ಎಂ. ಶಿವಣ್ಣ ಎಂ. ಶಶಿಕುಮಾರ್ ಹೋರಾಟದ ಹಾಡುಗಳನ್ನು ಹಾಡಲಿದ್ದಾರೆ.




