ಯಾರೂ ನಮ್ಮನ್ನು ಹೊರಗಿಟ್ಟು ನೋಡಲಿಲ್ಲ ಎಂದು ನನಗೆ ದಸಂಸ ಬಗ್ಗೆ  ಹೆಮ್ಮೆ

3 years ago

#proud #DSS #outsiders #hrswamy #dravida #koracha #language

ಕೊಯ್ಯಮತ್ತೂರಿನಿಂದ ಹಿರಿಯ ಗೆಳೆಯರಾದ ಸುಂದರ್ ರಾಜನ್ ಮತ್ತೆ ಮತ್ತೆ ಕರೆಮಾಡಿ ಭಾಷೆ ಬಗ್ಗೆ ಭಾಷಾತಜ್ಞರೊಂದಿಗೆ ಸಂವಾದಕ್ಕಾಗಿ ಕರೆಯುತ್ತಲೇ ಇದ್ದರು.

ಸಾವಿರಾರು ಲಿಪಿ ಇಲ್ಲದ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ನನ್ನ ಕೊರಚ (ಕುಡ್ರ್ ) ಭಾಷೆಯೂ ಒಂದು. ಹಟ್ಟಿಲೇ ಹುಟ್ಟಿ ಬೆಳೆದ ನನಗೆ ಅದು ಮಿದುಳಿನ ಕತ್ತಲ ಒಡಲಲ್ಲಿ ಅವಿತಿದೆ. ಅದು ಆಗಾಗ  ಜೀವತಾಳುತಿದ್ದದ್ದು ಅಪ್ಪನೊಟ್ಟಿಗೆ ಮಾತನಾಡುತಿದ್ದಾಗ ಮಾತ್ರ. ಅಪ್ಪನೊಟ್ಟಿಗೆ ಭಾಷೆಯು ಅಳಿದಮೇಲೆ  ದೂರವಾಣಿಯಲ್ಲಿ ಅಮ್ಮ, ಸಹೋದರರೊಂದಿಗೆ ಮಾತನಾಡುವಾಗ ನನ್ನ ಮಾತೃಭಾಷೆ ಅರ್ಧ ಜಾಗೃತ ಗೊಳ್ಳುತ್ತದೆ. ಅದಕ್ಕೆ ಪೂರ್ಣ ಜೀವ ಬರುವುದು ಮಾತ್ರ ಬೀದಿಯಲ್ಲಿ ಅಲೆಯುತ್ತಾ ಬಿಸಿಲು, ಮಳೆಯಲ್ಲಿ ಕೂದಲು, ಮೊರ, ಹಗ್ಗ ಮಾರುತ್ತಾ ಅಲೆಯುವ ನನ್ನ ಸಮುದಾಯದವರೊಂದಿಗೆ ಮಾತನಾಡುತ್ತಾ ನಿಂತಾಗ ಮಾತ್ರ.

ನಾನು ಹುಟ್ಟಿ ಉಸಿರಾಡಿದ ನೆಲದಲ್ಲಿ ಇದನ್ನು ಕುಡ್ರ್ ವಾತ ( ಕೊರಚ ಭಾಷೆ) ಎನ್ನುವರು. ಕೀಳರಿಮೆ, ಭಯದ ನೆರಳಲ್ಲಿ ಜೀವ ಕಳೆದುಕೊಂಡಿರುವ ಈ ಹೊತ್ತಿನಲ್ಲಿ ಈ ಭಾಷೆ ಬಗ್ಗೆ ಮಾತನಾಡಲು ಕರೆದಾಗ ಬರಲೊಲ್ಲೆ ಎನ್ನಲಾಗಲಿಲ್ಲ.

ಗಡಿಗಳನ್ನು ಮೀರಿ ತಮಿಳು, ತೆಲುಗು ಭಾಷೆಗಳನ್ನು ನಾನು ಅಪ್ಪಿಕೊಳ್ಳಲು ನನ್ನ ಭಾಷೆಯ ಒಡಲಲ್ಲಿ ಇರುವ ದ್ರಾವಿಡ ಪದಗಳೇ ಕಾರಣ ಇರಬಹುದು ಗೊತ್ತಿಲ್ಲ.

