ಖೈದಿಗಳಿಗೆ, ಉಗ್ರರಿಗೆ ಅಕ್ರಮವಾಗಿ ಮೊಬೈಲ್‌ಗಳನ್ನು ಪೂರೈಸಿದ ಡಾ.ನಾಗರಾಜ್ 

10 months ago

ಬೆಂಗಳೂರು: ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್ ನೂರಾರು ಖೈದಿಗಳಿಗೆ ಹಾಗೂ ಉಗ್ರರಿಗೆ ಅಕ್ರಮವಾಗಿ ನೂರಾರು ಮೊಬೈಲ್‌ಗಳನ್ನು ಪೂರೈಕೆ ಮಾಡುತ್ತಿದ್ದ ಆತಂಕಕಾರಿ ಸಂಗತಿ ತನಿಖೆ ಬಹಿರಂಗಗೊಂಡಿದೆ.

ಜೈಲಿನೊಳಗೆ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್, ತನ್ನ ಸಹಾಯಕಿ ಪವಿತ್ರ ಸಹಾಯದಿಂದ ಜೈಲಿಗೆ ಸ್ಕೂಟರ್ ನಲ್ಲಿ ಮೊಬೈಲ್ ಸಾಗಿಸಿ, 10 ಸಾವಿರ ಮೌಲ್ಯದ ಮೊಬೈಲ್ ನ್ನು 50 ಸಾವಿರಕ್ಕೆ ಖೈದಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಮೊಬೈಲ್‌ಗಳು ನೇರವಾಗಿ ಶಂಕಿತ ಉಗ್ರಗಾಮಿಗಳು, ಡ್ರಗ್ ಪೆಡ್ಲರ್‌ಗಳು ಮತ್ತು ರೌಡಿಶೀಟರ್‌ಗಳ ಕೈ ಸೇರಿರುವುದು ಎನ್ ಐಎ ತನಿಖೆಯಲ್ಲಿ ಪತ್ತೆಯಾಗಿದೆ.

ಜೈಲಿನಲ್ಲಿರುವ 100ಕ್ಕೂ ಹೆಚ್ಚು ಖೈದಿಗಳು  ಜೊತೆಗೆ ಶಂಕಿತ ಉಗ್ರರು, ಡ್ರಗ್ ಪೆಡ್ಲರ್ ಗಳಿಗೂ ಡಾ.ನಾಗರಾಜ್ ಮೊಬೈಲ್ ಪೂರೈಕೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದ್ದು, ಮೊಬೈಲ್ ಖರೀದಿಸಿರುವ ಜೈಲುವಾಸಿಗಳ ಪಟ್ಟಿ‌ಮಾಡಿ ಅವುಗಳನ್ನು ಜಪ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಅಕ್ರಮವಾಗಿ ಮೊಬೈಲ್ ಮಾರಾಟ ಮಾಡಿ ಲಕ್ಷಾಂತರ ಹಣವನ್ನು ಡಾ.ನಾಗರಾಜ್ ಗಳಿಸಿರುವುದು ಕಂಡುಬಂದಿದ್ದು,ಆತನ ಮನೆ ಮೇಲೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.

ರಾಜ್ಯ ಮತ್ತು ದೇಶಕ್ಕೆ ಬೇಕಾಗಿರುವ ಪ್ರಮುಖ ಉಗ್ರರು ಮತ್ತು ಅಪರಾಧಿಗಳನ್ನು ಸೆರೆ ಹಿಡಿದು ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ. ಹೀಗಾಗಿ ರಾಜ್ಯದ ಅತ್ಯಂತ ಭದ್ರ ಜೈಲು ಎಂದು ಇದನ್ನು ಪರಿಗಣಿಸಲಾಗಿದೆ. ಆದರೆ, ಇಂತಹ ಜೈಲಿನೊಳಗೆ ವೈದ್ಯಕೀಯ ಸೇವಕನಾಗಿ ಕಾರ್ಯನಿರ್ವಹಿಸುತ್ತಿರುವ ಈ ಡಾ.ನಾಗರಾಜ್ ನೇರವಾಗಿ ಅಪರಾಧಿಗಳಿಗೆ ದೇಶದ ವಿರುದ್ಧವೇ ಕುಕೃತ್ಯ ನಡೆಸಲು ನೆರವು ನೀಡುತ್ತಿದ್ದಾರೆ ಎಂಬುದು ಭದ್ರತಾ ವ್ಯವಸ್ಥೆಯ ವಿಫಲತೆಗೆ ಸಾಕ್ಷಿಯಾಗಿದೆ.

Leave a Reply