ಮಂಗಳೂರು: ಗೇಣಿದಾರ ರೈತರು, ಬೀಡಿ, ಹೆಂಚು ಕಾರ್ಮಿಕರ ಸಮರಶೀಲ ಚಳವಳಿಗಳಿಂದ ಖ್ಯಾತಿ ಪಡೆದಿದ್ದ ಉಳ್ಳಾಲ ತಾಲೂಕಿನಲ್ಲಿ ಇಂದು ಜನ ಸಾಮಾನ್ಯರಿಗೆ ಧ್ವನಿಯೇ ಇಲ್ಲದಂತಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ ಹೇಳಿದರು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಸಿಪಿಐಎಂ ಉಳ್ಳಾಲ ಹಾಗೂ ಮುಡಿಪು ವಲಯ ಸಮಿತಿಗಳು ಎಪ್ರಿಲ್ 29 ರಂದು ದೇರಳೆಕಟ್ಟೆಯಲ್ಲಿ ಹಮ್ಮಿಕೊಂಡಿರುವ ‘ಜನಾಗ್ರಹ ಸಮಾವೇಶ’ ದ ಪ್ರಚಾರಾರ್ಥ ನಡೆಯುತ್ತಿರುವ ಎರಡನೇ ದಿನದ ವಾಹನ ಜಾಥಾವನ್ನು ಕುತ್ತಾರ್ ಜಂಕ್ಷನ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ಸಂಖ್ಯೆಯಲ್ಲಿ ಇರುವ ಮನೆ, ನಿವೇಶನ ರಹಿತರಿಗೆ ಕಳೆದ ಒಂದೂವರೆ ದಶಕದಿಂದ ಒಂದು ವಸತಿ ಯೋಜನೆಯೂ ಜಾರಿಯಾಗಿಲ್ಲ. ಪಂಚಾಯತ್ ಗಳು ಕನಿಷ್ಠ ನಿವೇಶನರಹಿತರ ಪಟ್ಟಿಗಳನ್ನೂ ಸಿದ್ದಪಡಿಸಿಲ್ಲ ಎಂಬುದು ಇಲ್ಲಿನ ಜನಪ್ರತಿನಿಧಿಗಳ ಆದ್ಯತೆಯನ್ನು ಎತ್ತಿತೋರಿಸುತ್ತದೆ ಎಂದರು.
ಬಡವರ, ಶ್ರಮಿಕರ, ಜನ ಸಾಮಾನ್ಯರ ಬೇಡಿಕೆಗಳು ಇಲ್ಲಿನ ರಾಜಕಾರಣದಲ್ಲಿ ಆದ್ಯತೆಯಾಗಿ ಉಳಿದಿಲ್ಲ. ರೈತರ ಕೈಯಲ್ಲಿರುವ ಅಲ್ಪಸ್ವಲ್ಪ ಜಮೀನು ವಿವಿಧ ಕಸರತ್ತುಗಳ ಮೂಲಕ ಅಗ್ಗದ ದರಕ್ಕೆ ರಿಯಲ್ ಎಸ್ಟೇಟ್ ಲಾಬಿಗಳ ಪಾಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನತೆ ತಮ್ಮ ಹಕ್ಕುಗಳಿಗಾಗಿ ಸಂಘಟಿರಾಗಬೇಕಿದೆ. ಮತ್ತೆ ಕೆಂಬಾವುಟ ಹಿಡಿದು ಹಕ್ಕುಗಳಿಗಾಗಿ ಧ್ವನಿ ಎತ್ತಬೇಕಿದೆ ಎಂದು ಕರೆನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉಳ್ಳಾಲ ತಾಲೂಕು ಮರಳು ಕಳ್ಳರ, ಮಣ್ಣು ಕಳ್ಳರ, ಭೂಮಿ ಕಳ್ಳರ, ಧೋ ನಂಬರ್ ವ್ಯವಹಾರ ನಡೆಸುವ ದಂಧೆಕೋರರ ಹಾಗೂ ಎಲ್ಲಾ ಮಾಫಿಯಾಗಳ ಸ್ವರ್ಗವಾಗಿ ಮಾರ್ಪಾಟಾಗಿದೆ. ಮತ್ತೊಂದು ಕಡೆ ಜನಸಾಮಾನ್ಯರ ಅಹವಾಲನ್ನು ಕೇಳುವ ಯಾವ ವ್ಯವಸ್ಥೆಯೂ ಇಲ್ಲವಾಗಿದೆ ಎಂದರು.
ತಾಲೂಕು ರಚನೆಯಾಗಿ 5 ವರ್ಷಗಳು ಕಳೆದರೂ, ತಾಲೂಕು ಕಚೇರಿ, ತಾಲೂಕು ಆಸ್ಪತ್ರೆ, ನ್ಯಾಯಾಲಯ, ಸಬ್ ರಿಜಿಸ್ಟಾರ್ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ಉಳ್ಳಾಲ ತಾಲೂಕಿನ ಅವ್ಯವಸ್ಥೆಗಳ ಬೆಳಕು ಚೆಲ್ಲಿದರು.
ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್ ಜಾಥಾ ತಂಡವನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ CPIM ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟು, ಕೃಷ್ಣಪ್ಪ ಸಾಲ್ಯಾನ್, ಜಯಂತ ನಾಯಕ್, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಶೇಖರ್ ಕುಂದರ್, ಪದ್ಮಾವತಿ ಶೆಟ್ಟಿ, CPIM ವಲಯ ಮುಖಂಡರಾದ ರಿಜ್ವಾನ್ ಹರೇಕಳ, ರಜಾಕ್ ಮುಡಿಪು, ರೋಹಿದಾಸ್ ಭಟ್ನಗರ, ಪ್ರಮೋದಿನಿ ಕಲ್ಲಾಪು, ಸುಂದರ ಕುಂಪಲ, ಇಬ್ರಾಹಿಂ ಅಂಬ್ಲಮೊಗರು, ಜನಾರ್ದನ ಕುತ್ತಾರ್, ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಅಡ್ಯಂತಾಯ ಮುಂತಾದವರು ಭಾಗವಹಿಸಿದ್ದರು.