ನಾನು ಬೆಂಗಳೂರಲ್ಲಿ ರೈಲು ಏರುವಾಗ ನನಗೆ ಇನ್ನಿಲ್ಲದ ಸಂತಸ. ನನ್ನ ಸಮುದಾಯದ ಬದುಕಿನ ಜೀವಾಶ್ರಯವಾಗಿರುವ ಊರ ಬೀದಿಗಳ ಸ್ವಚ ಮಾಡಿಯೂ ತುಚ್ಛವಾಗಿ ಕಾಣಿಸಿಕೊಳ್ಳುವ, ಹಂದಿಯ ಚಿತ್ರವನ್ನು ಕೈಮೇಲೆ ಹಚ್ಚೆ ಹುಯ್ಯಿಸಿಕೊಂಡು, ತಾಯಿಯನ್ನು ಕಳೆದುಕೊಂಡ ಮರಿಯನ್ನು ಹಾಸಿಗೆಮೇಲೆ ಎದೆಗಪ್ಪಿ ಸಂತೈಸುವ ಚಲನಚಿತ್ರವೊಂದರ ಪೋಸ್ಟರ್ ಗಳನ್ನು ಮೈ ತುಂಬಾ ಮೆತ್ತಿಕೊಂಡು ಸಾಗುವ ರೈಲು ಡಬ್ಬಿಯಲ್ಲಿಯ ನನ್ನ ಪ್ರಯಾಣ ಮರೆಯಲಾರದ ನೆನಪು.

ಸಹಪ್ರಯಾಣಿಕಳನ್ನು  ಮಾತನಾಡಿಸುತ್ತಾ ಕನ್ನಡ ಬರುತ್ತಾ ಎಂದಾಗ ಅರ್ಥವಾಗುತ್ತದೆ. ನನ್ನ ಮನೆಯಲ್ಲಿ ಹಿರಿಯರು ಕನ್ನಡ ಮಾತನಾಡುತ್ತಾರೆ. ನಮ್ಮ ಪೂರ್ವಜರು ಕರ್ನಾಟಕದವರು ಚಿನ್ನದ ಕೆಲಸ, ಸಾಕಷ್ಟು ಜಮೀನಿದೆ ನಾನು ಕಂಪನಿಯಲ್ಲಿ ಕೆಲಸ ಮಾಡುವೆ ಎಂದಳು. ತಕ್ಷಣ ನೆನಪಾದದ್ದು ಬೆಂಗಳೂರು ಕಬ್ಬನ್ ಪಾರ್ಕ್ ನಲ್ಲಿ ಕಡ್ಲೆ ಕಾಯಿ ಮಾರುವ ತಮಿಳರ ವಿರುದ್ಧ ಕನ್ನಡ ಪಡೆ ಹೋರಾಡಿದ್ದು…

ಕೊಂಚ್ಚ್ ನೇರತ್ಲಿ ಈರೋಡ್ ವರ್ದು ಸಾರ್ ಎಂದಳು…

ಈರೋಡ್… ಅಚ್ಚ ಕನ್ನಡ ಮಾತನಾಡುತ್ತಿದ್ದ ಕನ್ನಡ ಬಲಿಜ ನಾಯುಡು ಸಮುದಾಯದ ‘ನಾಯ್ಕರ’ ವೆಂಕಟಪ್ಪ  ಇವರ ಕೀರ್ತಿ ಜನಪ್ರಸಿದ್ಧಿ. ಈ ನಗರ ಮಹಾರಾಜರುಗಳಿಂದ ಹಿಡಿದು ಸಾಮಾನ್ಯ ತಿರುಕನವರೆಗೆ ಅತಿಥಿ ಸತ್ಕಾರದಲ್ಲಿ ಮರೆಯಲಾರದ ಹೆಸರು ಪೆರಿಯಾರ್ ತಂದೆಯವರದ್ದು. ಅಂದಿನ ಈರೋಡ್ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕಾರಣರಾದವರು ಪೆರಿಯಾರ್. ಈರೋಡ್ ಗೆ ಪ್ಲೇಗ್ ರೋಗ ಕಾಣಿಸಿಕೊಂಡಾಗ ಶ್ರೀಮಂತರು ಪ್ರಾಣಭಯದಿಂದ ಮೊದಲೇ ಊರುಬಿಟ್ಟಿದ್ದರು. ರಾಮಸ್ವಾಮಿಯವರು ಬಹಳಷ್ಟು ಮಂದಿಯ ಸತ್ತ ಹೆಣಗಳನ್ನು ತಾವೇ ಹೆಗಲಮೇಲೆ ಹೊತ್ತೊಯ್ದು ಸಂಸ್ಕಾರ ಮಾಡಿದ್ದು, ಇವರು ನಗರ ಸಭೆ ಚೇರ್ಮನ್ ಆಗಿ ನಿಭಾಯಿಸಿದಂತ ಉತ್ತಮ ಜನ ಸೇವೆಯನ್ನು ಮನ್ನಿಸಿ ‘ರಾವ್ ಬ‌ಹುದ್ದೂರ್ ‘ಎಂಬ ಬಿರುದು ಕೊಡಲು ಮುಂದಾದಾಗ ತಣ್ಣಗೆ ನಿರಾಕರಿಸಿದ್ದರು.

ಪೆರಿಯಾರ್ ನಡೆದಾಡಿದ ರೈಲು ನಿಲ್ದಾಣದಲ್ಲಿ ಒಂದು ಸೆಲ್ಫಿ ತೆಗೆದುಕೊಳ್ಳುವುದ ಮರೆಯಲಿಲ್ಲ.

S K. Holiday  lodge ಆವರಣದಲ್ಲಿ. ಆಂಧ್ರಪ್ರದೇಶದ ಸುಂಕಪ್ಪ, ಮಹಾರಾಷ್ಟ್ರಮೋಹನ್, ಭಾಷಾತಜ್ಞರಾದ ಡಾ.ಮಹೇಶ್ವರನ್ ಇವರೊಟ್ಟಿಗೆ ದೀರ್ಘ ಸಂವಾದ ಮಾಡಿದೆವು. ಮೋಹನ್ ಕೊಲ್ಲಾಪುರ ಇವರು ಸ್ವ ಆಸಕ್ತಿಯಿಂದ ದೇಶಾದ್ಯಂತ ಈ ಭಾಷೆ ಮಾತನಾಡುವ ಜನರನ್ನು ಸಂದರ್ಶನಮಾಡಿರುವ ವಿಡಿಯೋ ದಾಖಲಾತಿಯನ್ನು ವೀಕ್ಷಿಸಿದೆವು.

ತಮಿಳುನಾಡಿನಲ್ಲಿ kuravan, siddhanar ಈ ಎರಡು ಜಾತಿಗಳು ಮಾತ್ರ S C ಪಟ್ಟಿಯಲ್ಲಿ ಇದ್ದರೆ ಇನ್ನುಳಿದ  27 ಪರ್ಯಾಯ ಜಾತಿಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಇವೆ. ಇವೆಲ್ಲವೂ ಒಂದೇ ಮೂಲದ  ಬುಡಕಟ್ಟುಗಳಾಗಿದ್ದರೂ ಈ 27 ಜಾತಿಗಳನ್ನು M B C ಮತ್ತು D N C ಗಳಲ್ಲಿ ಆ ಸರ್ಕಾರ ಇಟ್ಟಿವೆ. ಈ ಬುಡಕಟ್ಟುಗಳಿಗೆ ಮೀಸಲಾತಿ ಸೌಲಭ್ಯ ಇರುವುದು ಕೂಡ ಗೊತ್ತಿಲ್ಲ ಎಂದಮೇಲೆ ಅವರನ್ನು ಎಲ್ಲಿಟ್ಟರು ಒಂದೇ ಆಗಿದೆ. ಇಂದಿಗೂ ಇವರಿಗೆ cast certificate ಸಿಗುವುದಿಲ್ಲ ಎಂದು ಹಿರಿಯರಾದ ಸುಂದರ್ ರಾಜ್ ವಿಷಾದಿಸಿದರು.

