ಆತ್ಮಸಾಕ್ಷಿಯಾಗಿ ಹೇಗೆ ಹೇಳಿಕೊಳ್ಳುತ್ತಾರೆ ಮುಖ್ಯಮಂತ್ರಿಗಳು?

1 year ago

ನೀಗಿದ ಎಳೆಜೀವವೊಂದರ ಪರವಾದ ಹೋರಾಟದ ಅಂಗವಾಗಿ ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣ-, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆಯಲ್ಲಿ ಇವತ್ತು ನಡೆಯಬೇಕಿದ್ದ ಸಮಾಲೋಚನಾ ಸಭೆಯ ಕಾರ್ಯಕ್ರಮವು ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆಯಂತೆ!

ರಾಜ್ಯ ಗೃಹ ಇಲಾಖೆ ಸದ್ರಿ ಕಾರ್ಯಕ್ರಮವು ನಡೆಯಬಾರದು ಅಂತ ನೋಟಿಸ್ ನೀಡಿ ಹೋರಾಟಗಾರರಿಗೆ ಎಚ್ಚರಿಕೆ ನೀಡಿದೆ. ಕಸಾಪ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಆದೇಶ ಕೊಟ್ಟು ಸದ್ರಿ ಕಾರ್ಯಕ್ರಮ ಮಾಡದಂತೆ ನಿರ್ಬಂಧ ವಿಧಿಸಿದೆ. ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ನೇರ ದಾಳಿ ನಡೆಸಿದೆಯಷ್ಟೆ.

ಈ ಆದೇಶವನ್ನು ನಿನ್ನೆಯ ರಾಹುಲ್ ಗಾಂಧಿಯವರ ಭಾಷಣದ ಮೇಲೆ ನಾವೀಗ ಅವಲೋಕಿಸಬೇಕು. ಫ್ಯಾಸಿಸಮ್ ಯಾವ್ಯಾವ ರೂಪಗಳನ್ನು ತಾಳಿ ತಮ್ಮದೇ ಪಕ್ಷವನ್ನು ಕ್ಯಾನ್ಸರ್ ಕಣವಾಗಿ ಆವರಿಸಿದೆ ಎಂಬ ಕುರಿತು ರಾಹುಲ್ ಈ ಸಂದರ್ಭದಲ್ಲಿ ಯೋಚಿಸುವುದೊಳಿತು ಎಂಬುದು ನನ್ನ ನೇರ ಒತ್ತಾಯ.

ಮಾನ್ಯ ಮುಖ್ಯಮಂತ್ರಿಗಳು ಸರಕಾರಿ ಕಚೇರಿಗಳಲ್ಲಿ ಅಣ್ಣ ಬಸವಣ್ಣನ ಫೋಟೋ ಸ್ಥಾಪಿಸಿದವರು. ಹೋದೆಡೆಯಲ್ಲೆಲ್ಲಾ ಅಂಬೇಡ್ಕರ್ ಬಗ್ಗೆ , ಸಂವಿಧಾನದ ಬಗ್ಗೆ ಮಣಗಟ್ಟಲೆ ಭಾಷಣ ಕೊರೆಯುವವರು. ಸಂವಿಧಾನ ಪೀಠಿಕೆಯನ್ನು ಬಾಯಿಪಾಠ ಮಾಡಿ ಹಾದಿಬೀದಿಗಳಲ್ಲಿ, ಮನೆಮನಗಳಲ್ಲಿ ಉದ್ಧರಿಸಬೇಕು ಎಂದೆಲ್ಲ ಕರೆಯಿತ್ತವರು. ಈಗಿನ ಘಟನೆಯನ್ನು ಉದ್ಧರಿಸಿ ಹೇಳುವುದಾದರೆ,  ಸಂವಿಧಾನವು ಈ ದೇಶದ ಪ್ರಜೆಗಳಿಗೆ ಕೊಡಮಾಡಿದ ಮೂಲಭೂತ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ತಮ್ಮ ಸರಕಾರವೇ ನೇರವಾಗಿ ಕಸಿದುಕೊಂಡಿದೆ ಎಂಬುದನ್ನು ಆತ್ಮಸಾಕ್ಷಿಯಾಗಿ ಹೇಗೆ ಹೇಳಿಕೊಳ್ಳುತ್ತಾರೆ ಮುಖ್ಯಮಂತ್ರಿಗಳು?

