ಬೆಂಗಳೂರು: ನನ್ನ ಆತ್ಮೀಯ ಸ್ನೇಹಿತನಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶೇಷಾದ್ರಿಪುರಂ ಕಾಲೇಜಿನಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಏರ್ಪಡಿಸಿದ್ದ ಡಾ. ಕೂಡ್ಲಿ ಗುರುರಾಜ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾನು ಖಾದ್ರಿ ಶಾಮಣ್ಣ ಅವರನ್ನು 1978ರಲ್ಲಿ ನೋಡಿದ್ದೆ. ಆಗ ತುರ್ತುಪರಿಸ್ಥಿತಿ ಮುಗಿದಿತ್ತು. ಇಡೀ ವಿಶ್ವದಲ್ಲಿ ವೈಎನ್ ಕೆ ಅವರ ಹೆಸರಿತ್ತು. ಕರ್ನಾಟಕದಲ್ಲಿ ಎಮರ್ಜೆನ್ಸಿ ವಿರುದ್ಧ ಸಿಡಿದೆದ್ದ ವ್ಯಕ್ತಿ ಖಾದ್ರಿ ಶಾಮಣ್ಣ ಅವರು ಎಂದರು.
ಪತ್ರಿಕೋದ್ಯಮ ಬಹಳ ಪ್ರಭಾವಶಾಲಿ ಉದ್ಯಮ, ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿ ಇರುವುದು ಎಷ್ಟು ಮುಖ್ಯವೋ ಜನ ಸಮುದಾಯದ ಪರ ಇರುವ ಕೆಲಸ ಮಾಡುವುದು ಅಷ್ಟೇ ಮುಖ್ಯ. ಅದನ್ನು ಪತ್ರಿಕೋದ್ಯಮ ಮಾಡುತ್ತದೆ ಎಂದರು.
ಖಾದ್ರಿ ಶಾಮಣ್ಣ ಅವರು ಬಹಳ ಪ್ರಭಾವಶಾಲಿ ಆಗಿದ್ದರು. ಅವರು ಬದುಕಿದ್ದಾಗ ಮುಂದೆ ಬರುವ ಸರ್ಕಾರಗಳು ಅವರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಿದ್ದರು ಎಂದರು.
ಪತ್ರಿಕೋದ್ಯಮ ಬಹಳ ಕ್ಲಿಷ್ಟವಾಗಿರುತ್ತದೆ. ಕೆಲವು ಸಾರಿ ಪರ ಮತ್ತು ವಿರೋಧ ಅಭಿಪ್ರಾಯಗಳು ಬಂದಾಗ ಸತ್ಯದ ಮೇಲೆ ನಿಲುವು ತೆಗೆದುಕೊಂಡಾಗ ಅದಕ್ಕೆ ಮಹತ್ವ ಬರುತ್ತದೆ. ಕೆಲವು ಸಾರಿ ತಾವು ತೆಗೆದುಕೊಂಡ ನಿಲುವಿನ ವಿರುದ್ಧ ತೆಗೆದುಕೊಳ್ಳುವ ಸಂದರ್ಭ ಬರಬಹುದು. ಆಗ ಸ್ಪಷ್ಟವಾಗಿ ಗಟ್ಟಿಯಾಗಿ ನಿಲುವು ತೆಗೆದುಕೊಳ್ಳಬೇಕು. ಖಾದ್ರಿ ಶಾಮಣ್ಣ ಅಂತಹ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿದ್ದರು. ಅಂತಹವರ ಗರಡಿಯಲ್ಲಿ ಕೂಡ್ಲಿ ಗುರುರಾಜ್ ಬೆಳೆದಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ಕನ್ನಡ ಪ್ರಭದಲ್ಲಿ ಇವರು ಇದ್ದಾಗ ಅವರ ಲೇಖನಗಳನ್ನು ಓದಿದ್ದೆ. 1998ರಲ್ಲಿ ನಾನು ಸ್ಥಳೀಯ ಸಂಸ್ಥೆಯಿಂದ ಚುನಾವಣೆಗೆ ನಿಂತಿದ್ದೆ. ನಮ್ಮ ಪಕ್ಷದಲ್ಲಿ ಬಂಡಾಯ ಅಭ್ಯರ್ಥಿ ನಿಂತಿದ್ದರು. ಆಗ ಎಲ್ಲ ಪತ್ರಿಕೆಯವರು 24 ದಿನ ನನ್ನ ವಿರುದ್ಧ ಬರೆದಿದ್ದರು. ಒಬ್ಬರು ಪತ್ರಕರ್ತೆ ಸನ್ ಆಸ್ ಸೆಟ್ ಅಂತ ಬರೆದಿದ್ದರು. ಆದರೆ, ನಾನು ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೆ ಎಂದರು.
ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧ. ರಾಜಕೀಯ ಸುದ್ದಿ ಇಲ್ಲದೆ ಇದ್ದರೆ ಪತ್ರಿಕೆ ಆಕರ್ಷಣೆ ಇರುವುದಿಲ್ಲ. ಅದೇ ರೀತಿ ರಾಜಕಾರಣಿಯ ಸುದ್ದಿಗಳು ಪತ್ರಿಕೆಯಲ್ಲಿ ಬರದಿದ್ದರೇ ಆ ರಾಜಕಾರಣಿಗೆ ಅಸ್ತಿತ್ವವೇ ಇಲ್ಲ ಎಂದರು.
ನನಗೆ ಮದನ ಮೋಹನ್ ಅವರು ಮಾರ್ಗದರ್ಶನ ಮಾಡಿದ್ದರು. ಅವರ ಮಾರ್ಗದರ್ಶನದಿಂದ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಚರ್ಚೆ ಮಾಡಿದ್ದೆ. ರಾಮಕೃಷ್ಣ ಹೆಗಡೆ ಅವರು ಮದನ ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದಾರಾ ಅಂತ ಕೇಳುತ್ತಿದ್ದರು. ಅವರ ಬಗ್ಗೆ ರಾಜಕಾರಣಿಗಳಿಗೆ ಭಯ ಇತ್ತು ಎಂದರು.
ರಾಜಕಾರಣಿಗಳನ್ನು ಹುರುದುಂಬಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ. ನಮ್ಮ ಸರ್ಕಾರ ಬದಲಾಗುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ನಾನು ದೆಹಲಿಯಲ್ಲಿ ಕೇಂದ್ರದಿಂದ ಏಳು ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿದ್ದೆ, ಅದನ್ನು ಉಮಾಪತಿಯವರು ಸರ್ಕಾರ ಬೀಳುವ ಸಂದರ್ಭದಲ್ಲಿಯೂ ಈ ಸಚಿವರು ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿದ್ದಾರೆ ಎಂದು ವಿಶ್ಲೇಷಣಾತ್ಮಕ ಲೇಖನ ಬರೆದಿದ್ದರು. ಒಳ್ಳೆಯ ಕೆಲಸ ಮಾಡಿದರೆ ಪತ್ರಿಕೆಯವರು ಗುರುತಿಸುತ್ತಾರೆ ಎಂದು ಅನಿಸಿತು ಎಂದರು.
ತುಂಗಭದ್ರ ಯೋಜನೆ ಕುರಿತು ವಿಜಯ ಕರ್ನಾಟಕ ಒಂದು ಲೇಖನ ಬರೆದಿತ್ತು. ಅದು ನನಗೆ ಸ್ಪೂರ್ತಿಯಾಯಿತು. ಅದರಿಂದ ತುಂಗಭದ್ರಾ ಕಾಲುವೆ ಯೋಜನೆ ಜಾರಿಗೊಳಿಸಲು ಅನುಕೂಲವಾಯಿತು. ಗುರುರಾಜ್ ಅವರು ಉತ್ತರ ಕರ್ನಾಟಕದ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಯೋಗ್ಯ ಪ್ರಶಸ್ತಿ ದೊರೆತಿದೆ. ಅವರಿಗೆ ಅಭಿನಂದನೆಗಳು. ಅವರು ನನ್ನಿಂದ ಪ್ರಶಸ್ತಿ ಸ್ವೀಕರಿಸುವ ಆಸೆ ವ್ಯಕ್ತಪಡಿಸಿರುವುದು ನನ್ನ ಮನದಲ್ಲಿ ಯಾವಾಗಲೂ ಉಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ. ಕೃಷ್ಣ, ಅಸ್ಸಾಂ ಕೇಂದ್ರೀಯ ವಿವಿ ನಿವೃತ್ತ ಸಮ ಕುಲಪತಿ ಪ್ರೊ. ಕೆ.ವಿ. ನಾಗರಾಜ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ, ಕೂಡ್ಲಿ ಗುರುರಾಜ್ ಹಾಗೂ ಖಾದ್ತಿ ಶಾಮಣ್ಣ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಎಚ್. ಆರ್. ಶ್ರೀಶ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.




