ಕುಂಭಮೇಳ: ಒಂದು ಟಿಪ್ಪಣಿ

1 year ago

ನಮ್ಮ ಟಿ ನರಸೀಪುರ ಕ್ಷೇತ್ರದಲ್ಲಿ ಜರುಗುತ್ತಿರುವ  ಕುಂಭಮೇಳಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಮಿತ್ರರ ಜೊತೆಗೆ ಮಾತನಾಡುವ ವೇಳೆ ಬಸವಾದಿ ಶರಣರು, ಕುವೆಂಪು ಅಂತಹ ಮಹನೀಯರು ಹೇಳಿದ ಧಾರ್ಮಿಕತೆಯ ತಿಳುವಳಿಕೆಯ ಅನುಸಾರವಾಗಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೆ. ಬಸವಾದಿ ಶರಣರ ತಿಳುವಳಿಕೆ ಆದ ಕಾರಣ ಅದು ವೈಜ್ಞಾನಿಕ ಮತ್ತು ವೈಚಾರಿಕವಾಗಿ ಸರಿಯೂ ಕೂಡಾ. ಈ ಮಾತಿನ ಬಳಿಕ ನಿರೀಕ್ಷೆಯಂತೆಯೇ ನಮ್ಮ ಮನುವಾದಿ ಪಾಳಯವು ತಲೆ ಬುಡ ಇಲ್ಲದೇ, ಕನಿಷ್ಠ ಪಕ್ಷ ಟೀಕೆಯ ಭಾಷೆಯೂ ಗೊತ್ತಿಲ್ಲದ ರೀತಿಯಲ್ಲಿ ಮಾತಿನ ಪ್ರತಿಕ್ರಿಯಿಸಿತು.

ಇದಾದ ಬಳಿಕ ನನ್ನ ಮತಕ್ಷೇತ್ರವಾದ ಟಿ ನರಸೀಪುರ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಬಹಳ ಅಚ್ಚುಕಟ್ಟಾಗಿ ಮತ್ತು ಅಷ್ಟೇ ಸುರಕ್ಷಿತವಾಗಿ ಜಿಲ್ಲಾಡಳಿತದ ನೆರವಿನಿಂದ ಮೂರು ದಿನಗಳ ಕುಂಭಮೇಳವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು ಸಾವಿರಾರು ಜನರು ಇಲ್ಲಿ ಭಾಗವಹಿಸಿದ್ದಾರೆ.

ಕುಂಭಮೇಳ, ಪುಣ್ಯಸ್ನಾನ ಇತ್ಯಾದಿ ಸಂಗತಿಗಳ ವಿಷಯದಲ್ಲಿ ನನ್ನ ವಿಷಯಗಳು ಭಿನ್ನವಾಗಿ ಇರಬಹುದು. ಆದರೆ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ರಕ್ಷಣೆಯು ನಮ್ಮ ಹೊಣೆ ಆಗಿರುವ ಕಾರಣದಿಂದಾಗಿ ಕುಂಭಮೇಳವು ಲೋಪವಿಲ್ಲದೇ ಅಚ್ಚುಕಟ್ಟಾಗಿ ನೆರವೇರಿದೆ.

ಧಾರ್ಮಿಕ ಹಕ್ಕುಗಳಿಗೆ ವಿರೋಧ ವ್ಯಕ್ತಪಡಿಸುವುದು ನಮ್ಮ ಉದ್ದೇಶ ಖಂಡಿತಾ ಅಲ್ಲ. ಆದರೆ ನನ್ನ ಪ್ರಕಾರ ಧಾರ್ಮಿಕತೆಯು ಮೌಢ್ಯಗಳಿಂದ ಮುಕ್ತವಾಗಿ, ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಂಡ ಅರ್ಥಪೂರ್ಣ ಸಂಗತಿಯಾಗಿ ಆಚರಣೆ ಆಗಬೇಕು. ಅಂತಹ ಆಚರಣೆಗಳಿಗೆ ಅಂತಃಶಕ್ತಿ ಸಹಜವಾಗಿ ಹೆಚ್ಚಾಗಿರುತ್ತದೆ ಎಂಬ ನಂಬಿಕೆ ನನ್ನದು. ಕರೋನಾ ಸಂದರ್ಭದಲ್ಲಿ ಕುಂಭಮೇಳ ನಡೆಯಬೇಕಿತ್ತು. ಆಗ ನಡೆಯಲಿಲ್ಲ. ನಡೆಯಲಿಲ್ಲ ಎಂದ ಮಾತ್ರಕ್ಕೆ ಅದನ್ನು ಧರ್ಮ ವಿರೋಧಿ ನೀತಿ ಎನ್ನಲು ಸಾಧ್ಯವೇ? ಹೀಗಾಗಿ ಆಚರಣೆಗಳು ವೈಜ್ಞಾನಿಕ ಮತ್ತು ವೈಚಾರಿಕವಾಗಿ ಇದ್ದರೇನೇ ಉತ್ತಮ.

ಧರ್ಮದ ಆಚರಣೆ ವಿಷಯದಲ್ಲಿ ನನ್ನ ನಿಲುವು ಅಂದು, ಇಂದು ಮತ್ತು ಎಂದೂ ಇದೇ ಆಗಿದ್ದು ಸೈದ್ಧಾಂತಿಕ ವಿಷಯಗಳಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಮತ್ತೊಮ್ಮೆ ಗಟ್ಟಿಯಾಗಿ ಹೇಳುತ್ತೇನೆ.

– ಡಾ. ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply