ಸಭಾಧ್ಯಕ್ಷರ ಸಲಹೆಯಿಂದ ಸಿಟ್ಟಾದ ಜೆಡಿಎಸ್‌‍ ಶಾಸಕ ಶರಣುಗೌಡ ಕಂದಕೂರು

8 months ago

ಬೆಂಗಳೂರು: ಶಾಸನ ರಚನೆಯ ಕಲಾಪದಲ್ಲಿ ಅನಗತ್ಯವಾಗಿ ಚರ್ಚೆ ಮಾಡಬೇಡಿ, ಕಾಯ್ದೆಗೆ ಸೀಮಿತವಾಗಿ ಮಾತ್ರ ಪರ ವಿರೋಧ ಅಭಿಪ್ರಾಯ ತಿಳಿಸಿ ಎಂದು ಸಭಾಧ್ಯಕ್ಷರು ನೀಡಿದ ಸಲಹೆಯಿಂದ ಸಿಟ್ಟಾದ ಜೆಡಿಎಸ್‌‍ ಶಾಸಕ ಶರಣುಗೌಡ ಕಂದಕೂರು ಕಲಾಪದಿಂದ ಹೊರ ನಡೆಯಲು ಮುಂದಾದ ಪ್ರಸಂಗ ನಡೆಯಿತು.

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಮಂಡಿಸಿದ್ದ ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಶರಣಗೌಡ ಕಂದಕೂರು, ತಮ ಭಾಗದಲ್ಲಿನ ಜಾತ್ರೆಗಳಲ್ಲಿ ಸೇರುವ ಜನ ಹಾಗೂ ಅದರ ಪರಿಣಾಮಗಳ ಬಗ್ಗೆ ವಿವರಣೆ ನೀಡಿ, ಈ ಕಾಯ್ದೆ ಅಂತಹ ಕಾರ್ಯಕ್ರಮಗಳಿಗೆ ಯಾವ ರೀತಿ ಅಡಚಣೆ ಉಂಟುಮಾಡುತ್ತದೆ ಎಂದು ವಿವರಿಸುತ್ತಿದ್ದರು.

ಈ ಹಂತದಲ್ಲಿ ಸಭಾಧ್ಯಕ್ಷರು ಕಾಯ್ದೆಗೆ ಸೀಮಿತವಾಗಿ ಮಾತನಾಡಿ, ಭಾಷಣ ಮಾಡಬೇಡಿ. ಬೇರೆಯವರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ತಿಳಿ ಹೇಳಿದರು.

ಇದಕ್ಕೆ ಸಿಟ್ಟಾದ ಶರಣಗೌಡ ಕಂದಕೂರ್‌ ನನಗೆ ಮಾತನಾಡಲು ಪ್ರತಿ ಬಾರಿಯೂ ಅಡ್ಡಿಪಡಿಸಲಾಗುತ್ತಿದೆ. ನನ್ನನ್ನೇ ಗುರಿ ಮಾಡಿ ಅಡಚಣೆ ಮಾಡುವಂತೆ ಕಂಡುಬರುತ್ತಿದೆ. ನಾನು ಮಾತನಾಡುವುದು ಬೇಡ ಎಂದಾದರೆ ಹೊರಹೋಗುತ್ತೇನೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು. ಮನೆಗೆ ಹೋಗುವುದಾದರೆ ಹೋಗಿ ಎಂದು ಸಭಾಧ್ಯಕ್ಷರು ಕೂಡ ಅಸಹನೆಯಿಂದಲೇ ಹೇಳಿದರು.