But, ಹೇಳಿಕೊಳ್ಳಲೇಬೇಕಿದೆ ತಾನೇ?

ಯಾಕೆ ಈ ಸರಕಾರಕ್ಕೆ ಇಂಥದೊಂದು ದರಿದ್ರ ಸ್ಥಿತಿ ಒದಗಿಬಂತೋ ಆ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣನೇ ಹೇಳಬೇಕು!

ಇನ್ನು ಭಾಷಣ ಮಾಡುವಾಗ, ಬಜೆಟ್ ಮಂಡಿಸುವಾಗ ಕವಿಗಳ ಆದರ್ಶದ ಕೋಟ್‌ಗಳನ್ನು ಉದ್ಧರಿಸಿದರೆ ಸಾಲದು ಮುಖ್ಯಮಂತ್ರಿಗಳೇ! ನಿಮ್ಮ ಕೈಯಳತೆಯಲ್ಲೇ ಕಾಲು ಮುರಿದು ಬಿದ್ದಿರುವ ಕಾನೂನು ಘಟಕಗಳನ್ನು, ನರಸತ್ತ ಇಲಾಖೆಯ ಹೊಣೆಹೊತ್ತ ದರಿದ್ರ ಟೊಣಪಗಳನ್ನು ಎದುರಿಸಿ ಸಂವಿಧಾನದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯಬೇಕೆಂಬ ಕಾಮನ್ ಸೆನ್ಸ್ ನಿಮಗ್ಯಾಕೆ ಇಲ್ಲವಾಯಿತೋ ನನಗಂತೂ ಅರಿಯದಾಗಿದೆ!

ಛೆ! ಏನಾಗಿ ಹೋಯಿತು!!

ಈ ಸರಕಾರ ಬಂದಾಗ ಸಂಭ್ರಮಿಸಿದ ಕವಿ, ಸಾಹಿತಿ, ಕಲಾವಿದರುಗಳೆಲ್ಲರೂ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರಕಾರದ ಆತ್ಮಸಾಕ್ಷಿಗೆ ಇವರೆಲ್ಲ ಬೆರಳ ಬೊಟ್ಟೊಡ್ಡದೇ ಹೋದರೆ ಇವರೆಲ್ಲರ ಸಾಕ್ಷಿಪ್ರಜ್ಞೆಯಂತೂ ಇದ್ದೂ ಸತ್ತಂತೆ ಈ ನೆಲದ ಇತಿಹಾಸದ ಪಾಲಿಗೆ. ಖಂಡಿತ ಕರುನಾಡಿನ ಸಾಂಸ್ಕೃತಿಕ-ಸಾಮಾಜಿಕ ಅಧ್ಯಾಯದ ಪಾಲಿಗೆ ಇದೊಂದು ಕರಾಳ ದುರ್ನೆರಳು.

ಫ್ಯೂಡಲ್ ಹಿತಾಸಕ್ತಿಗಳ ಅಡಿಯಾಳಾದ ಈ  ದರಿದ್ರ ಸರಕಾರದ ಹೀನ ಆಡಳಿತಕ್ಕೆ-  ನೀಗಿದ ಆ ಎಳೆ ಜೀವದ ಗೌರವಾರ್ಥವಾಗಿ, ಮನುಷ್ಯ ಪ್ರಜ್ಞೆಯ ಹಿರಿಮೆಯನ್ನೆತ್ತಿ ಹಿಡಿವ ಕುರುಹಾಗಿ ವಿಷಾದಭರಿತ ಪ್ರತಿಭಟನೆಗಳನ್ನು ದಾಖಲಿಸುತ್ತಿದ್ದೇನೆ.

– ದಿನೇಶ್ ಕುಕ್ಕುಜಡ್ಕ, ಕಾರ್ಟೂನಿಸ್ಟ್

Leave a Reply