ಯಾವುದೇ ಕಾರಣಕ್ಕೂ ಹೆಚ್ಚು ಜನಸಂಖ್ಯೆ ಇರುವ ದಲಿತ ಸಮುದಾಯದವರು ನಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ ಎಂದಾಗ ನನಗೆ ನೆನಪಾದದ್ದು ಕನ್ನಡ ನೆಲದ ದಲಿತ ಸಂಘರ್ಷ ಸಮಿತಿ. ಇದರ ಒಡಲಲ್ಲಿದ್ದ ತಾಯಂದಿರಾದ ಬಿ ಕೃಷ್ಣಪ್ಪ, ದೇವನೂರು, ಗುರುಗಳಾದ ಸಿದ್ದಲಿಂಗಯ್ಯ, ಚಂದ್ರಪ್ರಸಾದತ್ಯಾಗಿ,.ಯ ಓ ಶ್ರೀಧರ್, ಕೆ ರಾಮಯ್ಯ, ಎಲ್ ಹನುಮಂತಯ್ಯ, ಕೆಂಪಯ್ಯ, ಜಯರಾಂ, ರುದ್ರಸ್ವಾಮಿ, ಮುಗಿಯದ ಪಟ್ಪಿ‌. ಇವರು ಯಾರೂ ನಮ್ಮನ್ನು ಹೊರಗಿಟ್ಟು ನೋಡಲಿಲ್ಲ ಎಂದು ನನಗೆ ದಸಂಸ ಬಗ್ಗೆ  ಹೆಮ್ಮೆ ಎನಿಸಿತು.

‘ಕರ್ನಾಟಕದ ಕೊರಚರು’ ಮಹಾಪ್ರಬಂಧವನ್ನು ಕೈಗಿಟ್ಟಾಗ      ಕನ್ನಡ ಸ್ವಲ್ಪ ಸ್ವಲ್ಪ ಅರ್ಥವಾಗುತ್ತೆ ಎಂದರು. ಮಹೇಶ್ವರನ್ನ  ನಾನು ಕುಡ್ರ್ ವಾತ ಎಂದಾಗ ಅವರು ಕುಂಡ್ರ್ ಎಂಬ ಪದ ಸಂಗಂನಲ್ಲಿ ಇದೆ ಎಂದು ನೆನಪಿಸಿಕೊಂಡರು. ನಾನು ಭಾಷಾವಿದ್ಯಾರ್ಥಿ ಅಲ್ಲ ಎಂದು ನಕ್ಕೆ. ಅವರು Dr M Selvadurai ಬರೆದಿರುವ   language ans cultural of koraga Tribe  (Ethno–linguistic ).

ಪುಸ್ತಕವನ್ನು ಕೊಟ್ಟರು. ಬೆಳಗಿನ ತಿಂಡಿ ತಿನ್ನದ ನಾನು ಸಹಪ್ರಯಾಣಿಕಳು ಹೇಳಿದ್ದ konguspecial ನೆನಪಾಗಿ ಕೇಳಿದೆ. ಅದಕ್ಕೆ ಡಾ.ಮಹೇಶ್ವರನ್ ಅದು ರೊಂಬ ತೂರಸಾರ್ ಇಂಗೇ Thalapakattu ಬಿರಿಯಾನಿ ಕಡಿಕಿದು ವಾಂಗೊ ಪೊಲಾಂ. ಊಟ ಕೊಡಿಸಿ ನಿಮ್ಮದೇ ಖರ್ಚಿನಲ್ಲಿ ಇಷ್ಟು ದೂರ ಬಂದಿದ್ದಕ್ಕೆ ಧನ್ಯವಾದಗಳು ಎಂದರು. ನನಗಲ್ಲ ಅವರಿಗೆ ಎಂದು ಕೊಲ್ಲಾಪುರದಿಂದ ಬಂಧುಗಳೊಟ್ಟಿಗೆ ಸ್ವಂತ ಕಾರಲ್ಲಿ ಬಂದಿರುವ  Mohan kollapur ಅವರಿಗೆ ಸಲ್ಲಬೇಕೆಂದು, ರಾತ್ರಿ ಬಸ್ ಗಾಗಿ ಕಾದು 10 ಗಂಟೆ ಹೊತ್ತಿಗೆ ಬೆಂಗಳೂರತ್ತ ಹೊರಟೆ.

– ಡಾ.ಸ್ವಾಮಿ ಎಚ್.ಆರ್., ವಿಚಾರವಾದಿಗಳು

Leave a Reply