ಇದು ಕೆಲಕಾಲ ಕಾವೇರಿದ ಸನ್ನಿವೇಶ ಸೃಷ್ಟಿಸಿತ್ತು. ಜೆಡಿಎಸ್‌‍, ಬಿಜೆಪಿ, ಕಾಂಗ್ರೆಸ್‌‍ ಪಕ್ಷಗಳ ಕೆಲ ಶಾಸಕರು ಶರಣಗೌಡ ಕಂದಕೂರ್‌ ಅವರನ್ನು ಸಮಾಧಾನಪಡಿಸಿ ಕೂರಿಸುವ ಯತ್ನ ನಡೆಸಿದರು. ಅದಕ್ಕೆ ಒಪ್ಪದ ಶರಣಗೌಡ ನಾನು ಮಾತನಾಡಿದ್ದು ತಪ್ಪೇ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸಚಿವರ ಅಭಿಪ್ರಾಯ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್‌.ಕೆ.ಪಾಟೀಲ್‌‍, ನೀವು ಆರಂಭದಲ್ಲಿ ಮಾತನಾಡಿದ್ದು ಸರಿಯಿತ್ತು. ಅನಂತರ ನೀವು ಹೇಳಿದ ಮಾತುಗಳು ಸರಿ ಇಲ್ಲ ಎಂದು ಹೇಳಿದರಲ್ಲದೆ, ಮುಂದಿನ ದಿನಗಳಲ್ಲಿ ನೀವುಗಳು ಉತ್ತಮ ಸಂಸದೀಯ ಪಟುಗಳಾಗಬೇಕು. ಅದಕ್ಕಾಗಿ ಸಹನೆ ಸಂಯಮವನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಿ.ಸಿ. ಪಾಟೀಲ್‌, ಸಭಾಧ್ಯಕ್ಷರಿಗೂ ತಾಳ್ಮೆ ಬೇಕು.  ಹೊರ ಹೋಗುತ್ತೇನೆ ಎಂದು ಶಾಸಕರು ಹೇಳಿದಾಕ್ಷಣ ಹೊರ ಹೋಗುವುದಾದರೆ ಹೋಗಿ ಎನ್ನುವುದು, ಆ ಪೀಠದಿಂದ ಹೇಳುವ ಮಾತಲ್ಲ ಎಂದರು.

ಬಸನಗೌಡ ಪಾಟೀಲ ಯತ್ನಾಳ್‌, ಸಭಾಧ್ಯಕ್ಷರು ತಾಳ್ಮೆ ಕಳೆದುಕೊಳ್ಳಬಾರದು. ಕಡಿಮೆ ಮಾತನಾಡಬೇಕು. ಸದಸ್ಯರು ಮಾತನಾಡುವಾಗ ಬೇಗ ಮುಗಿಸಿ ಎಂದು ಒತ್ತಡ ಹಾಕಿದರೆ, ಹೇಳಬೇಕಾದ ಅಭಿಪ್ರಾಯಗಳೇ  ಮರೆತು ಹೋಗುತ್ತವೆ. ಸದನದಲ್ಲಿ ಕಾಯ್ದೆಗಳ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು. ಒಂದಿಷ್ಟು ಆ ಕಡೆ ಈ ಕಡೆ ಮಾತುಗಳು ವ್ಯತ್ಯಾಸವಾದರೂ ಅದಕ್ಕೆ ಸಹನೆ ಇರಲಿ ಎಂದರು.

ಬಿಜೆಪಿಯ ಸುರೇಶ್‌ ಗೌಡ, ಸಭಾಧ್ಯಕ್ಷರು ಪ್ರತಿಯೊಬ್ಬರಿಗೂ ಮಾತನಾಡುವಾಗ ನಿರ್ದಿಷ್ಟ ಸಮಯ ನಿಗದಿ ಮಾಡಿ. ಬೇಕಾದವರಿಗೆ ಗಂಟೆಗಟ್ಟಲೆ ಕೊಡುವುದು ಬೇಡದವರಿಗೆ ಸಮಯ ನೀಡದಿರುವುದು ಸರಿಯಲ್ಲ. ಸಂಸತ್ತಿನ ಮಾದರಿಯಲ್ಲಿ ನಿಗದಿತ ಸಮಯದಲ್ಲೇ ಎಲ್ಲರೂ ಮಾತು ಮುಗಿಸುವಂತಹ ನಿರ್ಬಂಧ ಹಾಕಿ ಎಂದು ಸಲಹೆ ನೀಡಿದರು.

ಮುಂದಿನ ಸರದಿಯಲ್ಲಿ ಚನ್ನಬಸಪ್ಪ ಅವರಿಗೆ ಮಾತನಾಡಲು ಸಭಾಧ್ಯಕ್ಷರು ಅನುಮತಿ ನೀಡಿದರು. ಆಗ ಬಿಜೆಪಿ, ಜೆಡಿಎಸ್‌‍ನ ಶಾಸಕರು ಶರಣಗೌಡ ಕಂದಕೂರ್‌ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು. ಅದರಂತೆ ಸಭಾಧ್ಯಕ್ಷರು ಅನುಮತಿ ನೀಡಿದರು. ಕಂದಕೂರು ಚುಟುಕಾಗಿ ತಮ ಅಭಿಪ್ರಾಯಗಳನ್ನು ಹೇಳಿ ಮುಗಿಸಿದರು.

Leave a Reply